ಬೆಂಗಳೂರು: ನಗರದ ಸಾರ್ವಜನಿಕ ಸ್ಥಳ ಹಾಗೂ ಮನೆ ಮುಂದೆ ನಿಲ್ಲಿಸುತ್ತಿದ್ದ ಬೈಕ್ ಕದ್ದುಕೊಂಡು ಹೋಗಿ ತಮಿಳುನಾಡಿನ ಗ್ರಾಮಗಳಲ್ಲಿ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ತಮಿಳುನಾಡಿನ ರವಿಚಂದ್ರ ಅಲಿಯಾಸ್ ಕುಂಟ (21), ಮೋಹನ್ ಕುಮಾರ್ ಅಲಿಯಾಸ್ ಬುಲೆಟ್ (29) ಬೆಂಗಳೂರಿನ ನಾಗನಾಥಪುರದ ಗೋವಿಂದರಾಜು ಅಲಿಯಾಸ್ ಶಿವ (19) ಹಾಗೂ ಗೋವಿಂದಶೆಟ್ಟಿಪಾಳ್ಯದ ಅಮೃತ್ ಕುಮಾರ್ (26) ಬಂಧಿತರು. ಇವರಿಂದ ₹ 45 ಲಕ್ಷ ಮೌಲ್ಯದ 31 ಬೈಕ್ಗಳು, 10 ಗ್ರಾಂ ತೂಕದ ಚಿನ್ನದ ಸರ ಹಾಗೂ ಕಾರು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಸುಲಿಗೆ, ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಮೋಹನ್ ಕುಮಾರ್ ಹಾಗೂ ಅಮೃತ್ ಕುಮಾರ್ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಜೈಲಿಗೆ ಹೋಗಿದ್ದ ಇವರಿಬ್ಬರು ಜಾಮೀನು ಮೇಲೆ ಹೊರಬಂದು ಬೈಕ್ ಕಳ್ಳತನ ಮಾಡಲಾರಂಭಿಸಿದ್ದರು’ ಎಂದು ತಿಳಿಸಿದರು.
‘ನಗರದಲ್ಲಿ ಸುತ್ತಾಡುತ್ತಿದ್ದ ಆರೋಪಿಗಳು, ಬೈಕ್ಗಳನ್ನು ಗುರುತಿಸುತ್ತಿದ್ದರು. ಹ್ಯಾಂಡಲ್ ಲಾಕ್ ಮುರಿದು ಬೈಕ್ ಕದ್ದೊಯ್ಯುತ್ತಿದ್ದರು. ತಮಿಳುನಾಡಿನ ವೇಲೂರು ಜಿಲ್ಲೆಯ ಗುಡಿಯಾತ್ತಂ ತಾಲೂಕಿನ ಹಲವು ಗ್ರಾಮಗಳಲ್ಲಿ ಬೈಕ್ ಮಾರಿದ್ದರು’ ಎಂದರು.