ಬೆಂಗಳೂರು: ಕೊರೊನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು 9 ಜಿಲ್ಲೆಗಳನ್ನು ಲಾಕ್ಡೌನ್ ಮಾಡಲು ನಿರ್ಧರಿಸಿದೆ.
ಜನಸಂಪರ್ಕವನ್ನು ಕಡಿಮೆ ಮಾಡುವುದು, ಸಾಮಾಜಿಕ ಅಂತರವನ್ನು ಕಾಪಾಡುವುದು ಈ ಮೂಲಕ ಕೊರೊನಾ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡದೇ ಇರುವಂತೆ ಎಚ್ಚರಿಕೆ ವಹಿಸುವುದು ಲಾಕ್ಡೌನ್ನ ಮೂಲ ಉದ್ದೇಶ.
ಲಾಕ್ ಡೌನ್ ಎಂದರೆ ಏನು?
ಲಾಕ್ಡೌನ್ ಅವಧಿಯಲ್ಲಿ ವೈದ್ಯಕೀಯ, ಔಷಧಿ, ದಿನಸಿ ಮತ್ತಿತರ ಜೀವನಾವಶ್ಯಕ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಯಾವುದೇ ಸೇವೆಗಳನ್ನು ರದ್ದು ಮಾಡುವುದೇ ಆಗಿದೆ.
ಸಾರಿಗೆ ವ್ಯವಸ್ಥೆಗಳಾದ ಕೆಎಸ್ಆರ್ಟಿಸಿ, ಖಾಸಗಿ ಬಸ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿಗಳು ಸಂಚಾರ ಬಂದ್ ಆಗಲಿವೆ. ನೆರೆಯ ರಾಜ್ಯಗಳ ವಾಹನಗಳ ಪ್ರವೇಶಕ್ಕೆ ನಿಷೇಧ ವಿಧಿಸಲಾಗುತ್ತದೆ. ಮಾರುಕಟ್ಟೆಗಳು ಸೇರುವುದಿಲ್ಲ. ಸರ್ಕಾರಿ ಕಚೇರಿಗಳನ್ನು ಹೊರತುಪಡಿಸಿ ಇನ್ನೆಲ್ಲ ಕಚೇರಿಗಳು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಆದೇಶಿಸಲಾಗುತ್ತದೆ.
ಜನ ಸಂಪರ್ಕವನ್ನು ತಡೆಯುವ ನಿಟ್ಟಿನಲ್ಲಿ ಸೆಕ್ಷನ್ 144 ಹೇರಲಾಗುತ್ತದೆ. ಅದರಂತೆ ಜನ ಗುಂಪುಗೂಡುವಂತಿಲ್ಲ.
ರಾಜ್ಯದಲ್ಲಿ #ಕೊರೊನಾ ಸೋಂಕು ಹರಡುವಿಕೆ ತಡೆಯಲು ರಾಜ್ಯ ಸರ್ಕಾರ ಮತ್ತಷ್ಟು ತುರ್ತು ನಿರ್ಧಾರಗಳನ್ನು ತೆಗೆದುಕೊಂಡಿದೆ.#Covid_19india #CoronaInKarnataka #FightbackIndia pic.twitter.com/skwc1T78WP
— CM of Karnataka (@CMofKarnataka) March 22, 2020
ಕರ್ನಾಟಕದಲ್ಲಿ ಯಾವ್ಯಾವ ಜಿಲ್ಲೆ ಲಾಕ್ಡೌನ್
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಧಾರವಾಡ, ಮೈಸೂರು, ಕೊಡಗು, ಕಲಬುರ್ಗಿ, ಬೆಳಗಾವಿ, ದಕ್ಷಿಣ ಕನ್ನಡ.
ದೇಶದಲ್ಲೂ ಲಾಕ್ಡೌನ್
ದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ, ಬೆಂಗಳೂರು ಸೇರಿ ಈಗಾಗಲೇ ಪ್ರಮುಖ 8 ಮಹಾನಗರಗಳು ಲಾಕ್ಡೌನ್ ಆಗಿವೆ. ಇದರ ಜೊತೆಗೆ ಮಹಾರಾಷ್ಟ್ರ, ಕೇರಳ, ದೆಹಲಿ, ಗುಜರಾತ್, ಉತ್ತರ ಪ್ರದೇಶ, ಹರಿಯಾಣ, ತೆಲಂಗಾಣ, ರಾಜಸ್ಥಾನ, ಆಂಧ್ರಪ್ರದೇಶ, ತಮಿಳುನಾಡು, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಲಡಾಕ್, ಪಶ್ಚಿಮ ಬಂಗಾಳ, ಚಂಡೀಗಡ, ಚತ್ತೀಸಗಡ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಒಡಿಶಾ, ಪುದುಚೇರಿ, ಉತ್ತರಾಖಂಡದ 75 ಜಿಲ್ಲೆಗಳನ್ನು ಲಾಕ್ ಡೌನ್ ಮಾಡಲಾಗಿದೆ.
ಈ ಎಲ್ಲ ಜಿಲ್ಲೆಗಳಲ್ಲೂ ಕೊರೊನಾ ವೈರಸ್ ಸೋಂಕು ದೃಢಪಟ್ಟ ಪ್ರಕರಣಗಳು ವರದಿಯಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.