ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಜೀವನೋತ್ಸಾಹ ಕುಗ್ಗಿಸದಿರಲಿ ದುಡಿಮೆ

ಬಿಡುವಿಲ್ಲದ ದುಡಿಮೆಯಿಂದ ವ್ಯಕ್ತಿಯ ಜೀವಂತಿಕೆಗೆ, ಸೃಜನಶೀಲ ಸಾಮರ್ಥ್ಯಕ್ಕೆ ಪೆಟ್ಟು
Published 3 ಮೇ 2024, 0:06 IST
Last Updated 3 ಮೇ 2024, 0:06 IST
ಅಕ್ಷರ ಗಾತ್ರ

ನನ್ನ ಬಂಧುವೊಬ್ಬರು ವೃತ್ತಿಯಿಂದ ನಿವೃತ್ತರಾಗಿ ಎರಡು ವರ್ಷಗಳಾದವು. ವೃತ್ತಿಯಲ್ಲಿದ್ದಾಗ ತುಂಬ ಲವಲವಿಕೆಯಿಂದ ಇದ್ದವರು ನಿವೃತ್ತಿಯ ನಂತರ ಬದುಕಿನಲ್ಲಿ ಆಸಕ್ತಿಯನ್ನೇ ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆ. ಸುಮಾರು ಮೂವತ್ತೈದು ವರ್ಷಗಳಷ್ಟು ಕಾಲ ಉದ್ಯೋಗವನ್ನೇ ಬದುಕಾಗಿಸಿಕೊಂಡು ಬಾಳಿದವರು ಅವರು. ದಿನನಿತ್ಯದ ಕಚೇರಿಯ ಕೆಲಸ ಮತ್ತು ಹಣ ಉಳಿತಾಯದ ಯೋಜನೆಯಲ್ಲೇ ಬದುಕಿನ ಬಹುಭಾಗವನ್ನು ಕಳೆದವರಿಗೆ ಈಗ ಸಮಯ ಕಳೆಯುವುದೇ ಕಷ್ಟವಾಗಿದೆ. ಹಣವನ್ನು ದ್ವಿಗುಣಗೊಳಿಸುವುದರಲ್ಲಿ ಇದ್ದ ಆಸಕ್ತಿ ಅವರಿಗೆ ಬೇರೆ ಯಾವ ಸೃಜನಾತ್ಮಕ ಹವ್ಯಾಸಗಳ ಬಗೆಗೂ ಇರಲಿಲ್ಲ. ಪರಿಣಾಮವಾಗಿ, ನಿವೃತ್ತಿಯ ನಂತರ ಕೆಲಸ ಇಲ್ಲದಂತಾಗಿ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಂದ ಜರ್ಜರಿತರಾಗಿದ್ದಾರೆ.

‘ನಾವು ಮನುಷ್ಯರಾಗಿ ಬಿಚ್ಚಿಕೊಳ್ಳುವುದೇ ಕಾಯಕದ ಮುಖಾಂತರ’ ಎಂದಿದ್ದಾರೆ ಕಾರ್ಲ್‌ ಮಾರ್ಕ್ಸ್. ಬಸವಣ್ಣನವರು ‘ಕಾಯಕವೇ ಕೈಲಾಸ’ ಎಂದು ಕೆಲಸದ ಮಹತ್ವವನ್ನು ತಿಳಿಹೇಳಿದರು. ಜನಪದರು ತಮ್ಮ ದಿನನಿತ್ಯದ ಕಾಯಕದ ಜೊತೆಗೆ ಹಾಡು, ಲಾವಣಿ, ಒಗಟುಗಳನ್ನು ಹೇಳುತ್ತ ದುಡಿಮೆಯನ್ನು ಸೃಜನಶೀಲ ಕಲೆಯಾಗಿಸುತ್ತಿದ್ದರು. ತತ್ವಜ್ಞಾನಿಗಳು, ಅನುಭಾವಿಗಳು, ಶರಣರು, ಚಿಂತಕರು ‘ಮನುಷ್ಯನು ಕಾಯಕದ ಮೂಲಕ ತನ್ನ ಎಲ್ಲ ಮಾನವೀಯ ಸಾಧ್ಯತೆಗಳನ್ನು ನಿಜ ಮಾಡಬಲ್ಲವನಾಗುತ್ತಾನೆ’ ಎಂದು ದುಡಿಮೆಯನ್ನು ವಿಶಾಲ ಅರ್ಥದಲ್ಲಿ ವ್ಯಾಖ್ಯಾನಿಸಿದ್ದಾರೆ. ಆದರೆ ಇಂದು ಹಣ ಮತ್ತು ಅಧಿಕಾರವೇ ಕೆಲಸದ ಹಿಂದಿನ ಪ್ರೇರಣೆಗಳಾಗಿವೆ. 

ಮನುಷ್ಯರನ್ನು ದುಡಿಯುವ ಯಂತ್ರಗಳನ್ನಾಗಿಸುವ ಹುನ್ನಾರಕ್ಕೆ ಶಾಲಾ ಶಿಕ್ಷಣದಿಂದಲೇ ಅಡಿಪಾಯ ಹಾಕಲಾಗುತ್ತಿದೆ. ಶಾಲೆ ಮತ್ತು ಕಾಲೇಜುಗಳಲ್ಲಿ ಪಠ್ಯ ಪುಸ್ತಕಗಳಾಚೆ ಯಾವ ಮನರಂಜನೆಗೂ ಅವಕಾಶವಿರುವುದಿಲ್ಲ. ಇಂಥ ವಾತಾವರಣದಲ್ಲಿ ಶಿಕ್ಷಣ ಪಡೆಯುವ ಮಕ್ಕಳು ಸಹಜವಾಗಿಯೇ ಯಂತ್ರಗಳಂತಾಗುತ್ತಾರೆ.ಬದುಕಿನಲ್ಲಿ ದುಡಿಮೆ ಮತ್ತು ಆ ಮೂಲಕ ಹಣ ಗಳಿಕೆಯೇ ಬದುಕಿನ ಧ್ಯೇಯವಾಗುತ್ತದೆ.

ನನ್ನೂರಿನ ರೈತ ಕುಟುಂಬಗಳವರು ವ್ಯವಸಾಯ ಮಾಡುತ್ತಿದ್ದಾಗ ಶ್ರಾವಣದ ಮಳೆಯ ದಿನಗಳು ಮತ್ತು ಬೇಸಿಗೆ ಕಾಲದ ಬಿಡುವಿನ ವೇಳೆಯಲ್ಲಿ ಸೃಜನಾತ್ಮಕ ಚಟುವಟಿಕೆಗಳಲ್ಲಿ ನಿರತರಾಗಿರುತ್ತಿದ್ದರು. ಪುರಾಣ-
ಪ್ರವಚನಗಳನ್ನು ಆಲಿಸುವುದು, ನಾಟಕಗಳನ್ನಾಡುವುದು, ಕೋಲಾಟ, ಭಜನೆಯಂತಹ ಸೃಜನಶೀಲ ಚಟುವಟಿಕೆಗಳ ಮೂಲಕ ಜೀವನೋತ್ಸಾಹವನ್ನು ಇಮ್ಮಡಿಗೊಳಿಸಿಕೊಳ್ಳುತ್ತಿದ್ದರು. ಈ ಕಾರಣದಿಂದಲೇ ಆರೋಗ್ಯಪೂರ್ಣವಾದ ದೀರ್ಘಾವಧಿ ಬದುಕನ್ನು ಬದುಕುತ್ತಿದ್ದರು. ಅವರ ನಂತರದ ಪೀಳಿಗೆ ಬಹುರಾಷ್ಟ್ರೀಯ ಕಂಪನಿಗಳಿಗೆ ಮತ್ತು ರಿಯಲ್ ಎಸ್ಟೇಟ್ ಕುಳಗಳಿಗೆ ಕೃಷಿಭೂಮಿಯನ್ನು ಪರಭಾರೆ ಮಾಡಿ ಈಗ ಅದೇ ಕಂಪನಿಗಳಲ್ಲಿ ಉದ್ಯೋಗಿಗಳಾಗಿ ದುಡಿಯುವ ಯಂತ್ರದಂತೆ ಆಗಿದ್ದಾರೆ. ಜೀವನೋತ್ಸಾಹವನ್ನು ಕಳೆದುಕೊಂಡು ಬದುಕುತ್ತಿರುವವರನ್ನು ಮಧ್ಯವಯಸ್ಸಿನಲ್ಲೇ ವೃದ್ಧಾಪ್ಯದ ಚಹರೆ ಆವರಿಸಿಕೊಂಡಿದೆ. ಈ ಸಮಸ್ಯೆ ಎಲ್ಲ ಕ್ಷೇತ್ರಗಳನ್ನೂ ವ್ಯಾಪಿಸಿದೆ.

ಬೃಹತ್‌ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಯುವಕ–ಯುವತಿಯರಲ್ಲಿ ಹಲವರು ಇತ್ತೀಚಿನ ದಿನಗಳಲ್ಲಿ ಉದ್ಯೋಗ ತ್ಯಜಿಸಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೃಷಿಕ್ಷೇತ್ರದ ದುಡಿಮೆಯ ಬಿಡುವಿನ ವೇಳೆಯಲ್ಲಿ ಬರವಣಿಗೆ, ಕಲೆ, ಸಂಗೀತದಂತಹ ಹವ್ಯಾಸಗಳಲ್ಲಿ ತೊಡಗಿಸಿಕೊಂಡು ಸೃಜನಾತ್ಮಕವಾಗಿ
ಬದುಕನ್ನು ರೂಪಿಸಿಕೊಳ್ಳುತ್ತಿದ್ದಾರೆ. ಹಣ ಮತ್ತು ದುಡಿಮೆಯೇ ಪ್ರಧಾನವಾದ ಸಮಾಜದಲ್ಲಿ ಇಂಥ ಪರಿವರ್ತನೆಗಳು ಆಗಾಗ ಸಂಭವಿಸುತ್ತ ಬದುಕಿಗೆ ಸೃಜನಶೀಲತೆಯ ಅಗತ್ಯವನ್ನು ಮನಗಾಣಿಸಿಕೊಡುತ್ತಿವೆ.

ದುಡಿಮೆ ಎನ್ನುವುದು ಬರೀ ಕಚೇರಿ ಮತ್ತು ಕಾರ್ಖಾನೆಗೆ ಸೀಮಿತವಾಗದೆ ಮನೆಯನ್ನೂ ಪ್ರವೇಶಿಸಿದೆ. ಕೋವಿಡ್ ಸಂದರ್ಭದಲ್ಲಿ ಅನಿವಾರ್ಯವಾಗಿದ್ದ ವರ್ಕ್ ಫ್ರಮ್ ಹೋಮ್ ಎನ್ನುವ ಪರಿಕಲ್ಪನೆಯನ್ನು ಈಗ ಉದ್ಯೋಗಿಗಳು ಹೆಚ್ಚು ಇಷ್ಟಪಡುತ್ತಿದ್ದಾರೆ. ಮನೆಯೇ ಕಚೇರಿಯಾಗಿ ರೂಪಾಂತರಗೊಳ್ಳುತ್ತಿರುವ ಈ ಪ್ರಕ್ರಿಯೆ ಮನುಷ್ಯನೊಳಗಿನ ಸೃಜನಶೀಲತೆಯನ್ನು ಮಾತ್ರ ನಷ್ಟಪಡಿಸುತ್ತಿಲ್ಲ, ಸಂಬಂಧಗಳ ಸ್ವರೂಪವನ್ನೂ ಪರಿವರ್ತಿಸುತ್ತಿದೆ. ಅನೇಕ ಕುಟುಂಬಗಳಲ್ಲಿ ಮಕ್ಕಳೊಂದಿಗೆ ಕಾಲ ಕಳೆಯಲು ಸಮಯವಿಲ್ಲದಷ್ಟು ಪಾಲಕರು ದುಡಿಮೆಗೆ ಅಂಟಿಕೊಂಡಿರುತ್ತಾರೆ. ಈ ಸಂದರ್ಭದಲ್ಲಿ, ಗ್ರೀಕ್ ತತ್ವಜ್ಞಾನಿ ಪ್ಲೇಟೊನ ಪರಿಕಲ್ಪನೆಯ ಆದರ್ಶರಾಜ್ಯದಲ್ಲಿ ಕಲೆ ಮತ್ತು ಸಾಹಿತ್ಯಕ್ಕೂ ಜಾಗವಿದೆ ಎನ್ನುವುದನ್ನು ನಾವು ಸ್ಮರಿಸಿಕೊಳ್ಳಬೇಕಿದೆ. ತನ್ನ ಅತಿಯಾದ ರಾಜಕೀಯ ಕಾರ್ಯವ್ಯಾಪ್ತಿಯಿಂದಾಗಿ ಸೃಜನಶೀಲತೆಯಿಂದ ಸದಾಕಾಲ ದೂರವೇ ಇರುವ ರಾಜಕಾರಣಕ್ಕೆ ಪಾಠ ಕಲಿಸಲೆಂಬಂತೆ ಚಾರ್ಲಿ ಚಾಪ್ಲಿನ್ ತನ್ನ ‘ಗ್ರೇಟ್ ಡಿಕ್ಟೇಟರ್’ ಸಿನಿಮಾದಲ್ಲಿ ಹಿಟ್ಲರ್‌ನನ್ನು ನಗಲು ಅರ್ಹವಾದ ಪಾತ್ರವಾಗಿಸಿದ.

‘ದುಡಿಮೆಯ ಕ್ಷೇತ್ರದಿಂದ ಪ್ರಭಾವಿತಗೊಂಡ ಮನಸ್ಸನ್ನು ಅಲ್ಲೇ ಬಿಟ್ಟುಬರುವುದಿರಲಿ,
ನಮ್ಮೊಳಗಿನ ಅತ್ಯಂತ ಮಹತ್ವದ್ದೇನೋ ಅಲ್ಲಿ ನಾಶವಾಗುತ್ತಿದೆ ಎಂಬ ಅರಿವೂ ಇಲ್ಲದಿರುವುದು ನಮ್ಮ ಬದುಕಿನ ದುರದೃಷ್ಟವಾಗಿದೆ’ ಎಂದು ಯಶವಂತ ಚಿತ್ತಾಲರು ಆತಂಕ ವ್ಯಕ್ತಪಡಿಸಿದ್ದಾರೆ.

ಪರಿಸರದಲ್ಲಿ ಮನುಷ್ಯನೊಬ್ಬನನ್ನು ಹೊರತು ಪಡಿಸಿ ಬೇರೆ ಯಾವ ಜೀವಸಂತತಿಯೂ ಅತಿಯಾದ ದುಡಿಮೆಗೆ ಅಂಟಿಕೊಂಡಿಲ್ಲ. ಆದರೆ ನಾಗರಿಕ ಎನಿಸಿಕೊಂಡ ಮನುಷ್ಯಸಮಾಜದಲ್ಲಿ ಮಾತ್ರ ದುಡಿಮೆಯ ಕ್ಷೇತ್ರವು ಆತನ ಆತ್ಮ ಮತ್ತು ಮನಸ್ಸನ್ನು ಕೊಲ್ಲುವ ಬೇನೆಯ ತಾಣವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ನಮ್ಮಲ್ಲೇ ಇದೆ ಎನ್ನುವುದನ್ನು ನಾವುಅರ್ಥಮಾಡಿಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT