ಬೆಂಗಳೂರು: ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದಿಂದ ಸಾರ್ವಜನಿಕರಲ್ಲಿ ಮತದಾನದ ಜಾಗೃತಿ ಮೂಡಿಸಲು ಭಾನುವಾರ ಕಾಲ್ನಡಿಗೆ ಜಾಥಾ ನಡೆಯಿತು.
ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಮಾತನಾಡಿ, ‘ಬೆಂಗಳೂರು ನಗರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿದೆ. ಎಲ್ಲರೂ ಮತಗಟ್ಟೆಗೆ ಬಂದು ಕಡ್ಡಾಯವಾಗಿ ಮತ ಚಲಾಯಿಸಬೇಕು. ಮತದಾರರಿಗೆ ಯಾವುದೇ ತೊಂದರೆಯಾಗದಂತೆ ಬಂದೋಬಸ್ತು ಮಾಡಲಾಗಿದೆ’ ಎಂದು ತಿಳಿಸಿದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಸ್ನೇಹಲ್ ಮಾತನಾಡಿ, ‘ಚುನಾವಣೆ, ದೇಶದ ಮುಂದಿನ ಐದು ವರ್ಷದ ಭವಿಷ್ಯವನ್ನು ರೂಪಿಸುವ ಕಾರ್ಯ’ ಎಂದು ಹೇಳಿದರು.
ಜಾಥಾ ಕಬ್ಬನ್ ಪಾರ್ಕ್ ಮುಖ್ಯದ್ವಾರದಿಂದ ಆರಂಭವಾಗಿ ಕಸ್ತೂರಬಾ ರಸ್ತೆ, ಕಂಠೀರವ ಒಳಾಂಗಣ ರಸ್ತೆ, ರಾಜಾರಾಂ ಮೋಹನ್ ರಾಯ್ ರಸ್ತೆ ಮೂಲಕ ಸಾಗಿ ಬಿಬಿಎಂಪಿ ಸಹಕಾರ ಸಂಘದ ಬಳಿ ಮುಕ್ತಾಯವಾಯಿತು.
ಬೆಂಗಳೂರು ಕೇಂದ್ರ ಚುನಾವಣಾಧಿಕಾರಿ ಡಾ.ಹರೀಶ್ ಕೆ., ಸಂಘದ ಅಧ್ಯಕ್ಷ ಎ.ಅಮೃತ್ ರಾಜ್, ಪದಾಧಿಕಾರಿಗಳಾದ ಸಾಯಿಶಂಕರ್, ಎ.ಜಿ. ಬಾಬಣ್ಣ, ಮಂಜುನಾಥ್, ಎಚ್.ಬಿ. ಹರೀಶ್ ಕೆ. ನರಸಿಂಹ, ರೇಣುಕಾಂಬ, ಕೆ. ಮಂಜೇಗೌಡ, ಡಾ.ಶೋಭಾ, ಮಂಜುನಾಥ್, ಸಂತೋಷ್ ಕುಮಾರ್ ನಾಯ್ಕ್ ಉಪಸ್ಥಿತರಿದ್ದರು.