ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜನರ ಆಶೀರ್ವಾದವಿದ್ದರೆ ರಾಮನಗರದಿಂದ ನಿಖಿಲ್ ಸ್ಪರ್ಧೆ: ಎಚ್‌.ಡಿ ದೇವೇಗೌಡ

ಇನ್ನು ಮಂಡ್ಯದಿಂದ ನಿಖಿಲ್‌ ಸ್ಪರ್ಧೆ ಮಾಡುವುದಿಲ್ಲ ಎಂದೂ ಸ್ಪಷ್ಟಪಡಿಸಿದ ಜೆಡಿಎಸ್‌ ವರಿಷ್ಠ
Published : 3 ಮಾರ್ಚ್ 2020, 12:19 IST
ಫಾಲೋ ಮಾಡಿ
Comments

ರಾಮನಗರ: ‘ಇಲ್ಲಿನ ಜನರ ಆಶೀರ್ವಾದ ಇದ್ದರೆ ಮುಂದೊಂದು ದಿನ ನಿಖಿಲ್‌ ರಾಮನಗರದಿಂದಲೇ ಸ್ಪರ್ಧೆ ಮಾಡಬಹುದು’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹೇಳಿದರು.

ಜಾನಪದ ಲೋಕದ ಬಳಿ ಮದುವೆ ಸಿದ್ಧತೆ ಕಾರ್ಯಗಳನ್ನು ಮಂಗಳವಾರ ಪರಿಶೀಲಿಸಿ ಅವರು ಮಾತನಾಡಿದರು. ‘ನಮ್ಮ ಕುಟುಂಬಕ್ಕೆ ಹಾಸನ ಜಿಲ್ಲೆ ಜನ್ಮ ಕೊಟ್ಟಿದೆಯಾದರೂ ನಮಗೆ ರಾಜಕೀಯ ಜನ್ಮ ಕೊಟ್ಟಿದ್ದು ರಾಮನಗರ. ರೇವಣ್ಣ, ಪ್ರಜ್ವಲ್‌ ಹಾಸನಕ್ಕೆ ಸೀಮಿತವಾಗಿದ್ದಾರೆ. ನಾನು ರಾಮನಗರದಿಂದಲೇ ಮುಖ್ಯಮಂತ್ರಿ ಹಾಗೂ ನಂತರ ಪ್ರಧಾನಿ ಆದವನು. ಕುಮಾರಸ್ವಾಮಿ ಇಲ್ಲಿಂದಲೇ ಮುಖ್ಯಮಂತ್ರಿ ಆದವರು. ಹೀಗಾಗಿ ಜನರು ಬಯಸಿದರೆ ನಿಖಿಲ್‌ ಸ್ಪರ್ಧಿಸುವುದರಲ್ಲಿ ತಪ್ಪೇನಿಲ್ಲ. ಮಂಡ್ಯಕ್ಕೆ ಅವರು ಆಕಸ್ಮಿಕವಾಗಿ ಹೋದರೆ ಹೊರತು ಅಲ್ಲಿ ಬೆಳೆಯಲು ಅಲ್ಲ. ಮತ್ತೆ ಅವರು ಅಲ್ಲಿ ಸ್ಪರ್ಧಿಸುವುದಿಲ್ಲ’ ಎಂದರು.

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿ ‘ರಾಮನಗರದಲ್ಲಿ ನಿಖಿಲ್‌ ಮದುವೆ ನಡೆದಿರುವುದಕ್ಕೂ, ಆತನ ರಾಜಕೀಯ ಬದುಕಿಗೂ ಸಂಬಂಧ ಇಲ್ಲ. ಇದು ನನ್ನ ವೈಯಕ್ತಿಕ ನಿರ್ಧಾರ’ ಎಂದು ಸ್ಪಷ್ಟನೆ ನೀಡಿದರು. ‘ರಾಮನಗರದಿಂದ ನಿಖಿಲ್ ಸ್ಪರ್ಧೆ ಬಗ್ಗೆ ನಾನು ಯಾವುದೇ ಚಿಂತನೆ ಮಾಡಿಲ್ಲ. ಹಿಂದೆ ಮಂಡ್ಯದಲ್ಲಿ ನಿಲ್ಲಿಸಲು ನನಗೆ ಮನಸ್ಸಿರಲಿಲ್ಲ. ಆದರೆ ಕಾರ್ಯಕರ್ತರ ಒತ್ತಡಕ್ಕೆ ಮಣಿದು ನಿಲ್ಲಿಸಿದ್ದೆ’ ಎಂದರು.

‘ಪಕ್ಷ ಬಲವರ್ಧನೆ ವಿಚಾರದಲ್ಲಿ ಪ್ರಶಾಂತ್‌ ಭೂಷಣ್‌ ಜೊತೆ ಇನ್ನೂ ನೇರವಾಗಿ ಮಾತನಾಡಲು ಆಗಿಲ್ಲ. ಮದುವೆ ನಂತರ ಅವರ ಜೊತೆ ಚರ್ಚಿಸುತ್ತೇನೆ’ ಎಂದರು. ಮಧು ಬಂಗಾರಪ್ಪ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಲು ದೇವೇಗೌಡರು ಹಾಗೂ ಕುಮಾರಸ್ವಾಮಿ ನಿರಾಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT