ನರಗುಂದ: ಬೆಲೆ ಕುಸಿತದಿಂದ ನೊಂದ ತಾಲ್ಲೂಕಿನ ರಡ್ಡೇರನಾಗನೂರು ಗ್ರಾಮದ ರೈತ ವೆಂಕನಗೌಡ ಪಾಟೀಲ 5 ಎಕರೆಯಲ್ಲಿ ಬೆಳೆದಿದ್ದ, ಕಟಾವಿಗೆ ಬಂದಿದ್ದ ಅಂದಾಜು 300 ಕ್ವಿಂಟಲ್ನಷ್ಟು ಈರುಳ್ಳಿಯನ್ನು ಟ್ರಾಕ್ಟರ್ನಿಂದ ನಾಶಪಡಿಸಿದ್ದಾರೆ.
ಲಾಕ್ಡೌನ್ ಸಡಿಲಿಕೆ ನಂತರ ಈರುಳ್ಳಿ ಕೀಳಲು ಮುಂದಾಗಿದ್ದರು. ವ್ಯಾಪಾರಿಗಳು ಕ್ವಿಂಟಲ್ಗೆ ಗರಿಷ್ಠ ₹500ಕ್ಕೆ ಕೇಳಿದರು. ಕೃಷಿಗೆ ಸುಮಾರು ₹2 ಲಕ್ಷ ಖರ್ಚು ವ್ಯಯಿಸಿದ್ದ ಅವರು, ಬೆಲೆ ಕುಸಿತದಿಂದ ಹತಾಶರಾಗಿ ಇಡೀ ಬೆಳೆಯನ್ನೇ ಹರಗಿ ನಾಶಪಡಿಸಿದರು.
‘ಲಾಕ್ಡೌನ್ ಇದ್ದಿದ್ದರಿಂದ 3 ತಿಂಗಳಿಂದ ಈರುಳ್ಳಿ ಕಿತ್ತಿರಲಿಲ್ಲ. ಬೆಲೆ ಏರುವ ನಿರೀಕ್ಷೆ ಇತ್ತು. ವ್ಯಾಪಾರಿಗಳು ಕೆ,ಜಿಗೆ ₹5ರಂತೆ ಕೇಳುತ್ತಾರೆ. ರೈತರ ಸಂಕಷ್ಟವನ್ನು ಯಾರೂ ಕೇಳುತ್ತಿಲ್ಲ’ ಎಂದೂ ಅವರು ನೋವು ತೋಡಿಕೊಂಡರು.
‘ಸರ್ಕಾರ ಪರಿಹಾರ ನೀಡಬೇಕು’ ಎಂದು ರೈತ ಸಂಘದ ಅಧ್ಯಕ್ಷ ವಿಠ್ಠಲ ಜಾಧವ ಆಗ್ರಹಿಸಿದರು. ‘ಬೆಳೆಹಾನಿ ಪರಿಹಾರ ಘೋಷಣೆಯಾಗಿದೆ. ಇನ್ನೂ ಮಾರ್ಗಸೂಚಿ ಬಂದಿಲ್ಲ. ಬಂದ ನಂತರ ಬೆಳೆಗಾರರಿಗೆ ನೆರವಾಗಲು ಒತ್ತು ನೀಡಲಾಗುವುದು’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಸಂಜೀವ ಚವ್ಹಾಣ ಹೇಳಿದರು.