ನವದೆಹಲಿ: ಮುಂದಿನ ತಿಂಗಳು ಕೋಲ್ಕತ್ತದ ಈಡನ್ ಗಾರ್ಡನ್ನಲ್ಲಿ ಆಯೋಜಿಸಿರುವ ಟೆಸ್ಟ್ ಪಂದ್ಯವನ್ನು ಹೊನಲು ಬೆಳಕಿನಲ್ಲಿ ನಡೆಸಲು ಬಿಸಿಸಿಐ ಉತ್ಸುಕವಾಗಿದೆ. ಈ ಕುರಿತು ನಮ್ಮ ಅಭಿಪ್ರಾಯವನ್ನೂ ಕೋರಿದೆ ಎಂದು ಬಾಂಗ್ಲಾ ಕ್ರಿಕೆಟ್ ಸಂಸ್ಥೆ (ಬಿಸಿಬಿ) ತಿಳಿಸಿದೆ.
‘ಅವರು (ಬಿಸಿಸಿಐ) ಪ್ರಸ್ತಾವ ಸಲ್ಲಿಸಿದ್ದಾರೆ. ಮೂರು ದಿನಗಳ ಹಿಂದೆ ನಮಗೆ ಪತ್ರ ಕೈತಲುಪಿದೆ. ಈ ಕುರಿತು ನಮ್ಮ ತಂಡದ ಆಟಗಾರರೊಂದಿಗೆ ಚರ್ಚೆ ನಡೆಸುತ್ತೇವೆ. ಶೀಘ್ರ ಅಂತಿಮ ನಿರ್ಧಾರ ಕೈಗೊಂಡು ಬಿಸಿಸಿಐಗೆ ತಿಳಿಸುತ್ತೇವೆ’ ಎಂದು ಬಿಸಿಬಿ (ಆಪರೇಷನ್ಸ್) ಮುಖ್ಯಸ್ಥ ಅಕ್ರಂ ಖಾನ್ ತಿಳಿಸಿದ್ಧಾರೆ.
ಈ ಕುರಿತು ಬಿಸಿಸಿಐ ನೂತನ ಅಧ್ಯಕ್ಷ, ಕೋಲ್ಕತ್ತದ ಸೌರವ್ ಗಂಗೂಲಿ ಅವರೂ ಒಲವು ತೋರಿದ್ದಾರೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಬಹುತೇಕ ಒಪ್ಪಿಗೆ ಸೂಚಿಸಿದ್ದಾರೆಂದು ಈಚೆಗೆ ವರದಿಯಾಗಿತ್ತು.
‘ಇದೊಂದು ತಾಂತ್ರಿಕ ವಿಷಯವಾಗಿದೆ. ಇದಕ್ಕಾಗಿ ತಂಡವು ಪೂರ್ವಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ನಮ್ಮ ಸದಸ್ಯರು ಮತ್ತು ಆಟಗಾರರ ಅಭಿಪ್ರಾಯ ಪಡೆಯುವುದು ಅತಿ ಮುಖ್ಯವಾಗಿದೆ. ಅವರೊಂದಿಗೆ ಮಾತನಾಡಿದ ನಂತರವಷ್ಟೇ ನಿರ್ಧಾರ ಕೈಗೊಳ್ಳಲು ಸಾಧ್ಯ’ ಎಂದು ಬಿಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಜಾಮುದ್ದೀನ್ ಚೌಧರಿ ಹೇಳಿದ್ದಾರೆ.
ನವೆಂಬರ್ ಮೂರರಿಂದ ಬಾಂಗ್ಲಾ ದೇಶವು ಭಾರತದ ಎದುರು ಮೂರು ಟ್ವೆಂಟಿ–20 ಪಂದ್ಯಗಳ ಸರಣಿಯೊಂದಿಗೆ ಪ್ರವಾಸ ಆರಂಭಸಿಲಿದೆ. ಮೊದಲ ಟೆಸ್ಟ್ ಪಂದ್ಯವು 14ರಿಂದ ಇಂದೋರ್ನಲ್ಲಿ, ಎರಡನೇ ಟೆಸ್ಟ್ ಕೋಲ್ಕತ್ತದಲ್ಲಿ ನವೆಂಬರ್ 22ರಿಂದ ನಡೆಯಲಿದೆ.