ದುಬೈ: ಭಾರತದ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವ ತೊರೆದಾಗ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮಾತ್ರ ತಮಗೆ ಸಂದೇಶ ಕಳುಹಿಸಿದ್ದರು ಎಂದು ಟೀಮ್ ಇಂಡಿಯಾ ಮಾಜಿ ಕಪ್ತಾನ ವಿರಾಟ್ ಕೊಹ್ಲಿ ಬಹಿರಂಗಪಡಿಸಿದ್ದಾರೆ.
ದುಬೈನಲ್ಲಿ ಸಾಗುತ್ತಿರುವ ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ಐದು ವಿಕೆಟ್ ಅಂತರದ ಸೋಲಿಗೆ ಶರಣಾಗಿತ್ತು.
ಆದರೆ ವೈಯಕ್ತಿಕವಾಗಿ ಉತ್ತಮ ಬ್ಯಾಟಿಂಗ್ ಲಯಕ್ಕೆ ಮರಳಿರುವ ವಿರಾಟ್ ಕೊಹ್ಲಿ, ಟೂರ್ನಿಯಲ್ಲಿ ಸತತ ಎರಡನೇ ಅರ್ಧಶತಕ ಗಳಿಸಿದ್ದಾರೆ.
ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ, ತಮ್ಮ ವೃತ್ತಿ ಜೀವನದ ಕಠಿಣ ಪರಿಸ್ಥಿತಿಯಲ್ಲಿ ನಿಜವಾದ ಬೆಂಬಲ ನೀಡಿರುವ ವ್ಯಕ್ತಿಯ ಬಗ್ಗೆ ಕೊಹ್ಲಿ ಮಾತನಾಡಿದ್ದಾರೆ.
ನಾನು ಟೆಸ್ಟ್ ತಂಡದ ನಾಯಕತ್ವ ತೊರೆದಾಗ, ಒಬ್ಬ ವ್ಯಕ್ತಿ ಮಾತ್ರ ನನಗೆ ಮೆಸೇಜ್ ಮಾಡಿದ್ದರು. ನಾನು ಆ ಆಟಗಾರನೊಂದಿಗೆ ಆಡಿದ್ದೇನೆ. ಅವರೇ ಮಹೇಂದ್ರ ಸಿಂಗ್ ಧೋನಿ ಎಂದು ಹೇಳಿದ್ದಾರೆ.
#WATCH | When I left Test captaincy, only MS Dhoni messaged me. A lot of people have my number, but no one messaged me. The respect and connection with him (MS Dhoni) is genuine... neither he is insecure about me, nor I am insecure about him...: Virat Kohli, Indian cricketer pic.twitter.com/kSTqAdfzs5
— ANI (@ANI) September 4, 2022
ಅನೇಕ ಮಂದಿಯಲ್ಲಿ ನನ್ನ ಮೊಬೈಲ್ ಸಂಖ್ಯೆ ಇದೆ. ಟಿ.ವಿಯಲ್ಲಿ ಅನೇಕ ಮಂದಿ ಸಲಹೆ ನೀಡುತ್ತಿರುತ್ತಾರೆ. ಆದರೆ ನನ್ನ ನಂಬರ್ ಇರುವ ಬೇರೆ ಯಾವುದೇ ವ್ಯಕ್ತಿ ನನಗೆ ಸಂದೇಶ ಕಳುಹಿಸಿರಲಿಲ್ಲ ಎಂದು ಹೇಳಿದರು.
ಎಂ.ಎಸ್. ಧೋನಿ ಮಾತ್ರ ನನಗೆ ಸಂದೇಶ ಕಳುಹಿಸಿದ್ದರು. ನೀವು ಯಾರೊಂದಿಗೆ ಆದರೂ ನಿಜವಾದ ಗೌರವ ಹೊಂದಿದ್ದರೆ ಅದು ಈ ರೀತಿಯಾಗಿ ಕಾಣಸಿಗುತ್ತದೆ. ಏಕೆಂದರೆ ಒಬ್ಬರನ್ನೊಬ್ಬರು ನೆಚ್ಚಿಕೊಂಡಿರುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ:ಉತ್ಸಾಹ ಮರಳಿದೆ: ಪಾಕಿಸ್ತಾನ ವಿರುದ್ಧ ಅರ್ಧಶತಕ ಬಾರಿಸಿದ ಬಳಿಕ ವಿರಾಟ್ ಕೊಹ್ಲಿ
ನಾನು ಅವರಿಂದ ಏನನ್ನೂ ಬಯಸುವುದಿಲ್ಲ ಅಥವಾ ಅವರು ನನ್ನಿಂದ ಏನನ್ನೂ ಬಯಸಿಲ್ಲ. ನಾನು ಯಾರಿಗಾದರೂ ಏನನ್ನಾದರೂ ಹೇಳಲು ಅಥವಾ ನೆರವಾಗಲು ಬಯಸಿದ್ದರೆ ಅವರನ್ನು ವೈಯಕ್ತಿಕವಾಗಿ ಸಂಪರ್ಕಿಸುತ್ತೇನೆ. ನೀವು ಟಿ.ವಿ. ಮುಂದೆ ಬಂದು ಸಲಹೆಗಳನ್ನು ನೀಡಲು ಬಯಸಿದ್ದರೆ ಅದಕ್ಕೆ ನಾನು ಯಾವುದೇ ಮೌಲ್ಯವನ್ನು ಕೊಡುವುದಿಲ್ಲ. ಪರಸ್ಪರ ಚರ್ಚಿಸಬೇಕು. ನಾನು ಪ್ರಾಮಾಣಿಕವಾಗಿ ಬದುಕುತ್ತೇನೆ. ಅಂತಿಮವಾಗಿ ದೇವರು ಎಲ್ಲವನ್ನುದಯಪಾಲಿಸುತ್ತಾರೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.