ಬೆಳಗಾವಿ: ‘ವೀರಶೈವ ಲಿಂಗಾಯತರು ಕೂಡ ಶೂದ್ರರು. ನಮಗಿಂತ ಮೇಲಿದ್ದ ಜಾತಿಯವರು ಈಗಾಗಲೇ ಹಿಂದುಳಿದ ವರ್ಗಗಳ ಮೀಸಲಾತಿ ಪಡೆಯುತ್ತಿದ್ದಾರೆ. ಕೇಂದ್ರ ಸರ್ಕಾರ ಮೊದಲು ನಮಗೆ ಮೀಸಲಾತಿ ಕೊಡಬೇಕಿದೆ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಉಪಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.
ನಗರದಲ್ಲಿ ಶನಿವಾರ ವೀರಶೈವ ಲಿಂಗಾಯತ ಸಮಾಜದ ಶಾಸಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ನಾವು ಬ್ರಾಹ್ಮಣರಲ್ಲ, ಕ್ಷತ್ರಿಯರಲ್ಲ, ವೈಶ್ಯರಲ್ಲೂ ಬರುವುದಿಲ್ಲ. ಹಾಗಿದ್ದರೆ ಉಳಿದದ್ದು ಶೂದ್ರ ಮಾತ್ರ. ಶೂದ್ರರಿಗೆ ಮೊದಲು ಮೀಸಲಾತಿ ಕೊಡಬೇಕಿತ್ತಲ್ಲವೇ’ ಎಂದು ಪ್ರಶ್ನಿಸಿದರು.
‘ಬಸವಾಭಿಮಾನಿಗಳು ಜಾತಿ– ಧರ್ಮದ ಕಾಲಂಗಳಲ್ಲಿ ‘ವೀರಶೈವ ಲಿಂಗಾಯತ’ ಎಂದೇ ಮೊದಲು ಬರೆಯಿರಿ. ಅದರ ಬಳಿಕ ಉಪ ಪಂಗಡದ ಹೆಸರು ನಮೂದಿಸಿ. ಇಲ್ಲದಿದ್ದರೆ ಸಮಾಜಕ್ಕೆ ಸಂಕಷ್ಟ ತಪ್ಪಿದ್ದಲ್ಲ’ ಎಂದರು.