ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಕುಲ ರಕ್ಷಣೆಗೆ ಕರೆ: ಗ್ಲಾಸ್ಗೋ ಶೃಂಗಸಭೆಯಲ್ಲಿ ಜಾಗತಿಕ ನಾಯಕರ ಮೊರೆ

ಗ್ಲಾಸ್ಗೋ ಶೃಂಗಸಭೆಯಲ್ಲಿ ಜಾಗತಿಕ ನಾಯಕರ ಮೊರೆ
Last Updated 1 ನವೆಂಬರ್ 2021, 22:00 IST
ಅಕ್ಷರ ಗಾತ್ರ

ಗ್ಲಾಸ್ಗೋ : ಹವಾಮಾನ ವೈಪರೀತ್ಯವನ್ನು ತಡೆಗಟ್ಟುವ ಮೂಲಕ ಮಾನವ ಕುಲವನ್ನುರಕ್ಷಿಸಬೇಕು ಎಂದು ಜಾಗತಿಕ ನಾಯಕರಿಗೆ ಗ್ಲಾಸ್ಗೋ ಹವಾಮಾನ ವೈಪರೀತ್ಯ ತಡೆ ಶೃಂಗ ಸಭೆಯು ಸೋಮವಾರ ಕರೆ ಕೊಟ್ಟಿದೆ. ಶೃಂಗ ಸಭೆಯು ವಿಫಲವಾದರೆ ಅದು ಅನೈತಿಕ, ಇದರ ಕಹಿಯು ಹಲವು ತಲೆಮಾರು ಉಳಿಯಲಿದೆ ಎಂದು ಹೇಳಲಾಗಿದೆ.

ಇಂಗಾಲ ಹೊರಸೂಸುವಿಕೆಯ ಕಡಿತದ ಬದ್ಧತೆಗೆ ರಾಷ್ಟ್ರಗಳು ವಿಫಲವಾದರೆ, ಪ್ರತಿ ದೇಶವೂ ತಮ್ಮ ಹವಾಮಾನ ವೈಪರೀತ್ಯ ತಡೆ ಯೋಜನೆ ಮತ್ತು ನೀತಿಯನ್ನು ಪರಿಷ್ಕರಿಸುತ್ತಲೇ ಇರಬೇಕು. ಇದು ಐದು ವರ್ಷಕ್ಕೆ ಒಮ್ಮೆ ಆದರೆ ಸಾಲದು, ಪ್ರತಿ ವರ್ಷವೂ ಮಾಡಬೇಕಾಗುತ್ತದೆ ಎಂದು ವಿಶ್ವ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್‌ ಹೇಳಿದ್ಧಾರೆ.

‘ಇಂಗಾಲ ಹೊರಸೂಸುವಿಕೆ ತಡೆ ಮತ್ತು ಹೊರಸೂಸುವಿಕೆ ಸೊನ್ನೆಗೆ ಇಳಿಸುವಿಕೆ ವಿಚಾರದಲ್ಲಿ ವಿಶ್ವಾಸಾರ್ಹತೆಯ ಕೊರತೆ ಇದೆ, ಗೊಂದಲ ಬಹಳ ಹೆಚ್ಚು ಇದೆ’ ಎಂದು ಅವರು ವಿಶ್ಲೇಷಿಸಿದ್ದಾರೆ.

‘ಜೀವ ವೈವಿಧ್ಯದ ಮೇಲಿನ ದಮನ ಸಾಕು. ಇಂಗಾಲದಿಂದ ನಮ್ಮನ್ನು ನಾವೇ ಹತ್ಯೆ ಮಾಡಿಕೊಂಡದ್ದು ಸಾಕು. ನಿಸರ್ಗವನ್ನು ಶೌಚಾಲಯದಂತೆ ಬಳಸಿದ್ದು ಸಾಕು. ಇನ್ನೂ ಆಳಕ್ಕೆ ಗಣಿಗಾರಿಕೆಗಾಗಿ ತೋಡಿದ್ದು ಸಾಕು. ನಾವೇ ನಮ್ಮ ಗೋರಿಗಳನ್ನು ತೋಡುತ್ತಿದ್ದೇವೆ’ ಎಂದು ಗುಟೆರಸ್‌ ಜಗತ್ತಿಗೆ ಎಚ್ಚರಿಕೆ ನೀಡಿದ್ದಾರೆ.

ಶೃಂಗಸಭೆಯು ವಿಫಲವಾದರೆ ಜನರ ಆಕ್ರೋಶವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಮುಂದಿನ ತಲೆಮಾರುಗಳು ‘ನಮ್ಮನ್ನು ಕ್ಷಮಿಸದು’ ಎಂದು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಎಚ್ಚರಿಕೆ ಕೊಟ್ಟಿದ್ದಾರೆ.

ಭಾರತದ ಹಾಗೆಯೇ ಎಲ್ಲ ಅಭಿವೃದ್ಧಿಶೀಲ ರಾಷ್ಟ್ರಗಳ ಕೃಷಿಗೂ ಹವಾಮಾನ ಬದಲಾವಣೆಯು ಬಹುದೊಡ್ಡ ಸವಾಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ಧಾರೆ. ಕುಡಿಯುವ ನೀರಿನಿಂದ ಕೈಗೆಟಕುವ ದರದ ವಸತಿಯವರೆಗೆ ಎಲ್ಲವೂ ಹವಾಮಾನ ಬದಲಾವಣೆ ತಡೆಗೆ ಪೂರಕವಾಗಿರಬೇಕು ಎಂದು ಅವರು ಹೇಳಿದರು.

ಹವಾಮಾನ ಬದಲಾವಣೆ ತಡೆ ವಿಚಾರಗಳು ಶಾಲಾ ಪಠ್ಯಕ್ರಮದ ಭಾಗವಾಗಬೇಕು. ಆ ಮೂಲಕ ಮುಂದಿನ ತಲೆಮಾರುಗಳು ಕೂಡ ಈ ವಿಷಯದ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಹವಾಮಾನ ಬದಲಾವಣೆಯನ್ನು ತಡೆಯಲು ಈ ದೇಶಗಳು ವಿಫಲವಾದರೆ ಅದು ನಮ್ಮ ಸಮುದಾಯಗಳಲ್ಲಿನ ಜೀವ ಮತ್ತು ಜೀವನೋಪಾಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಬಾರ್ಬಡೋಸ್ ಪ್ರಧಾನಿ ಹೇಳಿದ್ದಾರೆ.

ಇಂಗಾಲ ಸ್ಥಗಿತ: ಭಾರತ ಕರೆ:

ಶ್ರೀಮಂತ ರಾಷ್ಟ್ರಗಳು ಇಂಗಾಲ ಹೊರಸೂಸುವಿಕೆಯನ್ನು ಈಗಿನ ಮಟ್ಟಕ್ಕೆ ಸ್ಥಗಿತಗೊಳಿಸಬೇಕು. ಆ ಮೂಲಕ, ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ‘ಇಂಗಾಲ ಹೊರಸೂಸುವಿಕೆ ಅವಕಾಶ’ ಕಲ್ಪಿಸಬೇಕು ಎಂದು ಭಾರತವು ಒತ್ತಾಯಿಸಿದೆ. ಭಾರತದಂತಹ ಮಧ್ಯಮ ಆದಾಯದ ದೇಶಗಳಿಗೆ ತಮ್ಮ ಅಭಿವೃದ್ಧಿ ಕಾರ್ಯಸೂಚಿಯನ್ನು ಜಾರಿಗೆ ತರಲು ಇದರಿಂದ ಅನುಕೂಲ ಆಗಲಿದೆ ಎಂದು ಕೇಂದ್ರ ಸಚಿವ ಪೀಯೂಷ್ ಗೋಯಲ್‌ ಹೇಳಿದ್ದಾರೆ.

ಮೋದಿ–ಬೋರಿಸ್‌ ಸಭೆ: ಪ್ರಧಾನಿ ಮೋದಿ ಮತ್ತು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಶೃಂಗಸಭೆಯ ಸಂದರ್ಭದಲ್ಲಿ ಭೇಟಿಯಾಗಿ ದ್ವಿಪಕ್ಷೀಯ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಶುದ್ಧ ಇಂಧನ, ಅರ್ಥವ್ಯವಸ್ಥೆ ಮತ್ತು ರಕ್ಷಣೆ ಕುರಿತಂತೆ ಅವರು ಚರ್ಚಿಸಿದ್ಧಾರೆ. ಮೋದಿ–ಜಾನ್ಸನ್‌ ಅವರು ಇದೇ ಮೊದಲಿಗೆ ಭೇಟಿಯಾಗಿದ್ಧಾರೆ. ಈ ಹಿಂದೆ, ಎರಡು ಬಾರಿ ಅವರ ಭೇಟಿಯು ಕೋವಿಡ್‌ ಕಾರಣಕ್ಕೆ ರದ್ದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT