ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಕಚ್ಚಾಡುವುದಕ್ಕೆ ಜನ ಮತ ನೀಡಿಲ್ಲ, ಸದನದ ಗೌರವ ಉಳಿಸಿ

Last Updated 17 ಫೆಬ್ರುವರಿ 2022, 20:38 IST
ಅಕ್ಷರ ಗಾತ್ರ

ರಾಷ್ಟ್ರಧ್ವಜಕ್ಕೆ ಸಂಬಂಧಿಸಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ನೀಡಿದ್ದ ಹೇಳಿಕೆ ವಿಧಾನ
ಮಂಡಲದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಸಚಿವ ಈಶ್ವರಪ್ಪ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಮಾತಿನ ಚಕಮಕಿ, ವೈಯಕ್ತಿಕ ನಿಂದನೆಯೂ ನಡೆದಿದೆ. ಪರಸ್ಪರ ಏಕವಚನದಲ್ಲಿ ಬೈದಾಡಿಕೊಂಡ ಈ ಇಬ್ಬರು ತೋಳೇರಿಸಿಕೊಂಡು ಹೊಡೆದಾಟಕ್ಕೂ ಮುಂದಾಗಿದ್ದರು. ಇದೇ ವಿಷಯ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ವಾಗ್ವಾದಕ್ಕೂ ಕಾರಣವಾಗಿ ಉಭಯ ಸದನಗಳ ಕಲಾಪ ಬಲಿಯಾಗಿದೆ.

ಈಶ್ವರಪ್ಪ ಮತ್ತು ಶಿವಕುಮಾರ್ ಇಬ್ಬರೂ ವಿಧಾನಸಭೆಯ ಹಿರಿಯ ಸದಸ್ಯರು. ಈಶ್ವರಪ್ಪ ಉಪಮುಖ್ಯಮಂತ್ರಿಯಾಗಿದ್ದವರು. ಸದನದ ಸದಸ್ಯರಾಗಿ ದಶಕಗಳ ಅನುಭವ ಹೊಂದಿದ್ದಾರೆ. ಶಿವಕುಮಾರ್ ಕೂಡ ಸಚಿವರಾಗಿ, ಶಾಸಕರಾಗಿ ದೀರ್ಘ ಕಾಲದಿಂದ ಕೆಲಸ ಮಾಡಿದವರು. ಈ ಇಬ್ಬರ ನಡವಳಿಕೆಯು ಯುವ ಶಾಸಕರಿಗೆ ಮಾದರಿಯಾಗುವಂತೆ ಇರಬೇಕು. ಆದರೆ ಬುಧವಾರ ಅವರು ನಡೆದುಕೊಂಡ ರೀತಿ ಉನ್ನತ ಸಂಸದೀಯ ಪರಂಪರೆ ಇರುವ ನಮ್ಮ ವಿಧಾನಮಂಡಲದ ಘನತೆಗೆ ತಕ್ಕುದಲ್ಲ. ಸಭ್ಯ ನಡವಳಿಕೆಯ ಮೂಲಕವೇ ಮುಂದಿನ ಪೀಳಿಗೆಗೆ ಮಾದರಿಯಾಗಬೇಕಾದ ಹಿರಿಯರಿಬ್ಬರು ಸದನವನ್ನು ಬೀದಿ ಕಾಳಗಕ್ಕೆ ವೇದಿಕೆ ಮಾಡಿಕೊಂಡಿದ್ದು ಪ್ರಜಾತಂತ್ರಕ್ಕೆ ತೋರಿದ ಅವಮಾನ. ಇಂತಹ ಸನ್ನಿವೇಶ ನಿರ್ಮಾಣವಾಗದಂತೆ
ಎರಡೂ ಪಕ್ಷಗಳ ಹಿರಿಯ ಸದಸ್ಯರು ನೋಡಿಕೊಳ್ಳಬೇಕಿತ್ತು.

ವಿಧಾನಸಭೆಯ ಕಲಾಪದಲ್ಲಿ ಅಹಿತಕರ ಮಾತು–ವರ್ತನೆಗಳಿಂದ ಸದನ ಹಾದಿ ತಪ್ಪುವ ಲಕ್ಷಣಗಳು ಕಂಡುಬಂದಾಗ, ಸದನವನ್ನು ಸರಿದಾರಿಗೆ ತರುವುದು ಸ್ಪೀಕರ್ ಹೊಣೆ. ಸದನ ನಿಭಾಯಿಸುವಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಎಡವಿದಂತೆ ಕಾಣುತ್ತದೆ. ಬುಧವಾರ ವಿಧಾನಸಭೆಯ ಕಲಾಪ ಯಾರ ಹಿಡಿತಕ್ಕೂ ಸಿಗದಂತಾಗಿತ್ತು. ಕೆಲವರು ತಾವು ವಿಧಾನಮಂಡಲದ ಸದಸ್ಯರು ಎನ್ನುವುದನ್ನೇ ಮರೆತಂತೆ ವರ್ತಿಸಿದರು. ‘ಇದೇನು ನಿನ್ನ ಅಪ್ಪನ ಮನೆಯ ಆಸ್ತಿಯಾ?’ ‘ತಾಕತ್ತಿದ್ದರೆ ಮುಟ್ಟು’ ಎಂಬ ಮಾತುಗಳು ಅನುರಣಿಸಿದವು. ಈಮಾತುಗಳು ಬೀದಿ ರಂಪಾಟದಲ್ಲಿ ಬಳಸುವ ಮಾತುಗಳನ್ನು ನೆನಪಿಸಿದವು. ವಿಧಾನಮಂಡಲದ ಘನತೆಗೆ ಚ್ಯುತಿ ತರುವ ಇಂತಹ ನಡವಳಿಕೆ ಅಕ್ಷಮ್ಯ.

ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ಸಿನ ಕೆಲವು ಸದಸ್ಯರು ಈ ಇಬ್ಬರು ಮುಖಂಡರ ಹುಂಬತನಕ್ಕೆ ಬೆಂಬಲವಾಗಿ ನಿಂತು ವರ್ತಿಸಿದ್ದು ಕೂಡ ಸದನಕ್ಕೆ ಶೋಭೆ ತರವಂತಹ ನಡಾವಳಿಯಲ್ಲ.ವಿಧಾನಮಂಡಲದಲ್ಲಿ ಈ ಸದಸ್ಯರ ನಡವಳಿಕೆಯನ್ನು ನೋಡಿ ಅವರನ್ನು ಆರಿಸಿದ ಮತದಾರರು ಪಶ್ಚಾತ್ತಾಪ ಪಡಬೇಕಷ್ಟೆ. ಸಂವಿಧಾನದ ತತ್ವ, ನಂಬಿಕೆಗಳನ್ನು ಪಾಲಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಿದ ಸಚಿವ ಈಶ್ವರಪ್ಪ ಕೆಂಪುಕೋಟೆ ಮೇಲೆ ಕೇಸರಿಧ್ವಜ ಹಾರಬಹುದು ಎಂದು ಹೇಳಿದ್ದು ಸಂವಿಧಾನಕ್ಕೆ ಮಾಡಿದ ಅಪಮಾನ. ಅದನ್ನು ಖಂಡಿಸಲು ವಿರೋಧ ಪಕ್ಷಗಳ ಸದಸ್ಯರು ತೋಳೇರಿಸುವ ಅಗತ್ಯವಿಲ್ಲ. ವಿಷಯ ಮಂಡನೆ ಅಥವಾ ಖಂಡನೆಯು ಸಭ್ಯತೆಯ ಚೌಕಟ್ಟಿನಲ್ಲೇ ಆಗಬೇಕು. ಆಡಳಿತ ಪಕ್ಷದವರ ಸಮರ್ಥನೆಗೂ ಇದೇ ಮಾತು ಅನ್ವಯ ಆಗುತ್ತದೆ.

ರಾಜ್ಯ ಹಲವಾರು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಕುಡಿಯುವ ನೀರಿನ ಸಮಸ್ಯೆ, ನಿರುದ್ಯೋಗ, ರೈತರ ಸಮಸ್ಯೆ, ಕೋವಿಡ್‌ನಿಂದ ಉಂಟಾದ ಆರ್ಥಿಕ ದುಃಸ್ಥಿತಿ ಮುಂತಾದ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕಿದೆ. ಜನರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಪರಿಣಾಮಕಾರಿಯಾದ ಚರ್ಚೆ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳುವುದಕ್ಕಾಗಿಯೇ ವಿಧಾನಮಂಡಲದ ಅಧಿವೇಶನವನ್ನು ಕರೆಯುವುದು. ಅಧಿವೇಶನವನ್ನು ಎಲ್ಲ ಪಕ್ಷಗಳ ಸದಸ್ಯರೂ ಸದುಪಯೋಗಪಡಿಸಿಕೊಳ್ಳಬೇಕು. ಅದು ಬಿಟ್ಟು ಕೂಗಾಟ, ಹಾರಾಟ, ಕೋಲಾಹಲ ಸೃಷ್ಟಿಸುವುದು, ಕೈಕೈ ಮಿಲಾಯಿಸುವ ಹಂತಕ್ಕೆ ಹೋಗುವುದು ದುರದೃಷ್ಟಕರ.

ವರ್ಷಕ್ಕೆ ಕನಿಷ್ಠ 100 ದಿನಗಳಾದರೂ ವಿಧಾನಮಂಡಲ ಅಧಿವೇಶನ ನಡೆದರೆ ಪ್ರಜಾತಂತ್ರದ ಸೌಂದರ್ಯ ಇನ್ನಷ್ಟು ಹೊಳಪು ಪಡೆಯಬಹುದು. ಆದರೆ ಈಗ ಅಧಿವೇಶನವು 50 ದಿನ ಕೂಡ ನಡೆಯುವುದಿಲ್ಲ. ನಡೆದಷ್ಟು ದಿನವೂ ಇಂತಹ ಯಾವುದೋ ಒಂದು ವಿಷಯವನ್ನು ಇಟ್ಟುಕೊಂಡು ಗದ್ದಲ ಎಬ್ಬಿಸುವುದು ಇತ್ತೀಚಿನ ವರ್ಷಗಳಲ್ಲಿ ಮಾಮೂಲು ಎನ್ನುವಂತಾಗಿದೆ. ಯಾವುದೇ ವಿಷಯದ ಬಗ್ಗೆ ಗಂಭೀರವಾದ ಚರ್ಚೆ ನಡೆದರೆ ಅಧಿವೇಶನಕ್ಕೆ ಒಂದು ಘನತೆ ಬರುತ್ತದೆ. ಅದು ಬಿಟ್ಟು ಕೋಲಾಹಲದಲ್ಲೇ ಕಲಾಪವನ್ನು ಮುಗಿಸಿದರೆ ಅದು ಮತದಾರರಿಗೆ ಮಾಡುವ ದ್ರೋಹ. ಹೇಗಾದರೂ ಮಾಡಿ ಪ್ರಚಾರದಲ್ಲಿ ಇರಬೇಕು ಎಂಬ ಹಂಬಲ ಕೆಲವು ಸದಸ್ಯರಲ್ಲಿ ಇರುವಂತಿದೆ. ಸದನದಲ್ಲಿ ಕೂಗಾಡಿದರೆ, ತೋಳ್ಬಲ ಪ್ರದರ್ಶಿಸಿದರೆ
ಪ್ರಚಾರ ಸಿಗುತ್ತದೆ ಎಂದೂ ಕೆಲವರು ಭಾವಿಸಿರಬಹುದು.

ಕೂಗುಮಾರಿತನ ಉತ್ತಮ ಸಂಸದೀಯ ಪಟುಗಳ ಲಕ್ಷಣವಲ್ಲ. ಯಾವುದೇ ವಿಷಯದ ಬಗ್ಗೆ ಸೂಕ್ತ ಅಧ್ಯಯನ ಮಾಡಿಕೊಂಡು ಬಂದು ಮಾತನಾಡಿದರೆ ಸದನಕ್ಕೂ ಸದಸ್ಯರಿಗೂ ಗೌರವ. ಮತ ಹಾಕಿ ಗೆಲ್ಲಿಸಿದ ಮತದಾರರ ಸದ್ಭಾವನೆಗೆ ಕೊಡುವ ಮಾನ್ಯತೆ. ಜನ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂಬ ಎಚ್ಚರಿಕೆ ಜನಪ್ರತಿನಿಧಿಗಳಿಗೆ ಬೇಕು. ವಿಧಾನಮಂಡಲವು ಜನ ಹಿತ ಕಾಯುವ ಶಾಸನಗಳನ್ನು ರೂಪಿಸುವ, ಆರೋಗ್ಯಪೂರ್ಣ ಚರ್ಚೆಯ ಮನೆಯಾಗಬೇಕೇ ವಿನಾ ಅಸಭ್ಯವಾಗಿ ಜಗಳವಾಡುವವರ ಜಾಗವಾಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT