ಕೆ.ಆರ್.ಪುರ: ‘ಕೋವಿಡ್ ನಿಯಂತ್ರಿಸಲು ಲಸಿಕೆ ಕಂಡುಹಿಡಿಯಲಾಗಿದೆ. ಲಸಿಕೆ ಪಡೆದುಕೊಂಡವರು ಆತಂಕ ಪಡುವ ಅಗತ್ಯವಿಲ್ಲ. ಯಾವುದೇ ಅಡ್ಡ ಪರಿಣಾಮವಾಗದು’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹೇಳಿದರು.
ಕೆ.ಆರ್.ಪುರದ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ವಿತರಿಸಿ ಮಾತನಾಡಿದ ಅವರು, ‘ಕೊರೊನಾ ಸೇನಾನಿಗಳಿಗೆ ಆದ್ಯತೆ ಮೇರೆಗೆ ಲಸಿಕೆ ವಿತರಿಸಲಾಗುವುದು’ ಎಂದರು.
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ‘ವಿಜ್ಞಾನಿಗಳು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕ ಪರವಾಗಿ ಧನ್ಯವಾದಗಳು ಅರ್ಪಿಸುತ್ತೇವೆ. ಮೋದಿಯವರ ಸತತ ಪ್ರಯತ್ನದ ನಂತರ ಭಾರತಕ್ಕೆ ಲಸಿಕೆ ಲಭಿಸಿದೆ’ ಎಂದರು.
ತಾಲ್ಲೂಕು ಆಸ್ಪತ್ರೆ ವತಿಯಿಂದ ಪ್ರಥಮ ಲಸಿಕೆ ಪಡೆದ ಡಾ.ಅಶೋಕ್ ಮಾತನಾಡಿ, ‘ನಾನು ಲಸಿಕೆ ಪಡೆದು ಆರೋಗ್ಯವಾಗಿದ್ದೇನೆ. ಯಾವುದೇ ಸಮಸ್ಯೆಯಾಗಿಲ್ಲ. ನಮ್ಮ ಸಿಬ್ಬಂದಿಗೆ ಧೈರ್ಯ ಬರಲು ಮೊದಲಿಗನಾಗಿ ಲಸಿಕೆ ಪಡೆದಿದ್ದು ಖುಷಿ ಆಗಿದೆ’ ಎಂದರು.
ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಭಾನುಪ್ರಕಾಶ, ಡಾ.ರಜನಿ, ಡಾ.ಮದನಿ, ಡಿ.ಎಲ್.ಒ ನದೀಮ್ ಅಹಮದ್, ಶ್ರೀನಿವಾಸ್, ತಾಲ್ಲೂಕು ವೈದ್ಯ ಅಧಿಕಾರಿ ಚಂದ್ರಶೇಖರ್, ಪಿ.ಜೆ.ಅಂತೋನಿಸ್ವಾಮಿ ಇದ್ದರು.