ಬೆಂಗಳೂರು: ‘ವಿಶ್ವದಾದ್ಯಂತ ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಆಳವಾದ ಅಧ್ಯಯನಕ್ಕೆ ಉತ್ಸುಕರಾಗಿದ್ದಾರೆ. ಇದರಿಂದ ಪ್ರಪಂಚದ ಅನೇಕ ರಹಸ್ಯಗಳನ್ನು ತೆರೆದಿಡಲಿದ್ದಾರೆ’ ಎಂದು ನಾಸಾ ಆಡಳಿತಾಧಿಕಾರಿ ಬಿಲ್ ನೆಲ್ಸನ್ ಹೇಳಿದರು.
ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಆ್ಯಂಡ್ ಟೆಕ್ನಾಲಜಿಕಲ್ ಮ್ಯೂಸಿಯಮ್ (ವಿಐಟಿಎಂ)ನಲ್ಲಿ ಏರ್ಪಡಿಸಿದ್ದ ‘ರೀಚಿಂಗ್ ಫಾರ್ ದ ಸ್ಟಾರ್ಸ್: ಎ ಕಾನ್ವರ್ಸೇಷನ್ ವಿಥ್ ನಾಸಾ ಆ್ಯಂಡ್ ಇಸ್ರೊ’ ಕಾರ್ಯಕ್ರಮದಲ್ಲಿ ಬಿಲ್ ನೆಲ್ಸನ್ ಹಾಗೂ ಭಾರತದ ಪ್ರಥಮ ಬಾಹ್ಯಾಕಾಶ ವಿಂಗ್ ಕಮಾಂಡರ್ (ನಿವೃತ್ತ) ರಾಕೇಶ್ ಶರ್ಮಾ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
‘ಉತ್ಸುಕ ವಿದ್ಯಾರ್ಥಿಗಳು ಭವಿಷ್ಯದ ಅನ್ವೇಷಕರಾಗಿದ್ದು, ಮಾನವ ಕುಲವನ್ನು ಇನ್ನಷ್ಟು ಎತ್ತರಕ್ಕೆ ಕರೆದೊಯ್ಯಲಿದ್ದಾರೆ. ಇದಕ್ಕಾಗಿ ವಿದ್ಯಾರ್ಥಿಗಳಲ್ಲಿ ಅನ್ವೇಷಣೆಯ ಕುತೂಹಲ, ಪರಿಶ್ರಮ ಮತ್ತು ಉತ್ಸಾಹ ಅತ್ಯಂತ ಪ್ರಮುಖವಾದುದು’ ಎಂದು ತಿಳಿಸಿದರು.
ವಿದ್ಯಾರ್ಥಿಗಳು, ನೆಲ್ಸನ್, ಭಾರತದ ಗಗನಯಾತ್ರಿ ರಾಕೇಶ್ ಶರ್ಮಾ ಅವರಿಂದ 8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಬಾಹ್ಯಾಕಾಶ ಸಂಶೋಧನೆ ಬೆಳವಣಿಗೆಗಳು, ವಿಜ್ಞಾನ, ಎಂಜಿನಿಯರ್ ಆಗಬಯಸುವವರಿಗೆ ಇರುವ ಅವಕಾಶಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನೆಲ್ಸನ್, ‘ನಿಸಾರ್‘ (ನಾಸಾ ಇಸ್ರೊ ಸಿಂಥೆಟಿಕ್ ಅಪೆರ್ಚ್ಯೂರ್ ರೆಡಾರ್) ‘ಅತ್ಯಂತ ಪ್ರಮುಖ ಹಮಾಮಾನ ವಿಷನ್’ನ ಭಾಗವಾಗಿದೆ. 2024ರ ಮೊದಲ ತ್ರೈಮಾಸಿಕದಲ್ಲಿ ಇದನ್ನು ಉಡ್ಡಯನ ಮಾಡುವ ಯೋಜನೆಯಿದೆ. ಭೂಮಿಯ ಪರಿಸರ, ದ್ರವ್ಯರಾಶಿ, ಸಸ್ಯಜೀವರಾಶಿ, ಸಮುದ್ರ ಮಟ್ಟ ಏರಿಕೆ, ಅಂತರ್ಜಲ, ಭೂಕಂಪ, ಸುನಾಮಿ, ಜ್ವಾಲಾಮುಖಿ, ಭೂಕುಸಿತ ಸೇರಿದಂತೆ ನೈಸರ್ಗಿಕ ಅಪಾಯಗಳ ಬದಲಾವಣೆಗಳ ದತ್ತಾಂಶವನ್ನು ನಿಸಾರ್ ಕಳುಹಿಸಲಿದೆ’ ಎಂದು ಮಾಹಿತಿ ನೀಡಿದರು.
ಗಗನ ಯಾತ್ರಿ ರಾಕೇಶ್ ಶರ್ಮಾ ಅವರೊಂದಿಗೆ ಬಿಲ್ ನೆಲ್ಸನ್ ಅವರು ಯು.ಆರ್. ರಾವ್ ಉಪಗ್ರಹ ಕೇಂದ್ರಕ್ಕೆ (ಯುಆರ್ಎಸ್ಸಿ) ಗುರುವಾರ ಭೇಟಿ ನೀಡಲಿದ್ದಾರೆ.