ವಿಧಾನಸಭೆಯಲ್ಲಿ ಮಂಗಳವಾರ ಬರದ ಸಮಸ್ಯೆ ಬಗ್ಗೆ ನಿಲುವಳಿ ಸೂಚನೆ ಮಂಡಿಸಿದ ಅವರು, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ‘ಪ್ರಜಾವಾಣಿ’ಯ ‘ಒಳ ನೋಟ’ದ ‘ಮುಖ್ಯ ಎಂಜಿನಿಯರ್ ಹುದ್ದೆಗೆ ₹10 ಕೋಟಿ ಕಪ್ಪ’ ವರದಿಯನ್ನು ಓದಿದರು. ಯಾವ ಹುದ್ದೆ ಎಷ್ಟು ಕೋಟಿಗೆ ಬಿಕರಿಯಾಗಿದೆ ಎಂಬ ಬಗ್ಗೆಯೂ ವರದಿ ಬೆಳಕು ಚೆಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ‘ಈ ವರದಿಯ ಬಗ್ಗೆ ಸರ್ಕಾರ ಚಕಾರ ಎತ್ತಿಲ್ಲ. ಸ್ಪಷ್ಟೀಕರಣವನ್ನೂ ನೀಡಿಲ್ಲ. ಸತ್ಯ ಎಂದು ಒಪ್ಪಿಕೊಂಡಿದೆ’ ಎಂದು ಚುಚ್ಚಿದರು.