ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ವಿಶೇಷ: ಸ್ತೋಮಸನ್ನಿಯ ಹಿತ– ಅಹಿತ ಸನ್ನಿಹಿತ

ಚುನಾವಣಾ ಕಾಲದಲ್ಲಿ ವಶೀಕರಣ ತಂತ್ರಗಳ (ಹಿಪ್ನಾಟಿಸಂ) ಆಜೂಬಾಜು
Published 10 ಮೇ 2023, 19:40 IST
Last Updated 10 ಮೇ 2023, 19:40 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿಯವರ ಮೇ 7ರ ಬೆಂಗಳೂರಿನ ರೋಡ್‌ ಶೋ ನೆನಪಿದೆ ತಾನೆ? ತಮ್ಮದೇ ಮೂರು ಫೋಟೊಗಳಿರುವ ಪುಷ್ಪರಥದ ಮೇಲೆ ಮೋದಿ ವಿರಾಜಮಾನರಾಗಿ ಹೂಗಳ ಸುರಿಮಳೆಯಲ್ಲಿ ದಾರಿಯುದ್ದಕ್ಕೂ ಕೈಬೀಸುತ್ತ, ಮುಗುಳ್ನಗುತ್ತ ಹೂವೆಸೆಯುತ್ತ ಸಾಗಿದ್ದು?

ಮೇ 7 ಅಂದರೆ ಫ್ರೆಂಚ್‌ ಮನೋವಿಜ್ಞಾನಿ ಗುಸ್ತಾವ್‌ ಲ ಬಾನ್‌ ಎಂಬಾತನ ಜನ್ಮದಿನ. ಜನಸ್ತೋಮವನ್ನು ಮಂತ್ರಮುಗ್ಧಗೊಳಿಸುವುದು ಹೇಗೆ ಎಂಬ ವಿಷಯದ ಮೇಲೆ ಗ್ರಂಥವೊಂದನ್ನು ಬರೆದು ಜಗತ್‌ ಪ್ರಸಿದ್ಧಿ ಪಡೆದವ. ‘ದ ಕ್ರೌಡ್‌: ಎ ಸ್ಟಡಿ ಆಫ್‌ ದಿ ಪಾಪ್ಯುಲರ್‌ ಮೈಂಡ್‌’ ಹೆಸರಿನ ಆ ಗ್ರಂಥ ನೂರು ವರ್ಷಗಳ ಹಿಂದೆ ಅನೇಕ ಐರೋಪ್ಯ ಭಾಷೆಗಳಿಗೆ ತರ್ಜುಮೆಯಾಗಿ, 20ನೇ ಶತಮಾನದ ಅನೇಕ ಜನನಾಯಕರ ಕೈಪಿಡಿಯಾಗಿತ್ತೆಂಬ ಪ್ರತೀತಿ ಇದೆ. ಗುಂಪಾಗಿ ಸೇರಿದವರ ಸಾಮೂಹಿಕ ವರ್ತನೆ ಹೇಗಿರುತ್ತದೆ, ಇಡೀ ಸ್ತೋಮವನ್ನು ಹೇಗೆ ಪರವಶಗೊಳಿಸಬಹುದು ಎಂಬೆಲ್ಲ ವಿವರಗಳು ಅದರಲ್ಲಿವೆ. ಚುನಾವಣಾ ಭಾಷಣ ಕುರಿತೇ ಪ್ರತ್ಯೇಕ ಅಧ್ಯಾಯವಿದೆ. ಇಂಗ್ಲಿಷ್‌ ಗೊತ್ತಿದ್ದವರು ಇಡೀ ಪುಸ್ತಕದ ಧ್ವನಿಮುದ್ರಣವನ್ನು ಆಲಿಸಬಹುದು (ಅಂದಹಾಗೆ, librivox.org ಎಂಬ ವೆಬ್‌ಸೈಟ್‌ಗೆ ಹೋದರೆ ಎಲ್ಲ ವಯೋಮಾನದವರಿಗಾಗಿ ವಿವಿಧ ವಿಷಯಗಳ 36 ಸಾವಿರಕ್ಕೂ ಹೆಚ್ಚು ಧ್ವನಿಪುಸ್ತಕಗಳು ಉಚಿತವಾಗಿ ಸಿಗುತ್ತವೆ. ಹಿಂದಿ, ತೆಲುಗು, ತಮಿಳಿನಲ್ಲೂ ಕೆಲ ಪುಸ್ತಕಗಳಿವೆ. ಕನ್ನಡದ್ದಿಲ್ಲ).

ಮೋದಿಯವರ ಮಾತುಗಳು ಎಂಥವರನ್ನೂ ಮೋಡಿ ಮಾಡುತ್ತವೆ. ಅವರ ಮಾತಿನ ಶೈಲಿಗೆ ಶಶಿ ತರೂರ್‌, ರಾಮಚಂದ್ರ ಗುಹಾರಂಥ ವಾಗ್ಮಿಗಳೂ ತಲೆದೂಗಿದ್ದಾರೆ. ಒಂದು ಹಕೀಕತ್‌ ಗೊತ್ತೆ? ಉತ್ತಮ ಭಾಷಣಕಾರರ ಮಾತುಗಳನ್ನು ಟಿ.ವಿ ಅಥವಾ ಸ್ಮಾರ್ಟ್‌ಫೋನ್‌ ಪರದೆಯ ಮೇಲೆ ಕೇಳುವುದಕ್ಕಿಂತ ಜನಸ್ತೋಮದ ಮಧ್ಯೆ ನೈಜಕಾಲದಲ್ಲಿ ಕೇಳಿಸಿಕೊಳ್ಳುವಾಗ ಆಗುವ ಅನುಭೂತಿಯೇ ಬೇರೆ. ನಾವು ಆಗ ನಾವಾಗಿರುವುದಿಲ್ಲ. ಸ್ತೋಮಪ್ರಜ್ಞೆಯ ಅಡಿಯಾಳಾಗುತ್ತೇವೆ. ‘...ನನ್ನದೊಂದು ಮಾತನ್ನು ನಡೆಸಿಕೊಡ್ತೀರಾ? ನಡೆಸಿಕೊಡ್ತೀರಿ ತಾನೇ? ಪಕ್ಕಾ ಹೌದಾ? ಹೌದಾಗಿದ್ದರೆ ನಿಮ್ಮ ಮೊಬೈಲ್‌ ಬೆಳಕನ್ನು ನನ್ನ ಕಡೆ ತೋರಿಸಿ’ ಎಂದು ಭಾಷಣಕಾರ ಬಿಟ್ಟುಬಿಟ್ಟು ಹೇಳುವಾಗ ಸುತ್ತಲಿನ ಜನರ ಹೋಕಾರ ಹೂಂಕಾರಗಳೆಲ್ಲ ಒಟ್ಟಾಗಿ ಸಮೂಹ ಸನ್ನಿ- ವೇಶ ನಿರ್ಮಾಣವಾಗುತ್ತದೆ. ಅದರಲ್ಲಂತೂ, ಗುಸ್ತಾವ್‌ ಹೇಳುವ ಹಾಗೆ, ನಮ್ಮ ಸುಪ್ತ ಮನಸ್ಸಿನಲ್ಲಿರುವ ಪುರಾಣಪ್ರಜ್ಞೆಯನ್ನು ಕೆದಕಿದರೆ ಅಥವಾ ‘ಮನೆಯ ಹಿರಿಯರಿಗೆ ನನ್ನ ನಮಸ್ಕಾರ ತಿಳಿಸುತ್ತೀರಾ?’ ಎಂಬಂಥ ಸನ್ನಡತೆಯ ಮಾತುಗಳನ್ನು ಹೇಳಿದರೆ ವಶೀಕರಣ ಪಕ್ಕಾ! ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಿ ಅದೇ ಪರಮಸತ್ಯವೆಂದು ಬಿಂಬಿಸುವುದೂ ಸಾಧ್ಯ.

ಎದುರಿಗಿದ್ದವರನ್ನು ಮಾತು, ಹಾವಭಾವ ಅಥವಾ ಧ್ವನಿಯ ಏರಿಳಿತದಿಂದಲೇ ವಶೀಕರಣಗೊಳಿಸುವ ತಂತ್ರಕ್ಕೆ ‘ಹಿಪ್ನಾಟಿಸಂ’ ಎನ್ನುತ್ತಾರೆ. ಆಸ್ಟ್ರಿಯಾದ ಫ್ರಾಂಝ್‌ ಮೆಸ್ಮೆರ್‌ ಎಂಬಾತ ಅದಕ್ಕೊಂದು ವೈಜ್ಞಾನಿಕ ಕಾರಣವನ್ನು ಕೊಟ್ಟ ಎಂದು ಹೇಳಲಾಗುತ್ತದೆ. ಆದರೆ ನಮ್ಮಲ್ಲಿ ಅದೆಷ್ಟೋ ಶತಮಾನಗಳಿಂದ ಇದು ಗೊತ್ತಿತ್ತೆಂಬುದಕ್ಕೆ ಸಾಕ್ಷಿ ಏನೆಂದರೆ ‘ಮಂತ್ರಮುಗ್ಧ’ ಎಂಬ ಪದ ನಮ್ಮ ಬಹುತೇಕ ಎಲ್ಲ ಭಾಷೆಗಳಲ್ಲೂ ಬಳಕೆಯಲ್ಲಿದೆ. ಛೂ ಮಂತ್ರ ಹಾಕಿ ಯಾವುದೇ ವ್ಯಕ್ತಿಯ ಮನಸ್ಸನ್ನು ವಶ ಮಾಡಿಕೊಳ್ಳುವ ತಂತ್ರ ವೇದಕಾಲದಿಂದಲೂ ಇತ್ತು. ಆದರೆ ಒಳ್ಳೆಯದಕ್ಕಿಂತ ಅನೈತಿಕ ಕೆಲಸಗಳಿಗೇ ಈ ತಂತ್ರ ಜಾಸ್ತಿ ಬಳಕೆಯಾದಂತಿದೆ. ಬೃಹಸ್ಪತಿಯ ಪತ್ನಿ ತಾರಾಳನ್ನು ಚಂದ್ರ ವಶೀಕರಣಗೊಳಿಸಿ ಭೋಗಿಸಿದನೆಂದೂ ಅವರಿಗೆ ಹುಟ್ಟಿದ ಮಗನೇ ‘ಬುಧ’ ಎಂತಲೂ ಹೇಳಲಾಗಿದೆ. ಯುದ್ಧಕಾಲದಲ್ಲಿ ಬಳಸುತ್ತಿದ್ದ ‘ಸಂಮೋಹನಾಸ್ತ್ರ’ವೂ ನಮಗೆ ಗೊತ್ತಿದೆ.

ಅಂಥ ಪುರಾಣಗಳು ಹೇಗೂ ಇರಲಿ, ವಶೀಕರಣ ವಿದ್ಯೆ ಎಂಬುದು ಕುಶಲ ಕಲೆಯೆ, ಕಣ್ಕಟ್ಟು ತಂತ್ರವೆ ಅಥವಾ ವಿಜ್ಞಾನದ ತೆಕ್ಕೆಗೆ ಸಿಗಬಹುದಾದ ಕರಾರುವಾಕ್‌ ಸಾಧನವೆ? ಇಷ್ಟು ಡೋಸ್‌ ಕೊಟ್ಟರೆ ಇಂಥ ವ್ಯಕ್ತಿಯನ್ನು ಇಷ್ಟು ಸಮಯದವರೆಗೆ ಮರುಳು ಮಾಡಬಹುದು ಎಂಬ ಲೆಕ್ಕಾಚಾರ ಸಾಧ್ಯವೆ? ಇದಕ್ಕೆ ಉತ್ತರ ಹುಡುಕಲು ಮನೋವಿಜ್ಞಾನಿಗಳು ಮತ್ತು ನರಮಂಡಲ ತಜ್ಞರು ತಿಣುಕುತ್ತಿದ್ದಾರೆ. ಹಿಪ್ನೋಸ್‌ (ನಿದ್ದೆ) ಎಂಬ ಲ್ಯಾಟಿನ್‌ ಪದದಿಂದ ಹಿಪ್ನಾಸಿಸ್‌ ಬಂದಿದೆಯಾದರೂ ಅದು ನಿದ್ರಾಸ್ಥಿತಿಯಲ್ಲ. ಮಿದುಳು ಎಚ್ಚರವಾಗಿರುತ್ತದೆ. ಆದರೆ ಪ್ರಜ್ಞಾಸ್ಥಿತಿಗೆ ಮೀರಿದ ಇನ್ನೊಂದು ಸ್ತರದಲ್ಲಿ ಬೇರೊಬ್ಬರ ಆದೇಶಗಳನ್ನು ಪಾಲಿಸುವ ‘ಮುಗ್ಧ’ತೆ ಅದಕ್ಕೆ ಬರುತ್ತದೆ. ಇದುವರೆಗಿನ ಅಧ್ಯಯನಗಳ ಪ್ರಕಾರ, ಯಾವುದೇ ಸಮಾಜದ ಶೇಕಡ 15-20ರಷ್ಟು ಜನರನ್ನು ತೀರಾ ಸುಲಭವಾಗಿ ವಶೀಕರಣ ಮಾಡಿಕೊಳ್ಳಬಹುದು. ಇನ್ನು ಸುಮಾರು ಶೇ 15-20ರಷ್ಟು ಜನರಿಗೆ ಸುಲಭವಾಗಿ ಯಾವ ಸಂಮೋಹಿನಿ ತಂತ್ರವೂ ವರ್ಕಾಗುವುದಿಲ್ಲ. ಮಧ್ಯಂತರದ ಶೇ 65-70ರಷ್ಟು ಜನರ ಮೇಲೆ ವಶೀಕರಣದ ಕೆಲವು ತಂತ್ರಗಳು ಮಾತ್ರ ಕೆಲಸ ಮಾಡುತ್ತವೆ. ವಶೀಕರಣಕ್ಕೆ ತಲೆಬಾಗುವ ಅಥವಾ ಪ್ರತಿರೋಧದ ಗುಣ ಎಳೆಯರಿದ್ದಾಗಲೂ ಅಷ್ಟೆ, ವೃದ್ಧಾಪ್ಯದಲ್ಲೂ ಅಷ್ಟೆ- ಜೀವಮಾನವಿಡೀ ಬದಲಾಗುವುದಿಲ್ಲ. ಬುದ್ಧಿಮತ್ತೆಗೂ ಅದಕ್ಕೂ ಸಂಬಂಧವಿಲ್ಲ.

ವಶೀಕರಣ ವಿದ್ಯೆಯೂ ಅಷ್ಟೆ. ಕೆಲವರಿಗೆ ಸಲೀಸಾಗಿ ಕರಗತವಾಗುತ್ತದೆ. ಹಾಗೆಂದು ಅವರಲ್ಲಿ ವಿಶೇಷ ಪವರ್‌ ಇರುತ್ತದೆ ಎಂಬುದೂ ಸುಳ್ಳು. ಆದರೆ ಹುಷಾರಾಗಿ ಪ್ರಾಕ್ಟೀಸ್‌ ಮಾಡಬೇಕು. ಹೊಸದಾಗಿ ಇದನ್ನು ಕಲಿತ ಹೈದನೊಬ್ಬ 2012ರಲ್ಲಿ ಕೆನಡಾದ ಕುಬೆಕ್‌ನಲ್ಲಿ ಒಂದಿಷ್ಟು ಹೈಸ್ಕೂಲ್‌ ಹುಡುಗಿಯರ ಮೇಲೆ ಸಂಮೋಹಿನಿ ತಂತ್ರದ ಪ್ರಯೋಗ ಮಾಡಲು ಹೋಗಿ ಎಡವಟ್ಟಾಗಿತ್ತು. ಪ್ರಯೋಗ ಮುಗಿದ ನಂತರ ಹುಡುಗಿಯರನ್ನು ಮಾಮೂಲು ಸ್ಥಿತಿಗೆ ತರಲು ಆತನಿಗೆ ಸಾಧ್ಯವಾಗಲೇ ಇಲ್ಲ. ತನಗೆ ವಿದ್ಯೆ ಕಲಿಸಿದ ಗುರುವನ್ನೇ ಆತ ತುರ್ತಾಗಿ ಕರೆಸಿಕೊಳ್ಳಬೇಕಾಯಿತು. ಕೆಲವು ಸ್ವಘೋಷಿತ ಪಂಡಿತರು ನಿಮ್ಮ ಅಂತರಾಳವನ್ನು ಕೆದಕುತ್ತ, ಬಾಲ್ಯಕ್ಕೂ, ಅಮ್ಮನ ಗರ್ಭಕ್ಕೂ, ಹಿಂದಿನ ಜನ್ಮಕ್ಕೂ ಒಯ್ಯುತ್ತೇವೆಂದು ಹೇಳುತ್ತಾರೆ. ಅವೆಲ್ಲ ನಿಜವಲ್ಲ. ಮನೋವಿಜ್ಞಾನಿಗಳು ಅತ್ಯಂತ ಕಟ್ಟುನಿಟ್ಟಿನ ಪ್ರಯೋಗ ಮಾಡಿ, ಯಾವುದು ಅವೈಜ್ಞಾನಿಕ, ಯಾವುದು ಢೋಂಗಿ ಎಂಬುದರ ಪಟ್ಟಿ ಮಾಡಿದ್ದಾರೆ. ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾಲಯದ ನರ ತಜ್ಞರು ಹೇಳುವ ಪ್ರಕಾರ, ಕೆಲವರ ಮಿದುಳಿನ ಒಂದು ಭಾಗದಲ್ಲಿ ‘ಗಾಬಾ’ ಹೆಸರಿನ ನರವಾಹಕಗಳ ಸಂಖ್ಯೆ ತೀರ ಹೆಚ್ಚಿರುತ್ತದೆ. ಅಂಥವರನ್ನು ಸುಲಭವಾಗಿ ಮಂತ್ರಮುಗ್ಧ ಮಾಡಬಹುದು.

ವಶೀಕರಣಕ್ಕೆ ಸಲೀಸಾಗಿ ಸಿಲುಕುವಂಥ ಮುಗ್ಧತೆ ನಿಮಗಿದ್ದರೆ ಅದು ಒಳ್ಳೆಯದೊ ಕೆಟ್ಟದ್ದೊ? ಅದಕ್ಕೆ ನಿರ್ದಿಷ್ಟ ಮಾನದಂಡವಿಲ್ಲ. ನೀವು ಮೋಸ– ವಂಚನೆಗೆ, ಜೂಜುಕಟ್ಟೆಯ ಉನ್ಮಾದಕ್ಕೆ ಸಿಲುಕಬಹುದು. ಚುನಾವಣೆಯಲ್ಲಿ ಇಂಥವರೇ ಗೆಲ್ಲುತ್ತಾರೆಂದು ಪಣ ಕಟ್ಟಲು ಹೋಗಿ ಯುಧಿಷ್ಠಿರನ ಗತಿಗಿಳಿಯಬಹುದು. ಉತ್ತಮ ಸಂಗತಿ ಏನೆಂದರೆ, ನಿದ್ರಾಹೀನತೆ, ಅಲರ್ಜಿ, ಖಿನ್ನತೆ, ಚಟದಾಸ್ಯದಂಥ ಕೆಲವು ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು. ಅದಕ್ಕೆಂದು ‘ಕ್ಲಿನಿಕಲ್‌ ಹಿಪ್ನೊಸಿಸ್‌’ ಎಂಬ ವೈದ್ಯಕೀಯ ವಿಭಾಗವೇ ವಿಕಾಸಗೊಂಡಿದೆ. ಹುಷಾರಾಗಿರಿ, ಶುಶ್ರೂಷೆಗೆಂದು ಯಾವುದೇ ತಜ್ಞರ ಬಳಿ ಹೋಗುವುದಾದರೂ ಆ ಡಾಕ್ಟರಿಗೆ ಅಧಿಕೃತ ವೈದ್ಯಕೀಯ ಮಂಡಳಿಯ ಸದಸ್ಯತ್ವ ಇದೆಯೇ ಖಾತರಿ ಮಾಡಿಕೊಳ್ಳಿ. ಈಗೇನು ಊರೂರಲ್ಲಿ ಹಿಪ್ನೊಥೆರಪಿ ತಜ್ಞರಿದ್ದಾರೆ. ಸ್ವಯಂವಶೀಕರಣದ ನಾನಾ ಬಗೆಯ appಗಳನ್ನು ಮೊಬೈಲ್‌ನಲ್ಲೂ ಇಳಿಸಿಕೊಳ್ಳಬಹುದು. ಹಣ ತೆತ್ತು ಮಂಗನಾಗಲೂಬಹುದು!

ಕೆಲವರಿಗೆ ಪದೇಪದೇ ಕರುಳಿನ ಉರಿಯೂತದ (ಐಬಿಎಸ್‌) ಕಾಯಿಲೆ ಬರುತ್ತಿರುತ್ತದೆ. ಹೊಟ್ಟೆಯಲ್ಲಿ ಉರಿ, ಅಜೀರ್ಣ, ವಾಯುಪೀಡೆ, ಅಸೌಖ್ಯ. ಆದರೆ ವೈದ್ಯಕೀಯ ಪರೀಕ್ಷೆ ಮಾಡಿದರೆ ಯಾವ ದೋಷವೂ ಇಲ್ಲ. ಆ ಒಂದು ಕಾಯಿಲೆಯ ವಶೀಕರಣ ಚಿಕಿತ್ಸೆಗೆ ವೈದ್ಯಕೀಯದಲ್ಲಿ ಮಾನ್ಯತೆ ಸಿಕ್ಕಿದೆ. ಲೇಟೆಸ್ಟ್‌ ಸಂಗತಿ ಏನು ಗೊತ್ತೆ? ಹೈವೇ ಹಿಪ್ನಾಸಿಸ್‌ ಕಾಯಿಲೆಗೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಿದೆ. ಗಂಟೆಗಟ್ಟಲೆ ಏಕತಾನತೆಯಲ್ಲಿ ಹೆದ್ದಾರಿಯಲ್ಲಿ ಚಾಲನೆ ಮಾಡುವಾಗ ಮನಸ್ಸು ಆಟೊಪೈಲಟ್‌ ಆಗಿಬಿಡುತ್ತದೆ. ಎಚ್ಚರಿದ್ದರೂ ತಲೆ ಬೇರೆಲ್ಲೋ ಓಡುತ್ತಿರುತ್ತದೆ.

ಪರದೆಯ ಮೇಲಿನ ಚುನಾವಣಾ ಸಮೀಕ್ಷೆ ನೋಡುತ್ತ ಕೇಳುತ್ತ ನಮಗಾಗುವ ಸ್ಥಿತಿ ಅದು. ತಲೆಚಿಟ್ಟು ಹಿಡಿದರೂ ಬಟನ್‌ ಒತ್ತಲಾರದಷ್ಟು ಮರಗಟ್ಟಿ ಮಿದುಳು ಪರವಶ ಆಗಿರುತ್ತದೆ. ಅದಕ್ಕೆ ಔಷಧವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT