ದಾವಣಗೆರೆ: ‘ಮಹಿಳೆ ಅಡುಗೆ ಮಾಡಲು ಮಾತ್ರ ಲಾಯಕ್ಕು ಎಂದು ನಾನೂ ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಸ್ಪಷ್ಟನೆ ನೀಡಿದ್ದಾರೆ.
ಬ್ಯಾಡ್ಮಿಂಟನ್ ಮಾಜಿ ಆಟಗಾರ್ತಿ, ಬಿಜೆಪಿ ನಾಯಕಿ ಸೈನಾ ನೆಹ್ವಾಲ್ ಅವರು ‘ಎಕ್ಸ್’ ಖಾತೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸಹಾಯಕ ಚುನಾವಣಾಧಿಕಾರಿಯವರು ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಈ ಲಿಖಿತವಾಗಿ ಸ್ಪಷ್ಟಪಡಿಸಿದ್ದಾರೆ.
‘ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಛಾಪು ಮೂಡಿಸಿದ್ದಾರೆ. ಮಹಿಳೆಯರು ಅಡುಗೆ ಮನೆಗೆ ಸೀಮಿತವಲ್ಲ ಎಂಬುದನ್ನು ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಸಾಬೀತುಪಡಿಸಿದ್ದಾರೆ. ಅದೇರೀತಿ, ದಾವಣಗೆರೆ ಕ್ಷೇತ್ರದಲ್ಲೂ ಮಹಿಳೆಯರೇ ಸ್ಪರ್ಧಿಸಿದ್ದಾರೆ. ನಿಮ್ಮ ಸಮಸ್ಯೆಯನ್ನು ದೆಹಲಿಯವರೆಗೆ ತಲುಪಿಸುವಂಥವರಿಗೆ ಮತ ನೀಡಿ ಎಂದು ಹೇಳಿದ್ದೇನೆ. ನನ್ನ ವಿರೋಧಿಗಳು ತಪ್ಪು ಅರ್ಥ ಕಲ್ಪಿಸಿ ಮಾಧ್ಯಮಗಳಲ್ಲಿ ಹರಿಯಬಿಟ್ಟಿದ್ದಾರೆ’ ಎಂದು ಅವರು ಹೇಳಿದ್ದಾರೆ.