ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಹೊನಲು ಬೆಳಕಿನ ಟೆಸ್ಟ್ ಪಂದ್ಯದಲ್ಲಿ ಅತಿಥೇಯ ಭಾರತ ಆರಂಭಿಕ ಆಘಾತಕ್ಕೊಳಗಾಗಿದೆ.
ಟೀ ವಿರಾಮದ ಹೊತ್ತಿಗೆ 29 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 93 ರನ್ ಗಳಿಸಿದೆ. ರಿಷಬ್ ಪಂತ್ (16*) ಹಾಗೂ ಶ್ರೇಯಸ್ ಅಯ್ಯರ್ (1) ಕ್ರೀಸಿನಲ್ಲಿದ್ದಾರೆ.
ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಮಯಂಕ್ ಅಗರವಾಲ್ (4) ರನೌಟ್ ಆದರು. ನಾಯಕ ರೋಹಿತ್ ಶರ್ಮಾ (15) ಅವರಿಗೂ ಮಿಂಚಲಾಗಲಿಲ್ಲ.
ಹನುಮ ವಿಹಾರಿ ಹಾಗೂ ವಿರಾಟ್ ಕೊಹ್ಲಿ 47 ರನ್ಗಳ ಉಪಯುಕ್ತ ಜೊತೆಯಾಟ ಕಟ್ಟಿದರೂ ಟೀ ವಿರಾಮಕ್ಕೆ ಕೆಲವೇ ಹೊತ್ತು ಇರುವಾಗ ಇಬ್ಬರೂ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು.
A special bond with the crowd at the M Chinnaswamy Stadium 🏟️
ವಿಹಾರಿ 31 ಹಾಗೂ ಕೊಹ್ಲಿ 23 ರನ್ ಗಳಿಸಿ ಔಟ್ ಆದರು. ಇದರೊಂದಿಗೆ ಕೊಹ್ಲಿಯ 71ನೇ ಟೆಸ್ಟ್ ಶತಕ ಎದುರು ನೋಡುತ್ತಿದ್ದ ಅಭಿಮಾನಿಗಳಿಗೂ ನಿರಾಸೆ ಕಾದಿತ್ತು.
ಲಂಕಾ ಪರ ಲಸಿತ್ ಎಂಬುಲದೆನಿಯಾ, ಪ್ರವೀಣ್ ಜಯವಿರ್ಕಮ ಹಾಗೂ ಧನಂಜಯ ಡಿಸಿಲ್ವ ತಲಾ ಒಂದು ವಿಕೆಟನ್ನು ಹಂಚಿಕೊಂಡರು.
ಮೊಹಾಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ.