ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಹತ್ಯೆ ಸಂಬಂಧ ಎಂಟು ಆರೋಪಿಗಳ ವಿರುದ್ಧ ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿದೆ.
ತನಿಖೆ ಕೈಗೆತ್ತಿಕೊಂಡಿದ್ದ ಸಿಬಿಐ ಚೆನ್ನೈ ಹಾಗೂ ಬೆಂಗಳೂರು ತಂಡ, ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿತ್ತು. ಇದೀಗ ಪ್ರಕರಣದ ದೋಷಾರೋಪ ಪಟ್ಟಿಯನ್ನು ಧಾರವಾಡದ ನ್ಯಾಯಾಲಯಕ್ಕೆ ಸಲ್ಲಿಸಿದೆ.
ಸಂತೋಷ ಸವದತ್ತಿ, ಎಂ.ದಿನೇಶ್, ಕೆ.ಎಸ್.ಸುನೀಲ್, ಹರ್ಷಿತ್, ಎಸ್.ಅಶ್ವತ್, ನಜೀರ್ ಅಹ್ಮದ್, ಶಹನವಾಜ್ ಹಾಗೂ ಕೆ.ಎಸ್. ನೂತನ್ನನ್ನು ಆರೋಪಿಯನ್ನಾಗಿ ಮಾಡಲಾಗಿದೆ.
'ಇವರೆಲ್ಲರೂ ಒಳಸಂಚು ಮಾಡಿ ಯೋಗೀಶಗೌಡ ಅವರನ್ನು ಹತ್ಯೆ ಮಾಡಿದ್ದರು. ಹತ್ಯೆಯಲ್ಲಿ ಮತ್ತಷ್ಟು ಆರೋಪಿಗಳು ಇದ್ದಾರೆ. ಸಾಕ್ಷ್ಯ ನಾಶಕ್ಕೂ ಕೆಲವರು ಪ್ರಯತ್ನಿಸಿದ್ದಾರೆ. ಅವರೆಲ್ಲರ ಬಗ್ಗೆಯೂ ತನಿಖೆ ಮುಂದುವರಿಯಲಿದೆ' ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದರು.
ಹಳಬರ ಹೆಸರಿಲ್ಲ: ಹತ್ಯೆ ಸಂಬಂಧ ಧಾರವಾಡ ಉಪನಗರ ಪೊಲೀಸರು, ಬಸವರಾಜ್ ಮುತ್ತಗಿ ಸೇರಿ ಆರು ಆರೋಪಿಗಳನ್ನು ಬಂಧಿಸಿದ್ದರು. ಅವರ ವಿರುದ್ದ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಆದರೆ, ಈಗ ಸಿಬಿಐ ಸಲ್ಲಿಸಿರುವ ಪಟ್ಟಿಯಲ್ಲಿ ಮುತ್ತಗಿ ಹೆಸರಿಲ್ಲ.