ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರು, ಪೂಜೆಯ ‘ನೇರ ದರ್ಶನ’ಕ್ಕೆ ಆನ್‌ಲೈನ್‌ ವ್ಯವಸ್ಥೆ!

ಮುಜರಾಯಿ ಇಲಾಖೆಯಿಂದ ಸಿದ್ಧತೆ: ಸೇವೆ ಕಾಯ್ದಿರಿಸಲು ಮೊಬೈಲ್‌ ಆ್ಯಪ್, ವೆಬ್‌ಸೈಟ್‌ ಅಭಿವೃದ್ಧಿ
Last Updated 20 ಮೇ 2020, 13:13 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಕಾರಣಕ್ಕೆ ದೇವಸ್ಥಾನಗಳೆಲ್ಲ ಬಾಗಿಲು ಮುಚ್ಚಿದ್ದು, ದೇವರ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಭಕ್ತಾಧಿಗಳಿಗೆ ದೇವರು, ಸೇವಾ ಪೂಜಾ ಕೈಕಂರ್ಯಗಳ ನೇರ ವೀಕ್ಷಣೆಗೆ ಆನ್‌ಲೈನ್‌ ಮೂಲಕ ವ್ಯವಸ್ಥೆ ಕಲ್ಪಿಸಲು ಮುಜರಾಯಿ ಇಲಾಖೆ ನಿರ್ಧರಿಸಿದೆ.

ಅಲ್ಲದೆ, ‘ಎ’ ವರ್ಗದ ದೇವಾಲಯಗಳಲ್ಲಿ ನಡೆಯುವ ಎಲ್ಲ ಸೇವೆಗಳ ವಿವರ ಮತ್ತುಆನ್‌ಲೈನ್‌ ಮೂಲಕ ಕಾಯ್ದಿರಿಸಬಹುದಾದ ಸೇವೆಗಳ ಮಾಹಿತಿಯನ್ನು ಭಕ್ತರಿಗೆ ನೀಡುವ ಉದ್ದೇಶದಿಂದ ಮೊಬೈಲ್‌ ಆ್ಯಪ್‌ ಮತ್ತು ವೆಬ್ ಆಧಾರಿತ ತಂತ್ರಾಂಶ ಅಭಿವೃದ್ಧಿಪಡಿಸಲು ಕೂಡಾ ಇಲಾಖೆ ತೀರ್ಮಾನಿಸಿದೆ.

ಆನ್‌ಲೈನ್‌ ನೇರ ಪ್ರಸಾರಕ್ಕೆ ಸಂಬಂಧಿಸಿದಂತೆ ಇಲಾಖೆಯ ಆಯುಕ್ತರು ಎಲ್ಲ ಜಿಲ್ಲಾಧಿಕಾರಿಗಳು ಮತ್ತು ದೇವಸ್ಥಾನಗಳ ಕಾರ್ಯನಿರ್ವಾಹಕರಿಗೆ ಪತ್ರ ಬರೆದಿದ್ದಾರೆ. ಅವರವರ ವ್ಯಾಪ್ತಿಯಲ್ಲಿರುವ ದೇವಾಲಯಗಳಲ್ಲಿ ನಡೆಯುವ ಸೇವಾ ಪೂಜಾ ಕೈಕಂರ್ಯಗಳನ್ನು ಆಯಾ ದೇವಾಲಯದ ರೂಢಿ, ಸಂಪ್ರದಾಯ ಮತ್ತು ಆಚರಣೆಗೆ ಒಳಪಟ್ಟು ಆನ್‌ಲೈನ್‌ ಮೂಲಕ ವೀಕ್ಷಣೆಯ ವ್ಯವಸ್ಥೆ ಒದಗಿಸಬಹುದಾದ ದೇವಾಲಯಗಳ ಪಟ್ಟಿ ನೀಡುವಂತೆ ಪತ್ರದಲ್ಲಿ ಕೋರಿದ್ದಾರೆ.

ಮೊಬೈಲ್‌ ಆ್ಯಪ್‌, ವೆಬ್‌ಸೈಟ್‌: 15 ಜಿಲ್ಲೆಗಳ (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಬೆಳಗಾವಿ, ಮಂಡ್ಯ, ಚಾಮರಾಜನಗರ, ಯಾದಗಿರಿ, ಕೊಡಗು, ಗದಗ, ಚಿಕ್ಕಬಳ್ಳಾಪುರ, ಬಳ್ಳಾರಿ, ರಾಯಚೂರು, ಚಿತ್ರದುರ್ಗ, ದಾವಣಗೆರೆ, ಉಡುಪಿ) ಜಿಲ್ಲಾಧಿಕಾರಿಗಳು ಮತ್ತು ‘ಎ’ ವರ್ಗದ ದೇವಸ್ಥಾನಗಳ ಕಾರ್ಯನಿರ್ವಹಣಾಧಿಕಾರಿಗಳಿಗೆ, ಆಡಳಿತಾಧಿಕಾರಿಗಳಿಗೆ ಮತ್ತು ಅನುವಂಶಿಕ ಮೊಕ್ತೇಸರರಿಗೆ ಪತ್ರ ಬರೆದಿರುವ ಆಯುಕ್ತರು, ಮೊಬೈಲ್‌ ಆ್ಯಪ್‌ ಮತ್ತು ವೆಬ್‌ಸೈಟ್‌ಗೆ ಅಗತ್ಯವಾದ ಮಾಹಿತಿಗಳನ್ನು ತಕ್ಷಣ ನೀಡುವಂತೆ ತಿಳಿಸಿದ್ದಾರೆ.

ಮೊಬೈಲ್‌ ಆ್ಯಪ್‌ ಮತ್ತು ವೆಬ್‌ಸೈಟ್‌ ಅಭಿವೃದ್ಧಿಪಡಿಸುವ ಯೋಜನೆಯನ್ನು ಉಚಿತವಾಗಿ ಒದಗಿಸಲು ಕೆಲವು ಷರತ್ತುಗಳನ್ನು ವಿಧಿಸಿ ಮೈಸೂರಿನ ಸ್ಪಿರಿಚುವಲ್‌ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಅನುಮತಿ ನೀಡಲಾಗಿದೆ. ದೇವಾಲಯಗಳಲ್ಲಿ ನಡೆಯುವ ಎಲ್ಲ ಸೇವೆಗಳ ವಿವರ ಮತ್ತು ದರ, ಪೂಜಾ ಕೈಕಂರ್ಯದ ಸಮಯ ಹಾಗೂ ಆನ್‌ಲೈನ್‌ ಮೂಲಕ ಕಾಯ್ದಿರಿಸಬಹುದಾದ ಸೇವೆಗಳು, ಕಾದಿರಿಸಲು ಲಭ್ಯವಿರುವ ದಿನ, ಈವರೆಗೆ ಬುಕ್ ಆಗಿರುವ ದಿನಾಂಕ, ದಿನಕ್ಕೆ ಎಷ್ಟು ಸೇವೆ ಮಾಡಬಹುದು, ಪ್ರಸಾದ ತಲುಪಿಸಲು ಸಾಧ್ಯವೇ ಮತ್ತಿತರ ಮಾಹಿತಿಯನ್ನು ನೀಡುವಂತೆ ಪತ್ರದಲ್ಲಿ ಆಯುಕ್ತರು ತಿಳಿಸಿದ್ದಾರೆ.

ಮಾರ್ಚ್ 20ರಿಂದ ಬಂದ್: ಕೊರೊನಾ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ, ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ಎಲ್ಲ ದೇವಾಲಯಗಳಲ್ಲಿ ನಡೆಯುವ ಸೇವೆಗಳು, ಜಾತ್ರೆಗಳು, ದಾಸೋಹ, ಪ್ರಸಾದ–ತೀರ್ಥ ವಿತರಣೆ, ದೇವರ ದರ್ಶನವನ್ನು ಮುಜರಾಯಿ ಇಲಾಖೆ ಮಾರ್ಚ್ 20ರಿಂದ ರದ್ದುಪಡಿಸಿದೆ. ಶಾಸ್ತ್ರ, ಸಂಪ್ರದಾಯದಂತೆ ನಿತ್ಯದ ಪೂಜಾ, ವಿಧಿವಿಧಾನಗಳನ್ನು ದೇವಸ್ಥಾನದ ಒಳಗೆ ನಡೆಸಲು ತಂತ್ರಿಗಳು, ಅರ್ಚಕರು, ದೇವಾಲಯ ಸಿಬ್ಬಂದಿಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT