ಕವಿ ಬೇಂದ್ರೆಯವರು ತಿರುಮಲರಾವ್ ಅವರನ್ನು ಹೆಚ್ಚಾಗಿ ಕಾಡಿದಂತೆ ತೋರುತ್ತದೆ. ತಮ್ಮ ಈ ನೆಚ್ಚಿನ ಕವಿಯ ಕುರಿತು ಅವರು ಮೇಲಿಂದ ಮೇಲೆ ಪ್ರಸ್ತಾಪ ಮಾಡುತ್ತಾರೆ. ಕರೀಂಖಾನ್, ಕಾರಂತ, ಗೋವಿಂದೇಗೌಡರ ನೆನಪುಗಳೂ ಅವರನ್ನು ಕಾಡಿವೆ. ಕೃತಿಯಲ್ಲಿರುವ ಪುಟ್ಟ, ಪುಟ್ಟ ಬರಹಗಳು ಓದಲು ಭಾರ ಎನಿಸುವುದಿಲ್ಲ. ಪ್ರತೀ ಬರಹದ ಆರಂಭದಲ್ಲಿ ನೀಡಿರುವ ಮಹಾನ್ ಉಕ್ತಿಗಳು ಓದುಗರನ್ನು ಚಿಂತನೆಗೂ ಹಚ್ಚುತ್ತವೆ. ಶಿಕ್ಷಣ ಇಲಾಖೆಯಲ್ಲಿದ್ದೂ ಹಲಗೆ ಬಳಸದ ತಮ್ಮ ಕಾಯಕದ ಕುರಿತು ಸಂಧ್ಯಾ ಕಾಲದ ಹೊರಳುನೋಟ ಬೀರಿದ್ದಾರೆ ಲೇಖಕರು. ಬರಹಗಳು ಹಾಗೂ ಉಕ್ತಿಗಳ ಮೂಲಕ ಓದುಗರಿಗೆ ಪುಟ್ಟ ಸಂದೇಶವನ್ನೂ ನೀಡುತ್ತಾ ಹೋಗುವುದು ಕೃತಿಯ ಆಶಯ. ಅವರ ಅನುಭವಗಳು ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವವರಿಗೂ ಪಾಠವಾಗಬಹುದು.