ಬೆಂಗಳೂರು ಗಾಯನ ಸಮಾಜ ನಗರದಲ್ಲಿ ಆಯೋಜಿಸಿರುವ 8 ದಿನಗಳ ಸುವರ್ಣ ಮಹೋತ್ಸವ ಸಂಗೀತ ಸಮ್ಮೇಳನಕ್ಕೆ ಭಾನುವಾರ ಚಾಲನೆ ದೊರೆಯಿತು. ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದ ಸುಕನ್ಯಾ ಪ್ರಭಾಕರ್, ‘ಇಂದಿನ ಮಕ್ಕಳಲ್ಲಿ ದೈತ್ಯ ಪ್ರತಿಭೆಯಿದೆ. ಆದರೆ, ದೂರದರ್ಶನಗಳಲ್ಲಿ ನಡೆಯುವ ಸ್ಪರ್ಧೆಗಳು ಪ್ರತಿಭೆಗಳನ್ನು ಚಿವುಟಿ ಹಾಕುತ್ತಿವೆ. ಅಷ್ಟೇ ಅಲ್ಲ, ಹಣದ ಆಮಿಷ ತೋರಿಸುವ ಮೂಲಕ ದಿಕ್ಕು ತಪ್ಪಿಸುತ್ತಿವೆ. ಹಾಗಾಗಿ, ಪೋಷಕರು ಹಾಗೂ ಗುರುಗಳು ಎಚ್ಚರಿಕೆಯಿಂದ ಶಾಸ್ತ್ರೀಯ ಸಂಗೀತದೆಡೆಗೆ ಮಕ್ಕಳನ್ನು ಕರೆತರಬೇಕು’ ಎಂದು ತಿಳಿಸಿದರು.