ಬೆಂಗಳೂರು: ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ನ 12 ಮಂದಿ ಶಾಸಕರು ರಾಜೀನಾಮೆ ಕೊಟ್ಟಿದ್ದು, ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿಯುವ ಆತಂಕ ಎದುರಿಸುತ್ತಿದೆ.
ಇದನ್ನೂ ಓದಿ:ರಾಜೀನಾಮೆ ಬೃಹನ್ನಾಟಕಕ್ಕೆ ಶಕ್ತಿಸೌಧ ದಂಗು
ರಾಜೀನಾಮೆ ಹಿಂಪಡೆಯುವಂತೆ ತಮ್ಮ ಪಕ್ಷದ ಶಾಸಕರ ಮನವೊಲಿಸಲು ಕಾಂಗ್ರೆಸ್ ರಾಜ್ಯ ನಾಯಕರು ನಡೆಸಿರುವ ಕೊನೆಯ ಕ್ಷಣದ ಕಸರತ್ತು ಫಲ ಕೊಟ್ಟಿಲ್ಲ. ಇನ್ನೂ 9 ಶಾಸಕರು ಸೋಮವಾರದ ವೇಳೆಗೆ ರಾಜೀನಾಮೆ ನೀಡಲಿದ್ದಾರೆ. ಒಟ್ಟು 22 ಶಾಸಕರು ಕಮಲ ಪಾಳಯವನ್ನು ಸೇರಲಿದ್ದಾರೆ ಎಂದು ಬಿಜೆಪಿ ಮೂಲಗಳು ಪ್ರತಿಪಾದಿಸುತ್ತಿವೆ.
ಇದನ್ನೂ ಓದಿ:ಸದ್ದಿಲ್ಲದೇ ಖೆಡ್ಡಾಕ್ಕೆ ಕೆಡವಿತೇ ಬಿಜೆಪಿ
ರಾಜೀನಾಮೆ ನೀಡಿದ 10 ಶಾಸಕರು ಎಚ್ಎಎಲ್ ವಿಮಾನ ನಿಲ್ದಾಣದ ಮೂಲಕ ಲೋಹದ ಹಕ್ಕಿ ಏರಿ ನಿಗೂಢ ಸ್ಥಳಕ್ಕೆ ತೆರಳಿದ್ದಾರೆ. ಈ ಶಾಸಕರು ತಮ್ಮ ಫೋನ್ ಕರೆಗೂ ಸಿಗದಿರುವುದರಿಂದ ಕೈ ಪಾಳಯ ತಳಮಳಗೊಂಡಿದೆ. ಪಕ್ಷದ ಕಟ್ಟಾಳುಗಳು ಹಾಗೂ ಸಿದ್ದರಾಮಯ್ಯ ನಿಷ್ಠರೆಂದು ಗುರುತಿಸಿಕೊಂಡಿದ್ದ ಶಾಸಕರೇ ಈಗ ‘ಆಪರೇಷನ್ ಕಮಲ’ದ ದಾಳಕ್ಕೆ ಸಿಲುಕಿರುವುದು ನಾಯಕರನ್ನು ದಿಗ್ಭ್ರಮೆಗೆ ದೂಡಿದೆ.
ಇದನ್ನೂ ಓದಿ:ಕ್ಷಿಪ್ರ ಕ್ರಾಂತಿ ಹಿಂದೆ ಯಾರ ಕೈವಾಡ?
ರಮೇಶ ಜಾರಕಿಹೊಳಿ, ಎಚ್.ವಿಶ್ವನಾಥ್ ಹಾಗೂ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಮೂರು ಗುಂಪುಗಳಾಗಿ ಮೈತ್ರಿಕೂಟದ ಶಾಸಕರು ಸ್ಪೀಕರ್ ಕಚೇರಿಯಲ್ಲಿ ರಾಜೀನಾಮೆ ಸಲ್ಲಿಸಿದ್ದಾರೆ. ಅನೂಹ್ಯ ಬೆಳವಣಿಗೆಯೊಂದರಲ್ಲಿ, ರಾಜಧಾನಿಯ ಐವರು ಶಾಸಕರು ಅತೃಪ್ತರ ಗುಂಪಿಗೆ ಸೇರಿಕೊಂಡು ಮೈತ್ರಿ ನಾಯಕರಿಗೆ ಶಾಕ್ ನೀಡಿದ್ದಾರೆ.
ಇದನ್ನೂ ಓದಿ:ಖರ್ಗೆ ಹೆಗಲಿಗೆ ಸರ್ಕಾರ ಉಳಿಸುವ ಹೊಣೆ
ಸಿದ್ದರಾಮಯ್ಯ ಅತ್ಯಾಪ್ತರಾದ ಎಸ್.ಟಿ.ಸೋಮಶೇಖರ್, ಮುನಿರತ್ನ ಹಾಗೂ ಬೈರತಿ ಬಸವರಾಜ್ ಮತ್ತೆ ಪಕ್ಷ ನಿಷ್ಠೆ ತೋರಬಹುದು ಎಂಬ ಸಣ್ಣ ನಿರೀಕ್ಷೆಯಲ್ಲಿ ‘ಕೈ’ ನಾಯಕರು ಇದ್ದಾರೆ. ಈ ಸಂಭಾವ್ಯ ಬೆಳವಣಿಗೆಯನ್ನು ಗಮನಿಸಿರುವ ಬಿಜೆಪಿ ನಾಯಕರು, ಇನ್ನಷ್ಟು ನಾಯಕರನ್ನು ಸೆಳೆದು ಕುಮಾರಸ್ವಾಮಿ ಸರ್ಕಾರವನ್ನು ಅಲ್ಪಮತಕ್ಕೆ ಕುಸಿಯುವಂತೆ ಮಾಡುವ ತಂತ್ರ ರೂಪಿಸಿದ್ದಾರೆ.
ಇದನ್ನೂ ಓದಿ:ಆಸರೆ ನೀಡಿದವರನ್ನೇ ಕೈಬಿಟ್ಟ ಅಡಗೂರು
ಬೆಂಗಳೂರಿಗೆ ದಿಢೀರ್ ಧಾವಿಸಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ರಾಜ್ಯ ನಾಯಕರ ಜತೆ ಸುದೀರ್ಘ ಸಮಾಲೋಚನೆ ನಡೆಸಿದರು.ಬಿಜೆಪಿಯ ಶಾಸಕರನ್ನು ಪ್ರತಿ ಆಪರೇಷನ್ ಮಾಡಿಸುವ ಮೂಲಕ ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ನಾಯಕರು ಕಸರತ್ತು ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ:ರಾಜೀನಾಮೆ ಕೊಟ್ಟವರಿಗೆ ವಿಪ್ ಅನ್ವಯಿಸದು: ತಜ್ಞರು
ಬಿಜೆಪಿ ಕನಸು: ಮೈತ್ರಿಕೂಟದ 13 ಶಾಸಕರ ರಾಜೀನಾಮೆ ಅಂಗೀಕಾರವಾದರೆ ವಿಧಾನಸಭೆಯ ಒಟ್ಟು ಬಲ 211ಕ್ಕೆ ಕುಸಿಯಲಿದೆ. ಆಗ ಬಹುಮತ ಸಾಬೀತಪಡಿಸಲು ಮೈತ್ರಿಕೂಟಕ್ಕೆ 106 ಶಾಸಕರ ಬೆಂಬಲ ಬೇಕು. ಇನ್ನಷ್ಟು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ಹಬ್ಬಿದ್ದು, ಒಂದು ವೇಳೆ ಈ ಬೆಳವಣಿಗೆ ಘಟಿಸಿದರೆ ಜೆಡಿಎಸ್–ಕಾಂಗ್ರೆಸ್ ಬಲ 100ಕ್ಕಿಂತ ಕಡಿಮೆ ಆಗಲಿದೆ.
ಬಿಜೆಪಿ 105 ಶಾಸಕರನ್ನು ಹೊಂದಿದೆ. ಬಿಎಸ್ಪಿಯ ಎನ್. ಮಹೇಶ್ ಹಾಗೂ ಪ್ರಸ್ತುತ ಸಚಿವರಾಗಿರುವ ಪಕ್ಷೇತರ ಶಾಸಕರಿಬ್ಬರ ಬೆಂಬಲವೂ ಸಿಗಬಹುದು ಎಂಬ ನಿರೀಕ್ಷೆಯಲ್ಲಿದೆ. ಇದು ಸಾಧ್ಯವಾದರೆ ಬಿಜೆಪಿ ಬಲ 108ಕ್ಕೆ ಏರಲಿದೆ. ಆಗ ಸರ್ಕಾರ ರಚನೆಗೆ ಹಕ್ಕು ಮಂಡಿಸಬಹುದು. ಬಿ.ಎಸ್.ಯಡಿಯೂರಪ್ಪ ನಾಲ್ಕನೇ ಬಾರಿ ಮುಖ್ಯಮಂತ್ರಿ ಗಾದಿಗೆ ಏರಬಹುದು ಎಂಬ ಲೆಕ್ಕಾಚಾರ ಬಿಜೆಪಿ ನಾಯಕರದ್ದಾಗಿದೆ.
ಮೈತ್ರಿಕೂಟ ಏನು ಮಾಡಬಹುದು?
* ಶಾಸಕರ ರಾಜೀನಾಮೆ ಅಂಗೀಕರಿಸದಂತೆ ವಿಧಾನಸಭಾಧ್ಯಕ್ಷರ ಮನವೊಲಿಸಬಹುದು.
* ಅತೃಪ್ತ ಶಾಸಕರ ಮನವೊಲಿಸಿ ಪಕ್ಷದಲ್ಲೇ ಉಳಿಯುವಂತೆ ನೋಡಿಕೊಳ್ಳಬಹುದು.
* ಎಲ್ಲ ಸಚಿವರು ರಾಜೀನಾಮೆ ನೀಡಿ ಅತೃಪ್ತರಿಗೆ ಸಚಿವ ಸ್ಥಾನ ನೀಡಿ ಸಮಾಧಾನಪಡಿಸಬಹುದು
* ಬಿಜೆಪಿಯ ಐದಾರು ಶಾಸಕರನ್ನು ಸೆಳೆದು ಪ್ರತಿ ಆಪರೇಷನ್ ಮಾಡಬಹುದು.
ಬಿಜೆಪಿ ಲೆಕ್ಕಾಚಾರವೇನು?
* ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ವಿಶ್ವಾಸ ಮತ ಸಾಬೀತುಪಡಿಸಲು ಮುಖ್ಯಮಂತ್ರಿಗೆ ಸೂಚಿಸಿ ಎಂದು ರಾಜ್ಯಪಾಲರಿಗೆ ಕೋರಬಹುದು.
* ಸರ್ಕಾರ ವಿಶ್ವಾಸಮತ ಸಾಬೀತುಪಡಿಸಲು ವಿಫಲವಾದರೆ ಸರ್ಕಾರ ರಚನೆಗೆ ಹಕ್ಕು ಮಂಡಿಸಬಹುದು.
* ಸರ್ಕಾರ ರಚನೆ ಸಾಧ್ಯವಾಗದಿದ್ದರೆ ರಾಷ್ಟ್ರಪತಿ ಆಳ್ವಿಕೆಗೆ ಒತ್ತಡ ಹೇರಬಹುದು
*ಸಭಾಧ್ಯಕ್ಷರು ಶಾಸಕರ ರಾಜೀನಾಮೆಯನ್ನು ಅಂಗೀಕರಿಸದೇ ಇದ್ದರೆ ತಮ್ಮ ಬಲ ಪ್ರದರ್ಶಿಸಲು ರಾಜಭವನಕ್ಕೆ ಪರೇಡ್ ಮಾಡಬಹುದು.
* ರಾಜ್ಯಪಾಲರು ಸೂಚಿಸಿದರೆ ವಿಶ್ವಾಸ ಮತ ಯಾಚನೆ ವೇಳೆ ಮತ್ತಷ್ಟು ಶಾಸಕರ ರಾಜೀನಾಮೆ ಕೊಡಿಸಿ ಸರ್ಕಾರದ ಬಲ ಕುಸಿಯುವಂತೆ ಮಾಡಬಹುದು.
ರಾಜ್ಯಪಾಲರು ಏನು ಮಾಡಬಹುದು?
* ವಿಶ್ವಾಸಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿಗೆ ನಿರ್ದೇಶನ ನೀಡಬಹುದು.
*ಶಾಸಕರ ರಾಜೀನಾಮೆಯನ್ನು ಸಭಾಧ್ಯಕ್ಷರು ಅಂಗೀಕರಿಸದಿದ್ದರೆ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿದೆ ಎಂದು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಬಹುದು.
***
ರಾಜೀನಾಮೆ ಬಗ್ಗೆ ಮಂಗಳವಾರ ಪರಿಶೀಲಿಸುವುದಾಗಿ ಸ್ಪೀಕರ್ ಹೇಳಿದ್ದಾರೆ. ಅಲ್ಲಿಯವರೆಗೆ ಕಾದು ನೋಡೋಣ.
- ಎಚ್.ಡಿ.ದೇವೇಗೌಡ,ಜೆಡಿಎಸ್ ವರಿಷ್ಠ
ರಾಮಲಿಂಗಾರೆಡ್ಡಿ, ಮುನಿರತ್ನ, ಎಸ್.ಟಿ. ಸೋಮಶೇಖರ್ ಮತ್ತು ಬೈರತಿ ಬಸವರಾಜ್ ಜತೆ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿದ್ದಾರೆ. ಸರ್ಕಾರ ಅಸ್ಥಿರವಾಗುವ ಪ್ರಶ್ನೆ ಇಲ್ಲ.
- ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ
ಶಾಸಕರ ರಾಜೀನಾಮೆ ಹಿಂದೆ ನಮ್ಮ ಪಾತ್ರ ಇಲ್ಲ. ರಾಜೀನಾಮೆ ಅಂಗೀಕಾರವಾದ ಬಳಿಕ ಹೈಕಮಾಂಡ್ ಜತೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ.
- ಬಿ.ಎಸ್.ಯಡಿಯೂರಪ್ಪ,ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
* ಇವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.