ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೊಚ್ಚಲ ಹ್ಯಾಟ್ರಿಕ್ ವಿಕೆಟ್ ಗಳಿಸುವ ಅವಕಾಶದಿಂದ ರಾಜಸ್ಥಾನ್ ರಾಯಲ್ಸ್ ತಂಡದ ರಿಸ್ಟ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ವಂಚಿತರಾಗಿದ್ದಾರೆ.
ಶನಿವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ನಿಖರ ದಾಳಿ ಸಂಘಟಿಸಿದ ಆರ್ಸಿಬಿಯ ಮಾಜಿ ಬೌಲರ್ ಚಾಹಲ್, ಸತತ ಎರಡು ವಿಕೆಟ್ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದರು.
ಆದರೆ ಮೂರನೇ ಎಸೆತದಲ್ಲಿ ಫೀಲ್ಡರ್ ಕರುಣ್ ನಾಯರ್ ಕ್ಯಾಚ್ ಕೈಚೆಲ್ಲುವುದರೊಂದಿಗೆ ಚಾಹಲ್ ಅದೃಷ್ಟ ವಂಚಿತರಾದರು.
ಮುಂಬೈ ಚೇಸಿಂಗ್ ವೇಳೆ 16ನೇ ಓವರ್ನಲ್ಲಿ ಟಿಮ್ ಡೇವಿಡ್ ಹಾಗೂ ಡ್ಯಾನಿಯಲ್ ಸ್ಯಾಮ್ಸ್ ವಿಕೆಟ್ಗಳನ್ನು ಕಬಳಿಸಿದ ಚಾಹಲ್ ಪಂದ್ಯಕ್ಕೆ ತಿರುವು ನೀಡುವಲ್ಲಿ ಯಶಸ್ವಿಯಾದರು. ಆದರೆ ಮೂರನೇ ಎಸೆತದಲ್ಲಿ ಬ್ಯಾಟರ್ ಮುರುಗನ್ ಅಶ್ವಿನ್ ಬ್ಯಾಟ್ ಸವರಿದ ಚೆಂಡನ್ನು ಕರುಣ್ ನಾಯರ್ ಹಿಡಿಯುವಲ್ಲಿ ವಿಫಲರಾದರು.
ಓವರ್ ಮುಗಿದ ಬಳಿಕ ಚಾಹಲ್ ಬಳಿ ತೆರಳಿದ ಕರುಣ್ ನಾಯರ್, ತಬ್ಬಿಕೊಂಡು ಸಂತೈಸುತ್ತಿರುವ ದೃಶ್ಯ ಕಂಡುಬಂದಿತು.
ಏತನ್ಮಧ್ಯೆ ಮುಂಬೈ ವಿರುದ್ಧದ ಗೆಲುವಿನೊಂದಿಗೆ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್ ಪಡೆ ಸತತ ಎರಡನೇ ಗೆಲುವು ದಾಖಲಿಸಿದೆ. ಅತ್ತ ಐದು ಬಾರಿಯ ಚಾಂಪಿಯನ್ ಮುಂಬೈ ಸತತ ಎರಡನೇ ಸೋಲಿಗೆ ಶರಣಾಗಿದೆ.