ಮುಂಬೈ: ಮಹಾನಗರದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಮುಂದಿನ 24 ಗಂಟೆಗಳ ಕಾಲ ರೆಡ್ ಅಲರ್ಟ್ ಘೋಷಿಸಲಾಗಿದೆ.
ಕೊರೊನಾ ಸೋಂಕು ಸೃಷ್ಟಿಸಿರುವ ತಲ್ಲಣದ ನಡುವೆಯೇ ಮುಂಬೈ ಮಹಾನಗರ ಸೇರಿದಂತೆ ಮಹಾರಾಷ್ಟ್ರದ ಕೆಲ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಕೇಂದ್ರ ಸೂಚಿಸಿದೆ.
ಭಾರಿ ಮಳೆ ಸುರಿದ ಕಾರಣ ಶುಕ್ರವಾರ ಮುಂಬೈ ನಗರವು ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ನಗರದ ಗಾಂಧಿ ಮಾರ್ಕೆಟ್, ಅಂದೇರಿ, ಕೊಲಬಾ, ಕುರ್ಲಾ, ಸಿಯಾನ್ಗಳಕೆಲ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ ಪರಿಣಾಮ ಜನರು ಪರದಾಡುವಂತಾಗಿತ್ತು.
ಇಂದು(ಶನಿವಾರ) ಮುಂಬೈ, ರಾಯಗಢ ಮತ್ತು ರತ್ನಗಿರಿಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಪಾಲ್ಘರ್, ಮುಂಬೈ, ಥಾಣೆ ಮತ್ತು ರಾಯಗಢ ಜಿಲ್ಲೆಗಳ ಅನೇಕ ಸ್ಥಳಗಳಲ್ಲಿ ಶನಿವಾರ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
'ಮುಂದಿನ 24 ಗಂಟೆಗಳ ಕಾಲ, ಅಂದರೆ ಜುಲೈ 3 ರಿಂದ 4 ರವರೆಗೆ, ಮುಂಬೈ, ರಾಯಗಢ ಮತ್ತು ರತ್ನಗಿರಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೆಲವು ಸ್ಥಳಗಳಲ್ಲಿ, ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ' ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.