ಕೊಲಂಬೊ: ಜಾನುವಾರು ಹತ್ಯೆ ನಿಷೇಧಿಸುವ ಪ್ರಸ್ತಾವಕ್ಕೆ ಶ್ರೀಲಂಕಾ ಸರ್ಕಾರ ಅನುಮೋದನೆ ನೀಡಿದ್ದು,ಮಾಂಸ ಸೇವಿಸುವವರಿಗಾಗಿ ಜಾನುವಾರು ಮಾಂಸ ಆಮದು ಮಾಡಿಕೊಳ್ಳಲು ನಿರ್ಧರಿಸಿದೆ.
ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು, ಇದನ್ನು ಕಾನೂನುಬದ್ಧಗೊಳಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮಾಧ್ಯಮ ಸಚಿವ ಕೆಹೇಲಿಯಾ ರಂಬುಕ್ವೆಲ್ಲಾ ಮಂಗಳವಾರ ತಿಳಿಸಿದ್ದಾರೆ.
ಇದೇ 8ರಂದು ಪ್ರಧಾನಿ ಮಹಿಂದಾ ರಾಜಪಕ್ಸ ನೇತೃತ್ವದ ಆಡಳಿತಾರೂಢಪಕ್ಷ ಎಸ್ಎಲ್ಪಿಪಿಯು ಶಾಸಕಾಂಗ ಸಭೆಯಲ್ಲಿ ಜಾನುವಾರು ಹತ್ಯೆ ನಿಷೇಧದ ಪ್ರಸ್ತಾವವನ್ನು ಮುಂದಿರಿಸಿತ್ತು. ಸಂಚಿವ ಸಂಪುಟವು ಜಾನುವಾರು ಕಾಯ್ದೆಗೆ ತಿದ್ದುಪಡಿ ತರಲು ಇದೀಗ ಮಸೂದೆ ಮಂಡಿಸಲು ಕ್ರಮ ಕೈಗೊಂಡಿದೆ.ಮಾಂಸಾಹಾರ ಸೇವಿಸುವವರಿಗೆ ಇತರ ದೇಶಗಳಿಂದ ಆಮದು ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸರ್ಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಯಸ್ಸಾದ ಜಾನುವಾರಗಳನ್ನು ಕೃಷಿ ಚಟುವಟಿಕೆಗೆ ತೊಡಗಿಸದಿರುವ ಹಾಗೂ ಅವುಗಳ ಸಂರಕ್ಷಣೆಯ ಮೂಲಕ ಗ್ರಾಮೀಣ ಭಾಗದ ಆರ್ಥಿಕತೆಯನ್ನು ಹೆಚ್ಚಿಸುವ ಅಂಶಗಳು ಹೊಸ ಸಂಹಿತೆಯಲ್ಲಿವೆ ಎಂದು ಹೇಳಿದ್ದಾರೆ.
2012ರ ಜನಸಂಖ್ಯಾ ಗಣತಿಯಂತೆ ಶ್ರೀಲಂಕಾದಲ್ಲಿ 2 ಕೋಟಿ ನಾಗರಿಕರಿದ್ದು, ಶೇ 70ರಷ್ಟು ಬೌದ್ಧ, ಶೇ 12.58 ರಷ್ಟು ಹಿಂದೂ, ಶೇ 9.66 ಇಸ್ಲಾಂ, 7.62 ಕ್ರೈಸ್ತ ಹಾಗೂ ಇತರೆ ಧರ್ಮಗಳಿಗೆ ಸೇರಿದ 0.03ರಷ್ಟು ಮಂದಿ ಇದ್ದಾರೆ. ಇಲ್ಲಿನ ಬಹುಸಂಖ್ಯಾತ ಬೌದ್ಧರು ಮತ್ತು ಹಿಂದೂಗಳು ಜಾನುವಾರು ಮಾಂಸ ಸೇವಿಸುವುದಿಲ್ಲ.