ಮದುವೆ ದಿನ ಮಧುಮಗ ಪಟಾಪಟಿ ಚಡ್ಡಿ ಧರಿಸಿಯೇ ಮದುವೆ ಪಂಚೆ ಉಡುತ್ತಿದ್ದ. ನೋಡುವವರಿಗೆ ಪಾರದರ್ಶಕ ಪಂಚೆಯೊಳಗಿಂದ ಚಡ್ಡಿ ಎದ್ದು ಕಾಣುತ್ತಿದ್ದರೂ ಯಾವುದೇ ಮುಜುಗರ ಇರುತ್ತಿರಲಿಲ್ಲ. ಅಟ್ಲಾಸ್ ಸೈಕಲ್, ಹೀರೋಹೊಂಡಾ ಬೈಕ್ನಲ್ಲಿ ಅತ್ತೆ ಮನೆಗೆ ತೆರಳುತ್ತಿದ್ದ ಅಳಿಯ ಊರ ಹೆಬ್ಬಾಗಿಲವರೆಗೆ ಪಟಾಪಟಿ ಚಡ್ಡಿಯಲ್ಲೇ ಹೋಗಿ ಅಲ್ಲಿ ಚಡ್ಡಿ ಮೇಲೆ ಪಂಚೆ ಸುತ್ತಿಕೊಳ್ಳುತ್ತಿದ್ದ. ಮೈಷುಗರ್ ಕಾರ್ಖಾನೆಗೆ ಮಾರುತಿ–800 ಕಾರು, ಬುಲೆಟ್ ಬೈಕ್ನಲ್ಲಿ ತೆರಳುತ್ತಿದ್ದ ರೈತ ಪಂಚೆ ಎತ್ತಿ ಕಟ್ಟಿದರೆ ಮಂಡಿಯವರೆಗೂ ಚಡ್ಡಿಯ ದರ್ಶನವಾಗುತ್ತಿತ್ತು.
ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪಟಾಪಟಿ ಚಡ್ಡಿ ಹಾಕಿದ ರೈತರು ಪ್ರತಿಭಟನೆಗೆ ಬರುತ್ತಾರೆಂದರೆ ಯಾರೇ ಜಿಲ್ಲಾಧಿಕಾರಿಯಾಗಿದ್ದರೂ ಅವರು ಕ್ಷಣಕಾಲ ಉಸಿರು ಬಿಗಿಹಿಡಿಯುತ್ತಿದ್ದರು. ಮಂಡ್ಯ ಹಳ್ಳಿಗಳ ಬೀದಿಬೀದಿಯಲ್ಲಿ, ಹೊಲ ಗದ್ದೆಯಲ್ಲಿ, ಸಿನಿಮಾ ಟೆಂಟ್ಗಳಲ್ಲಿ, ಟೀ ಅಂಗಡಿಗಳಲ್ಲಿ ಪಟಾಪಟ ಚಡ್ಡಿ ರಾರಾಜಿಸುತ್ತಿದ್ದವು. ಮಂಡ್ಯ ನಗರ ಸೇರಿದಂತೆ ಇಡೀ ಜಿಲ್ಲೆಯ ಬಟ್ಟೆ ಅಂಗಡಿಗಳಲ್ಲಿ ಪಟಾಪಟಾ ಚಡ್ಡಿಬಟ್ಟೆ ಮಾರಾಟ ಸಾಮಾನ್ಯವಾಗಿತ್ತು. ಟೇಲರ್ಗಳು ಚಡ್ಡಿ ಹೊಲಿಯುವುದರಲ್ಲಿ ಪರಿಣತಿ ಪಡೆದಿದ್ದರು. ಮಂಡ್ಯ ಹೆಸರಿನ ಜೊತೆ ಪಟಾಪಟಾ ಚಡ್ಡಿಗೆ ಅವಿನಾಭಾವ ಸಂಬಂಧ ಇತ್ತು. ಸಕ್ಕರೆ ನಾಡಿನ ಸಂಸ್ಕೃತಿಯ ಪ್ರತಿಬಿಂಬವಾಗಿತ್ತು.
ಕನ್ನಡ ಸಿನಿಮಾಗಳಲ್ಲಿ ಈ ಚಡ್ಡಿಯ ಬಗ್ಗೆ ಎಷ್ಟೇ ಲೇವಡಿ ಮಾಡಿದರೂ, ಅನ್ಯ ಜಿಲ್ಲೆಗಳ ಜನರು ಎಷ್ಟೇ ಟೀಕೆ–ಟಿಪ್ಪಣಿ ಮಾಡಿದರೂ ಮಂಡ್ಯ ಜನರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಮಂಡಿವರೆಗೆ ಈ ಚಡ್ಡಿ ಹಾಕಿಯೇ ಗದ್ದೆಗೆ ಇಳಿಯುತ್ತಿದ್ದರು. ಆದರೆ ಮಾರುಕಟ್ಟೆಗೆ ಬರ್ಮುಡಾ ಚಡ್ಡಿ ಲಗ್ಗೆ ಇಟ್ಟ ನಂತರ ಮಂಡ್ಯ ಹಳ್ಳಿ ಹುಡುಗರ ವರಸೆಯೇ ಬದಲಾಗಿದೆ. ಪಟಾಪಟಿ ಚಡ್ಡಿ ಬಿಟ್ಟು ಬರ್ಮುಡಾ ಧರಿಸೋಕೆ ಶುರು ಮಾಡಿದ್ದಾರೆ, ಹೀಗಾಗಿ ಚಡ್ಡಿಯ ಬೇಡಿಕೆ ತಗ್ಗಿದೆ. ಮೊದಲಿನಂತೆ ಈಗ ಪ್ರತಿ ಬಟ್ಟೆ ಅಂಗಡಿಗಳಲ್ಲಿ ಚಡ್ಡಿಬಟ್ಟೆ ಸಿಗುತ್ತಿಲ್ಲ. ಎಲ್ಲೋ ಕೆಲವು ಅಂಗಡಿಗಳಲ್ಲಿ, ವಾರದ ಸಂತೆಗಳಲ್ಲಿ ಮಾತ್ರ ಬಟ್ಟೆ ದೊರೆಯುತ್ತಿದೆ.
ಈ ಮೊಬೈಲ್ ಸಂಸ್ಕೃತಿಯಲ್ಲಿ ಪಟಾಪಟಿ ಚಡ್ಡಿಗೆ ಜಾಗ ಇಲ್ಲವಾಗಿದೆ. ಮೇಲುಕೋಟೆ ಕ್ಷೇತ್ರದ ಶಾಸಕರಾಗಿದ್ದ ರೈತ ಹೋರಾಟಗಾರ ದಿವಂಗತ ಕೆ.ಎಸ್.ಪುಟ್ಟಣಯ್ಯ ಪಟಾಪಟಿ ಹಾಗೂ ಬರ್ಮುಡಾ ಚಡ್ಡಿಯ ಬಗ್ಗೆ ವಿಧಾನಸಭೆಯಲ್ಲಿ ಆಡಿದ್ದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಕೃಷಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ದೊಗಳೆಯಾಗಿ, ಮಂಡಿಯವರೆಗೂ ಹೊಲಿಸಿಕೊಳ್ಳುತ್ತಿದ್ದ ಪಟಾಪಟಿ ಚಡ್ಡಿಯೇ ಬರ್ಮುಡಾ ಚಡ್ಡಿಗೆ ಆಧಾರ. ಆದರೆ ಈಗಿನ ಹುಡುಗರು ಬರ್ಮುಡಾ ಚಡ್ಡಿಯನ್ನು ಫ್ಯಾಷನ್ ಅಂದುಕೊಂಡಿದ್ದಾರೆ ಎಂದು ತಮಾಷೆಯಾಗಿ ಹೇಳಿದ್ದರು.
ಹಳಬರಿಗೆ ಈಗಲೂ ಅದೇ ಬೇಕು: ಮಂಡ್ಯ ಹುಡುಗರು ಪಟಾಪಟಿ ಚಡ್ಡಿ ತೊರೆದರೂ ಹಳೆ ಪೀಳಿಗೆಯ ರೈತರು ಈಗಲೂ ಅದೇ ಚಡ್ಡಿ ಧರಿಸುತ್ತಿದ್ದಾರೆ. ಸಂತೆಗಳಿಗೆ ತೆರಳಿ ರೆಡಿಮೇಡ್ ಚಡ್ಡಿಯನ್ನೇ ಖರೀದಿ ಮಾಡುತ್ತಾರೆ. ಮಂಡ್ಯದ ಕೆಲವು ಖಾದಿ ಭಂಡಾರಗಳಲ್ಲಿ ಪಟಾಪಟಿ ಚಡ್ಡಿಬಟ್ಟೆ ಮಾರಾಟ ಮಾಡುತ್ತಾರೆ. ಅಲ್ಲಿಂದ ಬಟ್ಟೆ ಖರೀದಿಸಿ ತಂದು ಚಡ್ಡಿ ಹೊಲಿಸಿಕೊಳ್ಳುತ್ತಾರೆ.
‘ಬೇರೆಬೇರೆ ಬಣ್ಣದ ಚಡ್ಡಿಯನ್ನೂ ಹೊಲಿಸಿಕೊಂಡೂ ಧರಿಸಿದ್ದೇವೆ. ಆದರೆ ಪಟಾಪಟಿ ಚೆಡ್ಡಿಯಲ್ಲಿ ಸಿಗುವಷ್ಟು ನೆಮ್ಮದಿ ಬೇರೆಲ್ಲೂ ಸಿಗುವುದಿಲ್ಲ. ಪಟಾಪಟಿ ಚೆಡ್ಡಿ ಬಟ್ಟೆ ತೂಕವಾಗಿರುವುದಿಲ್ಲ. ತೆಳುವಾಗಿ ಗಟ್ಟಿಯಾಗಿರುತ್ತದೆ. ಜೊತೆಗೆ ಹೆಚ್ಚು ಕಾಲ ಬರುವ ಕಾರಣ ರೈತರು ಅದನ್ನೇ ಧರಿಸುತಿದ್ದರು. ಈಗಿನ ಹುಡುಗರು ಪ್ಯಾಂಟ್ಗಳಿಗೆ ಮಾರು ಹೋಗಿದ್ದಾರೆ’ ಎಂದು ಹಿರಿಯ ರೈತರಾದ ಶಿವೇಗೌಡ ಹೇಳಿದರು.
‘1930ಕ್ಕೂ ಮೊದಲು ಮಂಡ್ಯ ಜಿಲ್ಲೆಯಲ್ಲಿ ಕುಡಿಯುವುದಕ್ಕೂ ನೀರು ಇರಲಿಲ್ಲ. ಆಗ ಮಂಡ್ಯ ಜಿಲ್ಲೆ ಕಾಗೆ ಮಂಡ್ಯ ಎಂದೇ ಪ್ರಸಿದ್ಧಿ ಪಡೆದಿತ್ತು. ಕೆಆರ್ಎಸ್ ಜಲಾಶಯ ನಿರ್ಮಾಣ ಮಾಡಿದ ನಂತರ ಮಂಡ್ಯದ ಅದೃಷ್ಟ ಬದಲಾಯಿತು. ಮಂಡ್ಯ ರೈತ ಸಂಸ್ಕೃತಿ ಇಡೀ ದೇಶದಾದ್ಯಂತ ಪ್ರಸಿದ್ಧಿ ಪಡೆಯಿತು. ಮಂಡ್ಯ ರೈತ ಪರಂಪರೆಯಲ್ಲಿ ಪಟಾಪಟಿ ಚೆಡ್ಡಿಯೂ ಪ್ರಮುಖ ಸ್ಥಾನ ಪಡೆದಿದೆ’ ಎಂದು ಸಾಹಿತಿ ಜಿ.ಟಿ.ವೀರಪ್ಪ ಹೇಳಿದರು.
ಚೆಡ್ಡಿ ಚಳವಳಿ: 1978ರಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಂಡ್ಯದಲ್ಲಿ ನಡೆದ ಚಡ್ಡಿ ಚಳವಳಿ ದೇಶದ ಗಮನ ಸೆಳೆದಿತ್ತು. ಕೆಆರ್ಎಸ್ ಜಲಾಶಯದಿಂದ ಮೈಸೂರು, ಚಾಮರಾಜನಗರ ಜಿಲ್ಲೆಗಳಿಗೆ ನೀರು ಸರಬರಾಜು ಮಾಡುವ ‘ವರುಣಾ ಯೋಜನೆ’ ವಿರುದ್ಧ ಮಂಡ್ಯ ರೈತರು ತಿರುಗಿ ಬಿದ್ದಿದ್ದರು. ಮಂಡ್ಯದಿಂದ ಬೆಂಗಳೂರುವರೆಗೆ ಕಾಲ್ನಡಿಗೆಯಲ್ಲಿ ಚಡ್ಡಿ ಚಳವಳಿ ನಡೆಸಿದ್ದರು. ಪ್ರತಿಯೊಬ್ಬ ಪ್ರತಿಭಟನಾಕಾರ ಪಟಾಪಟಿ ಚೆಡ್ಡಿ ಧರಿಸಿಯೇ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮಂಡ್ಯ ಚೆಡ್ಡಿಯ ವಿಚಾರ ಬಂದಾಗಿ ಈ ಚಳವಳಿಯನ್ನು ಹಿರಿಯರು ಪ್ರಸ್ತಾಪ ಮಾಡುತ್ತಾರೆ.
ಈಗಲೂ ಮಂಡ್ಯದಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ಪ್ರತಿಭಟನೆ ಇದ್ದೇ ಇರುತ್ತದೆ. ಈಚೆಗೆ ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಮನ್ಮುಲ್) ರೈತರಿಂದ ಹಾಲು ಖರೀದಿ ದರ ಇಳಿಸಿದಾಗ ರೈತರು ಚಡ್ಡಿ ಚಳವಳಿ ನಡೆಸಿ ಬಿಸಿ ಮುಟ್ಟಿಸಿದ್ದರು. ಯುವಜನರು ಪಟಾಪಟಿ ಚಡ್ಡಿ ಧರಿಸುವುಕ್ಕೆ ನಿರಾಕರಿಸಿದ್ದರೂ ಒಂದಲ್ಲಾ ಒಂದು ರೀತಿಯಲ್ಲಿ ಈ ಚಡ್ಡಿ ಜನರ ಗಮನ ಸೆಳೆಯುತ್ತಲೇ ಇದೆ.
ಗಮನ ಸೆಳೆದ ಚಡ್ಡಿ ಸಾಂಗ್
ಮಂಡ್ಯದ ಜೆಕೆ ಮತ್ತು ಸಿಕೆ ಎಂಟರ್ ಪ್ರೈಸಸ್ ಸಂಸ್ಥೆ ಈಚೆಗೆ ನಿರ್ಮಾಣ ಮಾಡಿದ್ದ ‘ಮಂಡ್ಯ ಚಡ್ಡಿ ಸಾಂಗ್’ ವಿಡಿಯೊ ಗೀತೆ ರಾಜ್ಯದಾದ್ಯಂತ ವೈರಲ್ ಆಗಿತ್ತು. ಜನಾರ್ಧನ ಕೊಂಡ್ಲಿ ಅವರ ಸಾಹಿತ್ಯ ಹಾಗೂ ನಿರ್ದೇಶನದಲ್ಲಿ ಮೂಡಿಬಂದ ವಿಡಿಯೊ ಗೀತೆಯು ಮಂಡ್ಯ ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದಿರುವ ಪಟಾಪಟಾ ಚಡ್ಡಿ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲಿತ್ತು.
ಕಲಾವಿದರು ಪಟಾಪಟ ಚಡ್ಡಿ ತೊಟ್ಟು ನೃತ್ಯ ಮಾಡಿ ಗಮನ ಸೆಳೆದಿದ್ದರು. ಮಂಡ್ಯ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಚಡ್ಡಿ ಸಂಸ್ಕೃತಿಗೆ ನವಿರು ಹಾಸ್ಯದ ಲೇಪನ ಸೇರಿಸಿ ಗೀತೆಯಲ್ಲಿ ಉಣಬಡಿಸಲಾಗಿತ್ತು. ಇಂದಿನ ಪೀಳಿಗೆಯ ಯುವಜನರಿಗೆ ಹಳೆಯ ಸಂಸ್ಕೃತಿಯನ್ನು ಪರಿಚಯ ಮಾಡುವಲ್ಲಿ ಈ ಗೀತೆ ಪ್ರಮುಖ ಪಾತ್ರ ವಹಿಸಿತ್ತು.
ಸಾಹಿತಿ ಚಲುವರಾಜ್ ಕೋಲೂರು ನಿರ್ಮಾಣ ಮಾಡಿದ್ದರು. ವೈ.ಎಸ್.ಶಶಿಕುಮಾರ್ ನೃತ್ಯ, ಸಿ.ದೇವರಾಜ್ ಸಂಗೀತ ನಿರ್ದೇಶನ ಮಾಡಿದ್ದು ಬೂದನೂರು ಸ್ವಾಮಿ ಹಾಡಿದ್ದರು. ಎಂ.ಪಿ.ರೇವಣ್ಣ ಅವರ ಛಾಯಾಗ್ರಹಣವಿತ್ತು. ಚಾರ್ಲ್ಯ್ ಹೆನ್ರಿ ಕುಮಾರ್ ಸಂಕಲನವಿತ್ತು. ನಟರಾದ ಮಂಡ್ಯ ಸತ್ಯು, ಜನಾರ್ಧನ ಕೊಂಡ್ಲಿ, ಸಿ.ವಿ.ವಿನಯ್ಕುಮಾರ್ ಮುಂತಾದವರು ಅಭಿನಯಿಸಿದ್ದರು.
ಯುಎಸ್ಎ ಅಕ್ಕ ಸಮ್ಮೇಳನದಲ್ಲೂ ಪಟಾಪಟಿ ಚಡ್ಡಿ ಗಮನ ಸೆಳೆದಿತ್ತು. ಅಲ್ಲಿ ಸಾಫ್ಟವೇರ್ ಎಂಜಿನಿಯರ್ಗಳಾಗಿ ಕೆಲಸ ಮಾಡುವವರು ಪಟಾಪಟಿ ಚೆಡ್ಡಿ ಧರಿಸಿ ಗಮನ ಸೆಳೆದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.