ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಪತ್ರಗಳಲ್ಲಿ ಪ್ರಾಚೀನ ವೃತ್ತಾಂತ

Last Updated 11 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಮಗಳಿಗೆ ಅಪ್ಪ ಬರೆದ ಪತ್ರಗಳು
ಲೇ:
ಜವಾಹರಲಾಲ್‌ ನೆಹರೂ
ಅನುವಾದ: ಕಪಟರಾಳ ಕೃಷ್ಣರಾಯರು
ಪ್ರ: ಋತುಮಾನ
ಪುಟ: 132, ಬೆಲೆ: 140

ಭಾರತದಲ್ಲಿ ಇಂದು ಅತ್ಯಂತ ಚರ್ಚೆಯಲ್ಲಿರುವ ವ್ಯಕ್ತಿಯೆಂದರೆ, ಮೊದಲ ಪ್ರಧಾನಿಯಾಗಿದ್ದ ಜವಾಹರಲಾಲ್‌ ನೆಹರೂ. ಈ ಮಾತಿಗೆ ತಾಜಾ ಉದಾಹರಣೆ – ಭಾರತೀಯ ಇತಿಹಾಸ ಸಂಶೋಧನಾ ಪರಿಷತ್ತು (ಐಸಿಎಚ್‌ಆರ್‌) ಇತ್ತೀಚೆಗೆ ಪ್ರಕಟಿಸಿದ ಸ್ವಾತಂತ್ರ್ಯ ಹೋರಾಟಗಾರರ ಪೋಸ್ಟರ್‌ನಲ್ಲಿ ನೆಹರೂ ಅವರ ಚಿತ್ರವನ್ನು ಕೈಬಿಟ್ಟಿದ್ದು ಮತ್ತು ಈ ವಿದ್ಯಮಾನ ಕೂಡ ತುರುಸಿನ ಚರ್ಚೆಗೆ ಕಾರಣವಾಗಿದ್ದು. ನೆಹರೂ ಅವರನ್ನು ‘ಇಲ್ಲವಾಗಿಸುವ’ ಪ್ರಯತ್ನಗಳು ನಡೆದಿರುವಂತೆಯೇ ಅವರ ಘನತೆಯನ್ನು ಎತ್ತಿಹಿಡಿಯುವ ಕೆಲಸಗಳೂ ಆಗುತ್ತಿವೆ.ಗತಿಸಿಹೋಗಿ ದಶಕಗಳೇ ಸಂದರೂ ಇಷ್ಟೊಂದು ಚರ್ಚೆಗಳು ನಡೆಯುತ್ತಿರುವುದು ನೆಹರೂ ಅವರ ಪ್ರಸ್ತುತತೆಗೆ ದ್ಯೋತಕ.

ಸೆಕ್ಯುಲರ್‌, ವೈಜ್ಞಾನಿಕ ಹಾಗೂ ಪ್ರಗತಿಪರ ಚಿಂತನೆಯ ನೆಹರೂ ಅವರು ಮಗಳು ಇಂದಿರಾಗೆ ಬರೆದ ಪತ್ರಗಳೇ ಈ ಕೃತಿಯ ಲೇಖನಗಳಾಗಿವೆ. ಇತರರು ಬರೆಯುವಂತೆ ಈ ಪತ್ರಗಳು ಮಾಮೂಲಿಯಾಗಿರದೆ ಮಗಳ ಜ್ಞಾನದಾಹವನ್ನು ತಣಿಸುವ ಪುಟ್ಟ ಪುಟ್ಟ ಲೇಖನಗಳಾಗಿವೆ. ಜಗತ್ತಿನ ಪ್ರಾಚೀನ ಕಾಲದ ಸಂಕ್ಷಿಪ್ತ ವೃತ್ತಾಂತವನ್ನು ಈ ಪತ್ರಗಳು ಕಟ್ಟಿಕೊಡುತ್ತವೆ. 1941ರಷ್ಟು ಹಿಂದೆಯೇ ಈ ಕೃತಿಯನ್ನು ಮೊದಲು ಕನ್ನಡಕ್ಕೆ ತಂದಿದ್ದು ಕಪಟರಾಳ ಕೃಷ್ಣರಾಯರು. ಋತುಮಾನದಿಂದ ಈಗ ಮರುಮುದ್ರಣಗೊಂಡಿದೆ.

ವಿಶಾಲ ಕರ್ನಾಟಕದ ಆಡುನುಡಿಗಳನ್ನು ಹೆಕ್ಕಿ ತೆಗೆದು ಪ್ರಯೋಗಿಸಿರುವ ಅನುವಾದಕರು, ಪತ್ರಗಳಿಗೆ ಅಗತ್ಯ
ವಾದ ಆಪ್ತತೆಯನ್ನು ತುಂಬಿದ್ದಾರೆ. ಕುಸೀದಕ (ಬ್ಯಾಂಕು), ದಾವತಿ (ಆಯಾಸ), ಚಾಂಗುಭಲಾ (ಜಯವಾಗಲಿ) ಇಂತಹ ಪದಗಳು ಇಲ್ಲಿ ಕಿಕ್ಕಿರಿದಿವೆ. ಏಳು ದಶಕಗಳ ಬಳಿಕ ಈ ಕೃತಿಯನ್ನು ಪ್ರಕಟಿಸಲು ಪ್ರಕಾಶಕರಿಗೆ ಬಲವಾದ ಕಾರಣವಿದೆ. ‘ನೆಹರೂವಿನ ಸುತ್ತ ದ್ವೇಷದ ಗೋಡೆ ಕಟ್ಟಿ ಅವರ ವ್ಯಕ್ತಿತ್ವ ದಮನಿಸುವ ಪ್ರಯತ್ನದ ವಿಷಕಾರಿ ಬೆಳವಣಿಗೆಗಳು ಈ ಕೃತಿಯನ್ನು ಪ್ರಕಟಿಸುವಂತೆ ಪ್ರೇರೇಪಿಸಿವೆ’ ಎನ್ನುವುದು ಅವರ ಅಭಿಮತವಾಗಿದೆ. ಭೂಮಿಯ ರಚನೆಯಿಂದ ಹಿಡಿದು ರಾಮಾಯಣ, ಮಹಾಭಾರತದವರೆಗೆ ಅಮೋಘ ವೃತ್ತಾಂತವನ್ನು ಕಥೆಗಳಂತೆ ಹೇಳುವ ಈ ಹೊತ್ತಗೆಯನ್ನು ಯಾವುದೇ ಮಗು, ತನ್ನ ತಂದೆ ತನಗೇ ಬರೆದ ಪತ್ರಗಳೆಂದು ಓದಿಕೊಳ್ಳಬಹುದು. ಲೋಕಜ್ಞಾನವನ್ನು ಪಡೆದುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT