ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಟಿ–20 ಕ್ರಿಕೆಟ್ನಲ್ಲಿ ಹೊಸದೊಂದು ದಾಖಲೆಯ ಹೊಸ್ತಿಲಿಗೆ ಬಂದು ನಿಂತಿದ್ದಾರೆ. ಇಂದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯುವ ಪಂದ್ಯದಲ್ಲಿ ಅವರು 85 ರನ್ ಗಳಿಸಿದರೆ ಚುಟುಕು ಕ್ರಿಕೆಟ್ನಲ್ಲಿ 9 ಸಾವಿರ ರನ್ ಪೂರೈಸಿದ ಭಾರತದ ಮೊದಲ ಬ್ಯಾಟ್ಸ್ಮನ್ ಎಂಬ ಶ್ರೇಯಕ್ಕೆ ಭಾಜನರಾಗಲಿದ್ದಾರೆ.
81 ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳೂ ಸೇರಿದಂತೆ ವಿರಾಟ್ ಇದುವರೆಗೆ 283 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದು, 8,915 ರನ್ ಕಲೆಹಾಕಿದ್ದಾರೆ.
ಈ ವರೆಗೆ ಒಟ್ಟು 6 ಬ್ಯಾಟ್ಸ್ಮನ್ಗಳು ಚುಟುಕು ಕ್ರಿಕೆಟ್ನಲ್ಲಿ 9 ಸಾವಿರಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಅದರಲ್ಲಿ ಕ್ರಿಸ್ ಗೇಲ್ (13,296) ಮೊದಲ ಸ್ಥಾನದಲ್ಲಿದ್ದು, ಕೀರನ್ ಪೊಲಾರ್ಡ್ (10,238), ಬ್ರೆಂಡನ್ ಮೆಕಲಮ್ (9,922), ಶೋಯಬ್ ಮಲಿಕ್ (9,906), ಡೇವಿಡ್ ವಾರ್ನರ್ (9,318) ಮತ್ತು ಆ್ಯರನ್ ಫಿಂಚ್ (9,088) ಕ್ರಮವಾಗಿ ನಂತರದ ಸ್ಥಾನಗಳಲ್ಲಿ ಇದ್ದಾರೆ.
ಆರ್ಸಿಬಿ ಕಳೆದ ಪಂದ್ಯದಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ವಿರುದ್ಧ 97 ರನ್ ಅಂತರದಿಂದ ಸೋಲು ಕಂಡಿತ್ತು. ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಸೇರಿದಂತೆ ಹಲವು ಕ್ರಿಕೆಟಿಗರ ವಿರಾಟ್ ನಾಯಕತ್ವವನ್ನು ಟೀಕಿಸಿದ್ದರು. ಕೊಹ್ಲಿಯ ತಂತ್ರಗಳು ಪ್ರತಿ ಇನಿಂಗ್ಸ್ನಲ್ಲಿಯೂ ಆರ್ಸಿಬಿಯನ್ನು ಬಾಧಿಸುತ್ತಿವೆ ಎಂದು ಹೇಳುತ್ತಾ ಪಂಜಾಬ್ ವಿರುದ್ಧದ ಕೊನೆಯ ಓವರ್ ಬೌಲಿಂಗ್ ಮಾಡಲು ಶಿವಂ ದುಬೆಗೆ ಚೆಂಡನ್ನು ನೀಡಿದ ನಿರ್ಧಾರ ಸರಿಯಾದುದಲ್ಲ ಎಂದು ಕಿಡಿ ಕಾರಿದ್ದರು.
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಅವರು ಐಪಿಎಲ್–ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮುನ್ನಡೆಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಇಂದು ರಾತ್ರಿ ಮುಖಾಮುಖಿಯಾಗಲಿವೆ.
— ಪ್ರಜಾವಾಣಿ | Prajavani (@prajavani) September 28, 2020
ಈ ಪಂದ್ಯದಲ್ಲಿ ಯಾರ ತಂಡ ಗೆಲುವು ಸಾಧಿಸಲಿದೆ?
‘ನನಗೆ ಗೊತ್ತು ದುಬೆ ಒಂದೆರಡು ಓವರ್ ಚೆನ್ನಾಗಿ ಬೌಲಿಂಗ್ ಮಾಡಿದ್ದರು. ಆದರೆ, ಕೊನೆಯ ಓವರ್ ಆಟ ಬಾಕಿ ಇದ್ದಾಗ, ಅದರಲ್ಲೂ 100ಕ್ಕಿಂತ ಹೆಚ್ಚು ರನ್ ಗಳಿಸಿ ಆಟಕ್ಕೆ ಕುದುರಿಕೊಂಡಿರುವ ಬ್ಯಾಟ್ಸ್ಮನ್ ಕ್ರೀಸ್ನಲ್ಲಿದ್ದಾಗನೀವು ನಿಮ್ಮ ಪ್ರಮುಖ ಬೌಲರ್ಗೆ ಚೆಂಡನ್ನು ನೀಡಲು ಯೋಜಿಸುತ್ತೀರಿ. ವಿಶೇಷವಾಗಿ ಕೊನೆಯ ಓವರ್ನಲ್ಲಿ. ಏಕೆಂದರೆ ಟಿ–20 ಕ್ರಿಕೆಟ್ನಲ್ಲಿ ಒಂದೆರಡು ಎಸೆತಗಳೂ ದೊಡ್ಡ ವ್ಯತ್ಯಾಸವನ್ನು ಮಾಡಬಲ್ಲವು’ ಎಂದು ಕ್ರೀಡಾವಾಹಿನಿಯೊಂದಿಗೆ ನಡೆದ ಮಾತುಕತೆ ವೇಳೆ ವಿವರಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.