ಬಳ್ಳಾರಿ: ಇಲ್ಲಿನ ನಗರ ಬಸ್ ನಿಲ್ದಾಣದಿಂದ ಸಂಚರಿಸುವ ಬಸ್ಗಳಲ್ಲಿ ಸನ್ಮಾರ್ಗ ಗೆಳೆಯರ ಬಳಗವು ಮಾಡಿರುವ ಕುಡಿಯುವ ನೀರಿನ ವ್ಯವಸ್ಥೆಗೆ ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ, ‘ಬಸ್ಗಳಲ್ಲಿ ನೀರಿನ ಸೌಲಭ್ಯ ಒದಗಿಸಿದ್ದು ಶಾಘ್ಲನೀಯ. ಬೇಸಿಗೆ ಕಾಲದಲ್ಲಿ ನೀರಿನ ದಾಹದಿಂದ ಪ್ರಯಾಣಿಕರು ಪರದಾಡುತ್ತಾರೆ. ಆ ಸಮಸ್ಯೆಯನ್ನು ಬಳಗವು ತಕ್ಕ ಮಟ್ಟಿಗೆ ಪರಿಹರಿಸಲು ಯತ್ನಿಸಿರುವುದು ಮಾದರಿ ನಡೆಯಾಗಿದೆ’ ಎಂದರು.
‘ಸಮಾಜಸೇವೆ ಎಂಬುದು ಬಾಯಿ ಮಾತಷ್ಟೇ ಆಗದೆ, ಸಮಾಜದ ಜನರಿಗೆ ಅಗತ್ಯವಿರುವುದನ್ನು ಪೂರೈಸಿದಾಗಷ್ಟೇ ಸಾರ್ಥಕವಾಗುತ್ತದೆ. ಸಂಘ, ಸಂಸ್ಥೆಗಳು ನಿಸ್ವಾರ್ಥದಿಂದ ಜನರ ಸೇವೆ ಮಾಡಲು ಮುಂದಾಗಬೇಕು’ ಎಂದರು.
ಸಂಚಾರ ದಟ್ಟಣೆ: ಪ್ರತಿಯೊಬ್ಬರು ಸರ್ಕಾರಿ ಬಸ್ಗಳಲ್ಲಿ ಸಂಚರಿಸಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಬೇಕು’ ಎಂದು ಅವರು ಇದೇ ಸಂದರ್ಭದಲ್ಲಿ ಸಲಹೆ ನೀಡಿದರು.ಈಶಾನ್ಯ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಚಂದ್ರಶೇಖರ್, ‘ನಗರ ಬಸ್ ನಿಲ್ದಾಣಕ್ಕೆ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.
ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ವೆಂಕಟೇಶ ಮೂರ್ತಿ, ಘಟಕದ ವ್ಯವಸ್ಥಾಪಕ ಕೃಷ್ಣಮೂರ್ತಿ, ಬಳಗದ ಅಧ್ಯಕ್ಷ ಕೆ.ಪಂಪಾಪತಿ, ಕಪ್ಪಗಲ್ ಚಂದ್ರಶೇಖರ್ ಆಚಾರಿ, ತಿಪ್ಪೇರುದ್ರ ಗಂಡಿಗೌಡ್ರು, ಹಗರಿ ಬಸವರಾಜ, ಎಟಿಎಸ್ ಲಕ್ಷ್ಮಣ, ಉಮಾಪತಿ ಇದ್ದರು.
60 ಬಸ್ಗಳಲ್ಲಿ ಸೌಲಭ್ಯ
ಗಂಗಾವತಿ, ಮಂಗಳೂರು, ಕೊಡಗು, ಹೈದರಾಬಾದ್, ವಿಜಯವಾಡ, ಶ್ರೀಶೈಲ, ಕರ್ನೂಲ್, ಮೀರಜ್, ಔರಂಗ ಬಾದ್ ಸೇರಿ ಜಿಲ್ಲೆಯ ಗ್ರಾಮೀಣ ಭಾಗಗಳಿಗೆ ಸಂಚರಿಸುವ ಸುಮಾರು 60 ಬಸ್ಗಳಲ್ಲಿ ಕುಡಿವ ನೀರಿನ ಸೌಲಭ್ಯವನ್ನು ಬಳಗ ಕಲ್ಪಿಸಿದೆ.