ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯಕ್ಷ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಕಲಾವಿದರನ್ನು ರವಿ ಅವರು ಇಲ್ಲಿ ಪರಿಚಯಿಸಿದ್ದಾರೆ. ‘ಮಲೆನಾಡಿನಲ್ಲಿ ಹಿಂದೆ ಸೀಮೆಗೊಂದೊಂದು ಮೇಳವಿದ್ದ ದಾಖಲೆ ಇದೆ. ಈಗ ಅವುಗಳಲ್ಲಿ ಬೆರಳೆಣಿಕೆಯಷ್ಟು ಮಾತ್ರ ಉಳಿದಿವೆ. ಕಳೆದು ಹೋದುದು ಸಿಗದಾದರೂ ಅಲ್ಲಿಯ ನೆನಪು ಉಳಿಯಬೇಕು’ ಎಂದು ಮುನ್ನುಡಿಯಲ್ಲಿ ಶ್ರೀಧರ ಡಿ.ಎಸ್. ತಾಳಿಪಾಡಿ ಅವರು ಉಲ್ಲೇಖಿಸಿದ್ದಾರೆ. ಕೃತಿಯಲ್ಲಿ ಇಪ್ಪತ್ತಾರು ಕಲಾವಿದರ ಜೀವನ ಹಾಗೂ ಕಲಾಬದುಕಿನ ಹೆಜ್ಜೆಗಳಿವೆ. ಇವುಗಳ ಜೊತೆಗೆ ಆ ಕಲಾವಿದರಿದ್ದ ಮೇಳದ ಹಿನ್ನೆಲೆ ಹಾಗೂ ಅವುಗಳ ಸ್ಥಿತಿಗತಿ, ಪ್ರಸಂಗದ ವೇಳೆ ನಡೆದ ಸ್ವಾರಸ್ಯಕರ ಘಟನೆಗಳ ಮಾಹಿತಿಯೂ ಇಲ್ಲಿ ಅಡಕವಾಗಿದೆ. ತಾಳಮದ್ದಲೆ, ಯಕ್ಷಗಾನ ಪ್ರಸಂಗದಲ್ಲಿ ಆಗಿರುವ ನಕಾರಾತ್ಮಕ ಬದಲಾವಣೆಗಳ ಸೂಕ್ಷ್ಮ ಉಲ್ಲೇಖವೂ ಇಲ್ಲಿದೆ.