ದಾಬಸ್ಪೇಟೆ: ಸೋಂಪುರ ಹೋಬಳಿ ಯಾದ್ಯಂತ ಬೀಳುತ್ತಿರುವ ಉತ್ತಮ ಮಳೆಯಿಂದ ಇಲ್ಲಿನ ಕೆರೆ ಕುಂಟೆ, ಹೊಂಡಗಳಲ್ಲಿ ನೀರು ಸಂಗ್ರಹಗೊಳ್ಳು ತ್ತಿದೆ. ಇದು ರೈತರ ಮೊಗದಲ್ಲಿ ಮಂದ ಹಾಸ ಮೂಡಿಸಿದೆ. ಜಾನುವಾರುಗಳಿಗೆ ನೀರಿನ ಕೊರತೆ ನಿವಾರಣೆಯಾಗಿದೆ. ಅಂತರ್ಜಲ ವೃದ್ಧಿಯಾಗಿ ಕೊಳವೆಬಾವಿಗಳಲ್ಲಿ ಹೆಚ್ಚಿನ ನೀರು ತುಂಬಿಕೊಳ್ಳುವ ಆಶಾಭಾವನೆ ಮೂಡಿಸಿದೆ.
ದೇವರಹೊಸಹಳ್ಳಿ, ಹಳೇನಿಜಗಲ್ಲು ಕೆರೆಗಳು ಕೊಡಿಯಾಗಿವೆ. ಚನ್ನೋಹಳ್ಳಿ, ರಾಯರ ಪಾಳ್ಯ, ಬಿಲ್ಲಿನ ಕೋಟೆ, ಕಂಬಾಳು, ನಿಡವಂದ, ಲಕ್ಕೂರು, ಹೊನ್ನೆನಹಳ್ಳಿ ಕೆರೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಮುಂಗಾರು ಮಳೆ ಬಿರುಸುಗೊಂಡಿರುವುದರಿಂದ ಇನ್ನಷ್ಟು ನೀರು ಸಂಗ್ರಹವಾಗುವ ಮುನ್ಸೂಚನೆ ಇದೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು ಅಭಿವೃದ್ಧಿಪಡಿಸಿರುವ ಬುಗಡಿಹಳ್ಳಿ ಹಾಗೂ ಮಾದೇನಹಳ್ಳಿ ಕೆರೆಗಳಲ್ಲಿಯೂ ಸಮೃದ್ಧವಾದ ನೀರು ನಿಂತಿದೆ. ಈ ಬಾರಿಯ ಮಳೆಯಿಂದ ಜಲಮೂಲಕ್ಕೆ ನೀರು ಬಂದಿದೆ. ಅಂತರ್ಜಲ ಮಟ್ಟ ವೃದ್ಧಿಸುವ ಮೂಲಕ ಬತ್ತಿರುವ ಕೊಳವೆಬಾವಿಗಳಿಗೆ ಮರುಜೀವ ಸಿಕ್ಕಿದೆ. ನೂರಾರು ಎಕರೆಗೆ ನೀರು ಒದಗಿಸಬಹುದು ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಎಂ.ಜಿ.ಗಂಗಾಧರ್.
ಜಾನುವಾರಗಳಿಗೆ ಕುಡಿಯುವುದಕ್ಕೆ ನೀರು ಸಿಗದೇ ಅಂತರ್ಜಲ ಮಟ್ಟವು ಸಾವಿರ ಅಡಿಗಳಿಗೂ ಆಳಕ್ಕೆ ಕುಸಿದಿದೆ. ನೀರು ಬಂದಿರುವುದರಿಂದ ಸ್ವಲ್ಪ ನೆಮ್ಮದಿ ತಂದಿದೆ ಎಂದು ಹೊನ್ನೇನಹಳ್ಳಿ ರುದ್ರೇಶ್ ಹೇಳಿದರು.