ನ್ಯೂಯಾರ್ಕ್: ಪ್ರಸಕ್ತ ವೆಸ್ಟ್ಇಂಡೀಸ್ ಹಾಗೂ ಅಮೆರಿಕದಲ್ಲಿ ಸಾಗುತ್ತಿರುವ ಟ್ವೆಂಟಿ-20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಗುತ್ತಿಗೆ ಒಪ್ಪಂದ ಮುಕ್ತಾಯವಾಗಲಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ನಾಯಕ ರೋಹಿತ್ ಶರ್ಮಾ, 'ನಾನು ರಾಹುಲ್ ದ್ರಾವಿಡ್ ಅವರನ್ನು ಮನವೊಲಿಸಲು ಪ್ರಯತ್ನಿಸಿದ್ದೆ' ಎಂದು ಹೇಳಿದ್ದಾರೆ.
ರಾಹುಲ್ ದ್ರಾವಿಡ್ ಅವರ ವ್ಯಕ್ತಿತ್ವ ಮಾದರಿ ಎಂದಿರುವ ರೋಹಿತ್, ಟಿ20 ವಿಶ್ವಕಪ್ ಬಳಿಕವೂ ಭಾರತ ತಂಡದ ತರಬೇತುದಾರನಾಗಿ ಮುಂದುವರಿಯಲು ವಿಫಲ ಯತ್ನ ನಡೆಸಿರುವೆ ಎಂದಿದ್ದಾರೆ.
ನ್ಯೂಯಾರ್ಕ್ನಲ್ಲಿ ಇಂದು ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಭಾರತ ಐರ್ಲೆಂಡ್ ಸವಾಲನ್ನು ಎದುರಿಸಲಿದೆ.
'ವೈಯಕ್ತಿಕವಾಗಿ ನಾನು ದ್ರಾವಿಡ್ ಅವರೊಂದಿಗೆ ಪ್ರತಿಯೊಂದು ಕ್ಷಣವನ್ನು ನಾನು ಆನಂದಿಸಿದ್ದೇನೆ. ತಂಡದ ಇತರೆ ಆಟಗಾರರು ಇದೇ ಅನಿಸಿಕೆಯನ್ನು ಹೊಂದಿರಲಿದ್ದಾರೆ ಎಂದು ಅಂದುಕೊಂಡಿದ್ದೇವೆ. ದ್ರಾವಿಡ್ ಅವರನ್ನು ಮನವೊಲಿಸಲು ಪ್ರಯತ್ನಿಸಿದ್ದೆ. ಆದರೆ ನಿಸ್ಸಂಶವಾಗಿಯೂ ಅಲ್ಲಿ ಅನೇಕ ವಿಚಾರಗಳಿವೆ' ಎಂದು ಹೇಳಿದ್ದಾರೆ.
'ದ್ರಾವಿಡ್ ಓರ್ವ ಆಟಗಾರ ಹಾಗೂ ಕೋಚ್ ಹಾಗಿ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಅವರಿಂದ ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ' ಎಂದು ಹೇಳಿದ್ದಾರೆ.