ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೀಸೆಲ್, ಪೆಟ್ರೋಲ್ ದರ ಏರಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ

Last Updated 12 ಜೂನ್ 2020, 14:35 IST
ಅಕ್ಷರ ಗಾತ್ರ

ಬೆಂಗಳೂರು: ಆರು ದಿನಗಳಿಂದ ನಿರಂತರವಾಗಿ ಪೆಟ್ರೋಲ್ ಹಾಗೂ ಡೀಸೆಲ್ ದರ ಗಣನೀಯವಾಗಿ ಏರುತ್ತಲೇ ಬಂದಿದೆ. ಕೋವಿಡ್ 19 ಪಿಡುಗಿನ ಸಂಕಷ್ಟ ಪರಿಸ್ಥಿತಿಯಲ್ಲಿ ಸಿಲುಕಿ ನರಳುತ್ತಿರುವ ಜನಸಾಮಾನ್ಯರ ರಕ್ಷಣೆಗೆ ನಿಲ್ಲಬೇಕಾದ ಸರ್ಕಾರವೇ ಅವರನ್ನು ಲೂಟಿ ಮಾಡಲು ಮುಂದಾಗಿರೋದು ಆತಂಕಕಾರಿ ಬೆಳವಣಿಗೆ. ಹೀಗೆ ಜನರನ್ನು ಕಿತ್ತು ತಿನ್ನುವ ಪ್ರವೃತ್ತಿಯನ್ನು ಕೇಂದ್ರ ಸರ್ಕಾರ ನಿಲ್ಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.

ಈ ಬಗ್ಗೆ ಶುಕ್ರವಾರ ಹೇಳಿಕೆ ನೀಡಿರುವ ಅವರು, ಭಾನುವಾರದಿಂದ ಇವತ್ತಿನವರೆಗೂ ಪೆಟ್ರೋಲ್ ಪ್ರತಿ ಲೀಟರ್‌ಗೆ ₹3.31 ಹಾಗೂ ಡೀಸೆಲ್ ಪ್ರತಿ ಲೀಟರ್‌ಗೆ ₹3.42 ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹76.57 ಹಾಗೂ ಡೀಸೆಲ್ ದರ ₹69.22 ಆಗಿದೆ ಎಂದು ಆರೋಪಿಸಿದ್ದಾರೆ.

ಕೋವಿಡ್ ಪಿಡುಗು ಹಾಗೂ ಕೇಂದ್ರ ಸರ್ಕಾರದ ಅವೈಜ್ಞಾನಿಕ ಲಾಕ್‌ಡೌನ್‌ನಿಂದಾಗಿ ಭಾರತದ ಕೈಗಾರಿಕೆ, ವ್ಯಾಪಾರೋದ್ಯಮ, ಆರ್ಥಿಕ ವಲಯ ನೆಲಕಚ್ಚಿದೆ. ಇಂಥ ಸಂಕಷ್ಟದ ಸಮಯದಲ್ಲಿ ಅವುಗಳು ಮತ್ತೆ ಎದ್ದು ನಿಲ್ಲಲು ಸರ್ಕಾರದಿಂದ ದೊಡ್ಡ ಮಟ್ಟದ ನೆರವಿನ ಅಗತ್ಯವಿದೆ. ಆದರೆ ಸರ್ಕಾರ ಅದರ ಬದಲು ಇಂಧನ ಬೆಲೆ ಏರಿಕೆ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆಯುತ್ತಿದೆ.
2011ರಲ್ಲಿ ಯುಪಿಎ ಸರ್ಕಾರ ಇದ್ದಾಗ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲಬೆಲೆ ಪ್ರತಿ ಬ್ಯಾರೆಲ್‌ಗೆ 110 ಅಮೆರಿಕನ್ ಡಾಲರ್ ಇತ್ತು. ಈಗ ಪ್ರತಿ ಬ್ಯಾರೆಲ್‌ಗೆ 30 ಅಮೆರಿಕನ್ ಡಾಲರ್ ಮಾತ್ರ. ಅಲ್ಲಿಗೆ ಪ್ರತಿ ಬ್ಯಾರೆಲ್ ಬೆಲೆ ಶೇ.70 ರಷ್ಟು ಅಂದರೆ 80 ಅಮೆರಿಕನ್ ಡಾಲರ್‌ನಷ್ಟು ಇಳಿದಿದೆ. ಆದರೆ ಗ್ರಾಹಕನಿಗೆ ಸಿಗುತ್ತಿರುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮಾತ್ರ ಇಳಿದಿಲ್ಲ. ಆಗಲೂ ಪೆಟ್ರೋಲ್ ಬೆಲೆ ₹70 ಆಸುಪಾಸಿನಲ್ಲಿತ್ತು. ಈಗಲೂ ಅಷ್ಟೇ ಇದೆ. ಕಚ್ಚಾತೈಲ ಬೆಲೆ ಕುಸಿತದ ನಯಾ ಪೈಸೆ ಲಾಭ ಗ್ರಾಹಕನಿಗೆ ಸಿಗುತ್ತಿಲ್ಲ.

ಈ ವರ್ಷದ ಆರಂಭದಿಂದಲೇ ಕಚ್ಚಾ ತೈಲ ಬೆಲೆ ಇಳಿಕೆ ಪ್ರಮಾಣ ಪರಿಶೀಲಿಸಿದರೆ ಕೇಂದ್ರ ಸರಕಾರ ಜನರಿಗೆ ಮಾಡುತ್ತಿರುವ ಮೋಸದ ಅರಿವಾಗುತ್ತದೆ. ಜನವರಿಯಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲ ಬೆಲೆ 64.98 ಅಮೆರಿಕನ್ ಡಾಲರ್ ನಷ್ಟಿತ್ತು. ಮೇ 4ರಂದು ಪ್ರತಿ ಬ್ಯಾರೆಲ್ ಮೊತ್ತ 29.14 ಡಾಲರ್‌ಗೆ ಇಳಿದಿತ್ತು. ಈ ವರ್ಷದ ಆರಂಭದ ದರ ಹಾಗೂ ಈಗಿನ ದರಕ್ಕೆ ಹೋಲಿಸಿದರೆ ಶೇ.50 ರಷ್ಟು ಕುಸಿತವಾಗಿದೆ. ಈ ಬೆಲೆ ಕುಸಿತದ ಪ್ರಯೋಜನ ಜನ ಸಾಮಾನ್ಯರಿಗೆ ಸಿಕ್ಕಿದೆಯೇ ಎಂಬ ಪ್ರಶ್ನೆಗೆ ಸಿಗುವ ಉತ್ತರ ಮಾತ್ರ ನಕಾರಾತ್ಮಕವಾಗಿದೆ.

ಕೋವಿಡ್ ವಿರುದ್ಧ ಜನ ಹೋರಾಡುತ್ತಿರುವ ಸಂದರ್ಭದ ಮೇ ತಿಂಗಳಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ಸುಂಕವನ್ನು ₹ 10 ಗೆ (ಅಬಕಾರಿ ಸುಂಕ ₹2, ರಸ್ತೆ ಸೆಸ್ ₹ 8) ಹಾಗೂ ಡೀಸೇಲ್ ಮೇಲಿನ ಸುಂಕವನ್ನು ₹13 ಕ್ಕೆ (ಅಬಕಾರಿ ಸುಂಕ 5 ರೂ, ರಸ್ತೆ ಸೆಸ್ 8 ರೂ.) ಹೆಚ್ಚಿಸಿದೆ. ಹೀಗಾಗಿ ತೈಲಬೆಲೆ ಇಳಿದರೂ ಗ್ರಾಹಕರಿಗೆ ಅದರ ಲಾಭ ಸಿಗದಂತಾಯಿತು.

ಈಗ ಕಳೆದ ಆರು ದಿನದಲ್ಲಿ ಪ್ರತಿ ಲೀಟರ್ ಗೆ 3 ರೂಪಾಯಿಗೂ ಹೆಚ್ಚು ಬೆಲೆ ಏರಿಸಿದೆ. ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಶೇ.275 ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ವಿಧಿಸಿದ್ದು, ಇಡೀ ಪ್ರಪಂಚದಲ್ಲಿ ಇಂಧನ ಮೇಲೆ ಅತಿ ಹೆಚ್ಚು ತೆರಿಗೆ ವಿಧಿಸಿರುವ ದೇಶ ಭಾರತವಾಗಿದೆ. ಕೇಂದ್ರ ಸರ್ಕಾರದ ಈ ಅಮಾನವೀಯ ಧೋರಣೆಯಿಂದ ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗದೇ ಮತ್ತಷ್ಟು ಏರಿಕೆಯಾಗುತ್ತಿದ್ದು, ಸಂಕಷ್ಟದಲ್ಲಿರುವ ಜನ ಸಾಮಾನ್ಯರು ತಮಗೆ ಬೇಕಾದ ದಿನಬಳಕೆ ವಸ್ತುಗಳನ್ನು ಖರೀದಿಸಲು ಪರದಾಡುವಂತಾಗಿದೆ.

ಇಂಧನ ಬೆಲೆ ಏರಿಕೆ ಕೈಗಾರಿಕೆ, ಸಣ್ಣ ಹಾಗೂ ಮಧ್ಯಮ ಹಂತದ ಉದ್ದಿಮೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕ್ಯಾಮೆರಾ ಮುಂದೆ ಆತ್ಮನಿರ್ಭರ ಭಾರತ, ಸ್ವಾವಲಂಬನೆ, ಸವಾಲು ಮೆಟ್ಟಿ ನಿಲ್ಲುವ ವಿಚಾರವಾಗಿ ಬಣ್ಣ ಬಣ್ಣದ ಮಾತುಗಳನ್ನಾಡುವ ಪ್ರಧಾನಿ ಮೋದಿ ಅವರು ಕ್ಯಾಮೆರಾ ಹಿಂದೆ ಜನರ ರಕ್ತ ಹೀರುತ್ತಿದ್ದಾರೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ತಕ್ಷಣವೇ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಅಂತರರಾಷ್ಟ್ರೀಯ ತೈಲಬೆಲೆ ಇಳಿಕೆ ಪ್ರಮಾಣಕ್ಕೆ ಅನುಗುಣವಾಗಿ ಕಡಿಮೆ ಮಾಡಬೇಕೆಂದು ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT