ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಚರ್ಚೆ: ಒಂದಾಗಿ ಬಾಳುವ ಆಶಯಕ್ಕೆ ವ್ಯತಿರಿಕ್ತ

Last Updated 4 ಫೆಬ್ರುವರಿ 2022, 19:31 IST
ಅಕ್ಷರ ಗಾತ್ರ

‘ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು’ ಅಂದ ದೇವನೂರ ಮಹಾದೇವ ಅವರು, ‘ಅಕ್ಷರ ಕಲಿತಿದ್ದರಿಂದಲೇ ನಾನು ಸಂಕಷ್ಟಕ್ಕೆ ಈಡಾದೆ’ ಅಂತಲೂ ಸಂದರ್ಶನವೊಂದರಲ್ಲಿ ಹೇಳಿದ್ದರು. ಈ ಸಂಕಟ ಮತ್ತು ದ್ವಂದ್ವ ನಮ್ಮ ಹೃದಯವನ್ನು ಕಲಕಿದಂತಿಲ್ಲ.

ಉನ್ನತ ಶಿಕ್ಷಣದ ಸಮಸ್ಯೆಗಳು ಸಾವಿರ ಇವೆ! ಅದರ ನಡುವೆ ಕೋವಿಡ್-19 ಹರಡುವಿಕೆ, ರೂಪಾಂತರಿತ ಕೊರೊನಾ ತಳಿ ಓಮೈಕ್ರಾನ್ ಬಾಧೆಯ ತುರ್ತು ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳ ಬದುಕಿನ ಅಮೂಲ್ಯ ಎರಡು ವರ್ಷಗಳು ಕಳೆದುಹೋಗಿವೆ. ಶೈಕ್ಷಣಿಕ ಚಟುವಟಿಕೆಗಳು ಸುಮಾರು ಹತ್ತು ವರ್ಷಗಳಷ್ಟು ಹಿಂದಕ್ಕೆ ಹೋದಂತಾಗಿದೆ ಎನ್ನುತ್ತಾರೆ ತಜ್ಞರು. ಧಾರ್ಮಿಕ ಲಾಂಛನಗಳನ್ನು ಧರಿಸುವುದಾಗಿ ಹಟ ಹಿಡಿದು ಸಲ್ಲದ ವಿವಾದ ಸೃಷ್ಟಿಸಲು ಹೊರಟವರಿಗೆ ಇದರ ಪರಿವೆ ಇದೆಯೇ?

ಕೋವಿಡ್ ಸಂಕಷ್ಟದ ಮಧ್ಯೆಯೂ ಶಾಲಾ-ಕಾಲೇಜುಗಳಿಗೆ ಸ್ವಂತ ಖರ್ಚಿನಲ್ಲಿ ಸುಣ್ಣ-ಬಣ್ಣ ಬಳಿದವರಿದ್ದಾರೆ. ಗ್ರಂಥ ಜೋಳಿಗೆ ಮೂಲಕ ಗ್ರಂಥಾಲಯಗಳನ್ನು ಮಕ್ಕಳಿಗಾಗಿ ಸಮೃದ್ಧಗೊಳಿಸಿದವರಿದ್ದಾರೆ. ಶಾರದೆಯ ತಾಣವನ್ನು ಕಲಿಕಾಸ್ನೇಹಿ ಆಗಿಸುವಲ್ಲಿ, ಅನೇಕ ಸುಮನಸ್ಸುಗಳು ತನು, ಮನ ಹಾಗೂ ಧನ ವಿನಿಯೋಗಿಸಿ ದುಡಿದಿವೆ. ಅನೇಕ ಮಕ್ಕಳ ಫೀ ಕೂಡ ಕಟ್ಟಿದ್ದಾರೆ. ಅಲ್ಲಿ ಕಲಿಯಲು ಬಯಸುವ ಮಕ್ಕಳ ಜಾತಿ, ಮತ, ಧರ್ಮದ ಹಿನ್ನೆಲೆಯನ್ನು ಇವರಾರೂ ಗಣನೆಗೆ ತೆಗೆದುಕೊಂಡಿಲ್ಲ. ‘ಎಲ್ಲ ಮಕ್ಕಳೂ ನಮ್ಮವೇ’ ಎಂಬ ನಿಸ್ವಾರ್ಥ ಭಾವ ಮೆರೆದಿದ್ದಾರೆ.

ದುರ್ದೈವ. ಈ ನೈಜ ಕಾಳಜಿಗಳನ್ನು ಕ್ಷುಲ್ಲಕೀಕರಿಸುವಂತೆ, ಕೆಲ ವಿವಾದಪ್ರಿಯರು ಕಾಲೇಜಿಗೆ ಪ್ರವೇಶ ಪಡೆದ ಒಂದೇ ಕಾರಣದಿಂದ, ಧಾರ್ಮಿಕ ಲಾಂಛನಗಳು ಮತ್ತು ಸಮವಸ್ತ್ರೇತರ ಉಡುಪಿನಿಂದ ಶಾರದೆಯ ತಾಣವನ್ನು ಸುದ್ದಿಯ ಮೂಲವಾಗಿಸಿದ್ದಾರೆ. ವಿಘ್ನಸಂತೋಷಿಗಳು.

ನಮ್ಮ ಹಿರೀಕರಿಗೆ ಮೌಲ್ಯಗಳು ಚರ್ಮವಾಗಿದ್ದವು. ಅವುಗಳನ್ನೀಗ ಸಂಕೇತಗಳ ಮಟ್ಟಕ್ಕೆ ಇಳಿಸಿ, ಕೇವಲ ನಾಲಗೆಯಾಗಿಸಿದ್ದೇವೆ. ನಡೆ-ನುಡಿಯಲ್ಲಿ ಏಕತೆ ಸಾಧಿಸಿದ್ದ ಹಿರಿಯರನ್ನು ಪುತ್ಥಳಿಗೆ ಸೀಮಿತಗೊಳಿಸಿ, ಅವರ ಆದರ್ಶಗಳನ್ನು ಗಾಳಿಗೆ ತೂರಿದ್ದೇವೆ. ಕೇಳಿಸಿಕೊಳ್ಳುವ ವಿವೇಕವೂ ಮರೆಯಾದಂತಾಗಿದೆ. ದರ್ಶನವಿಲ್ಲದ ಪ್ರದರ್ಶನ ಈಗಿನ ಸಾಧನೆ. ಈ ಹಿಂದೆ ಎಂದಿಗೂ ಕಾಣದಿದ್ದ ಈ ಪ್ರದರ್ಶನದ ವ್ಯಸನ ಈಗ ಏಕಾಏಕಿ ಸೃಷ್ಟಿಯಾಗಿದ್ದಾದರೂ ಎಲ್ಲಿಂದ?

‘ಹಿಜಾಬ್, ಬುರ್ಖಾ ಅಥವಾ ಕೇಸರಿ ಶಾಲು ಧರಿಸುವುದರಿಂದ ಕಲಿಕೆಯ ಮೌಲ್ಯವೇನಾದರೂ ವೃದ್ಧಿಸಲಿದೆಯೇ? ಓದಿನ ಹಸಿವುಳ್ಳವರಿಗೆ ಈ ಅನಗತ್ಯದ ಬೆಳವಣಿಗೆ ನೆಮ್ಮದಿಯ ಪರಿಸರ ಉಳಿಸುವುದೇ? ಕಾಲೇಜಿನ ಶೈಕ್ಷಣಿಕ ವಾತಾವರಣವೂ ಕದಡಿ ಹೋಗುವುದಿಲ್ಲವೇ? ಪಾಲಕರ ಆತಂಕವೂ ಹೆಚ್ಚುವುದಿಲ್ಲವೇ? ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ವಿವಾದ ಸೃಷ್ಟಿಸಿದ್ದು ಹೊಟ್ಟೆ ತುಂಬಿದವರ ಹುಂಬತನ.

ಕಾಲೇಜಿನ ಆವರಣದಾಚೆಗೆ ಬೇಕಾದ ಉಡುಪು ಧರಿಸಲು ಯಾರ ಅಡ್ಡಿಯೂ ಇಲ್ಲ (ಈ ಹಿಂದೆ ಹಿಜಾಬ್‌ ಧರಿಸಿ ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿನಿಯರು, ಕಾಲೇಜಿಗೆ ಬಂದೊಡನೆ ಅದನ್ನು ತೆಗೆದಿಟ್ಟು ವಸ್ತ್ರಸಂಹಿತೆ ಪಾಲಿಸುತ್ತಿದ್ದರು). ಆದರೆ, ಈಗ ತಮಗೆ ಬೇಕಾದಂತೆ ಉಡುಪು ಧರಿಸಿ ವಿದ್ಯಾಸಂಸ್ಥೆಯ ಆವರಣದಲ್ಲೇ ಓಡಾಡಬೇಕು, ತರಗತಿ ಕೋಣೆಗೂ ಪ್ರವೇಶಿಸಬೇಕು ಎಂಬ ಹಟದ ಹಿಂದೆ ಯಾರಿದ್ದಾರೆ? ಸದುದ್ದೇಶವಂತೂ ಈ ನಡೆಯ ಹಿಂದಿಲ್ಲ. ನಾವು ಕೇಸರಿ ಶಾಲು ಹೊದ್ದು ಬರುತ್ತೇವೆ ಎನ್ನುವ ಹಟವನ್ನೂ ಒಪ್ಪಲಾಗದು. ಎರಡೂ ಬದಿಯವರಿಗೆ ಕೇವಲ ಹಟ ಮತ್ತು ಪ್ರತಿಷ್ಠೆ ಅಷ್ಟೆ.

‘ನಾವೆಲ್ಲ ಒಂದು; ನಾವೆಲ್ಲ ಬಂಧು. ಕೂಡಿ ಕಲಿಯೋಣ. ಕೂಡಿ ಬಾಳೋಣ’ ಎಂಬ ನಿಹಿತಾರ್ಥ ಮೈಗೂಡಿಸಲು, ವಸ್ತ್ರ ಸಂಹಿತೆಯನ್ನು ಕಡ್ಡಾಯಗೊಳಿಸಲಾಗಿದೆ. ಸಮಾನತೆಯನ್ನು ಸಾಧಿಸುವ ಉದಾತ್ತ ಕಲ್ಪನೆ ಅದರಲ್ಲಡಗಿದೆ. ಪ್ರವೇಶ ಪಡೆಯುವಾಗ ಒಪ್ಪಿ, ಬಳಿಕ ಸ್ವೇಚ್ಛೆಗೆ ಇಳಿಯುವುದು ವಿದ್ಯಾರ್ಥಿಯ ಲಕ್ಷಣವಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ ಮತೀಯ ಹುಚ್ಚಾಟಗಳಿಗೆ ಅವಕಾಶವಿಲ್ಲ. ಮೇಲಾಗಿ ಈ ಅಟಾಟೋಪಗಳಿಗೆ ಅದು ಸೂಕ್ತ ಜಾಗವೂ ಅಲ್ಲ. ವಿದ್ಯಾಸಂಸ್ಥೆಗಳು ವಾಸ್ತವವಾಗಿ, ಮತಗಳ ಹೊಟ್ಟು ತೂರಿ, ಎಲ್ಲ ತತ್ವಗಳ ಎಲ್ಲೆ ಮೀರಿ ಮಾನವತೆಯನ್ನು ಅರಳಿಸುವ ತಾಣಗಳು. ಅವುಗಳನ್ನು ಧಾರ್ಮಿಕ ಚೌಕಟ್ಟಿಗೆ ಇಳಿಸುವ ಪ್ರಯತ್ನ ಬಾಲಿಶವಾದುದು. ನಾವೆಲ್ಲ ಭಾರತಾಂಬೆಯ ಮಕ್ಕಳು ಎನ್ನುವ ಭಾವ ವಿದ್ಯಾರ್ಥಿ ಸಮುದಾಯದಿಂದ ವ್ಯಕ್ತವಾಗಬೇಕೇ ವಿನಾ ನಾವು ಈ ಧರ್ಮದಿಂದ ಬಂದವರು ಎಂದಲ್ಲ.

ಕೂಡಿ ಓದುವ ಮಹತ್ವವನ್ನು ಮನಗಾಣಲಾಗದಿದ್ದರೆ, ಭಿನ್ನ ಹಾದಿಯೇ ಮಹತ್ವದ್ದು ಎನಿಸಿದರೆ, ಅವರ ಮತ, ಪಂಥ, ಸಂಪ್ರದಾಯ ಅಥವಾ ಧರ್ಮದವರು ನಡೆಸುವ ಹಾಗೂ ಅಪೇಕ್ಷೆಯ ವಸ್ತ್ರ ತೊಟ್ಟು ಹೋಗಲು ಅವಕಾಶ ಇರುವ ಶಿಕ್ಷಣ ಸಂಸ್ಥೆಗೆ ಪ್ರವೇಶ ಪಡೆದುಕೊಳ್ಳುವುದು ಶ್ರೇಯಸ್ಕರ. ಅಂತಹ ಸಂಸ್ಥೆಗಳು ಸಾಕಷ್ಟಿವೆ ಕೂಡ. ಎಲ್ಲರೂ ಕೂಡಿ ಓದುವ ಕಾಲೇಜಿನಲ್ಲಿ ಪ್ರವೇಶ ಪಡೆದು, ಇಂತಹ ಅನಗತ್ಯ ವಿವಾದ ಸೃಷ್ಟಿಸುವ ಉದ್ಧಟತನ ಬೇಕಾಗಿಲ್ಲ.

ವಿವೇಕ ಮತ್ತು ವ್ಯಕ್ತಿತ್ವದ ನಡುವಿನ ಸಂಕಟ ಮತ್ತು ದ್ವಂದ್ವಕ್ಕೆ ‘ನಡವಳಿಕೆ’ ಎನ್ನುವುದಾದರೆ, ಜಡವನ್ನು ಚೈತನ್ಯಗೊಳಿಸುವ ಮನುಷ್ಯ ಪ್ರಯತ್ನವೇ ಅಧ್ಯಾತ್ಮ. ಇದೇ ಬದುಕಿನ ಕಲೆ. ಆತ್ಮದೃಷ್ಟಿ, ಮಾನವೀಯತೆ, ಔದಾರ್ಯ, ಪರಧರ್ಮ ಸಹಿಷ್ಣುತೆ. ನಮ್ಮ ಆಚಾರಗಳನ್ನೆಲ್ಲ ಮನೆಗೆ ಸೀಮಿತಗೊಳಿಸಿ, ಹೊರಗೆ ಇತರರೊಂದಿಗೆ ಸಮಾನವಾಗಿ, ಸಾಮರಸ್ಯದಿಂದ ಬದುಕಲು ತಾನೆ ನಮ್ಮ ಹಿರಿಯರು ಹೇಳಿಕೊಟ್ಟಿದ್ದು. ಆ ವಿವೇಕದ ಎಳೆ ಈಗೇಕೆ ಕತ್ತರಿಸಿ ಹೋಗಿದೆ?

ಮಕ್ಕಳಲ್ಲಿ ನೈತಿಕ ಪ್ರಜ್ಞೆ ಮೂಡಿಸುವುದು ಅಧ್ಯಾಪಕರ ಜವಾಬ್ದಾರಿ. ಪೊಲೀಸ್ ನಿಯಮ, ಕೋರ್ಟ್‌ಗಳ ಕಾನೂನಿಗಿಂತ, ಈ ನೈತಿಕ ಕಟ್ಟಳೆ ಮಕ್ಕಳನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಯಾವತ್ತೂ ಪ್ರೇರೇಪಿಸಿದೆ.

ರಾಷ್ಟ್ರಭಕ್ತಿ ಗೀತೆ ನಮ್ಮಲ್ಲಿ, ರಾಷ್ಟ್ರದೇವೋಭವ ಎಂಬ ವಿವೇಕವನ್ನು ಜಾಗೃತವಾಗಿರಿಸಿದೆ. ದೇಶ ಮೊದಲು; ಆ ಬಳಿಕ ಎಲ್ಲವೂ, ಎಂಬ ವಿನೀತ ಭಾವವನ್ನು ಸ್ವಭಾವವಾಗಿಸಿದೆ. ಇಲ್ಲಿ ಬೆಸೆಯುವ ಮತ್ತು ಬೆರೆಯುವ ಭಾವವನ್ನು ಉದ್ದೀಪಿಸುವ ಶ್ರದ್ಧೆಯ ಪ್ರಯತ್ನವಿದೆ. ಇಂದು ಉಡುಪು, ನಾಳೆ ಶಾಲೆ-ಕಾಲೇಜುಗಳಲ್ಲೂ ಧಾರ್ಮಿಕ ಪ್ರಾರ್ಥನೆ ಕಡ್ಡಾಯಗೊಳಿಸಬೇಕಾದ ಅನಿವಾರ್ಯವೂ ಸೃಷ್ಟಿಯಾಗಬಹುದು!

ಆ ವಯೋಮಾನದಲ್ಲಿ ತುಂಬ ಶಕ್ತಿ ಸಂಚಯವಾಗುವ ಮಕ್ಕಳನ್ನು ಏಕಾಗ್ರಗೊಳಿಸಿ, ತೊಡಗಿಸುವುದೇ ದೊಡ್ಡ ಸವಾಲು! ಅವರು ಮನೆಯಲ್ಲಿ ಯಾರ ಮಾತು ಕೇಳದಿದ್ದರೂ, ಮೇಷ್ಟ್ರ ಮಾತು ಮೀರುವುದಿಲ್ಲ. ಆ ಗೌರವ, ಭಯ-ಭಕ್ತಿ, ಪ್ರೀತಿ ಮತ್ತು ಅಂತಃಕರಣದ ಮುಂದೆ ಯಾವ ಕಾಯ್ದೆಯೂ ನಿಲ್ಲದು. ಬಾಹ್ಯ ಒತ್ತಡಗಳು ಬೇಡದ ಬೆಳವಣಿಗೆಗಳಿಗೆ ಇಂಬು ನೀಡುತ್ತಿವೆ. ಬಾಹ್ಯ ಒತ್ತಡಗಳು ನಮ್ಮ ಸಂಬಂಧಗಳ ಆವರಣ ಭೇದಿಸಿ, ಇರಿಸು-ಮುರಿಸಿಗೆ ಕಾರಣವಾಗುತ್ತವೆ. ಆ ಹುನ್ನಾರದ ಭಾಗವಾಗಿ ನಮ್ಮ ಮಕ್ಕಳು ಅಸ್ತ್ರವಾಗಿ ಬಳಕೆಯಾಗುತ್ತಾರೆ. ಪರಸ್ಪರ ಸಂವಾದಕ್ಕೆ ಆಸ್ಪದವಿರದಂತಹ ವಾತಾವರಣ ನಿರ್ಮಾಣ ಆಗುತ್ತಿರುವುದು ದುರಂತ.

ಜಾತಿ, ಧರ್ಮ, ನಂಬಿಕೆ, ನಡೆ, ಆಚರಣೆ ಮತ್ತು ಧರ್ಮದ ಲಾಂಛನಗಳು ಯಾವ ಗೋಡೆಯನ್ನೂ ನಿರ್ಮಿಸಲಾರದಂತಹ ಶೈಕ್ಷಣಿಕ ವಾತಾವರಣ ಇಂದಿನ ಅಗತ್ಯವಾಗಿದೆ.

ಮನೆಯ ಹೊಸ್ತಿಲಿನಾಚೆ ನಾವು ಹೆಜ್ಜೆ ಇಡುವಾಗ, ಎಲ್ಲರೊಳು ಒಂದಾಗಿ ಬದುಕಬೇಕೆನ್ನುವ ಸಾಮಾಜಿಕ ಜವಾಬ್ದಾರಿ ಖಂಡಿತ ಮುನ್ನೆಲೆಗೆ ಬರಬೇಕು. ನಡೆ-ನುಡಿಯಲ್ಲಿ ಏಕತೆ ಸಾಧಿಸಿದಾಗ ಮಾತ್ರ ಅದು ಸಾಧ್ಯವೇ ಹೊರತು ಧಾರ್ಮಿಕ ಲಾಂಛನ, ಶಾಸ್ತ್ರೀತನದಿಂದಲ್ಲ. ಹೀಗಾಗಿ, ತಿಳಿವಳಿಕೆ ಮತ್ತು ನಡವಳಿಕೆಯ ಮಧ್ಯೆ ನಿರ್ಮಾಣವಾದ ಕಂದರವನ್ನು ಇಲ್ಲವಾಗಿಸುವ ಕೆಲಸವನ್ನು ಸಮಾಜವೇ ಮಾಡಬೇಕಿದೆ.

ಅಕ್ಷರಗಳು ಕೇವಲ ‘ಮುಖೋದ್ಗತ’ವಾಗುತ್ತಿವೆ. ಪಡೆದ ಶಿಕ್ಷಣ ನಮಗೆ ‘ಹೃದ್ಗತ’ವಾಗದಿದ್ದರೆ ತಕ್ಕ ಮಣ್ಣಿನ ತೇವಕ್ಕಾಗಿ ಕಾಯ್ದಿರುವ ಬೀಜವಷ್ಟೆ! ಓದು ನಮ್ಮ ಆತ್ಮೋದ್ಧಾರಕ್ಕೆ; ಲೋಕೋಪಕಾರಕ್ಕಲ್ಲ.

ಲೇಖಕ: ಅಧ್ಯಾಪಕ, ಅಭ್ಯುದಯ ಪರ್ತಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT