ಬೆಂಗಳೂರು: ಮಳೆಗಾಲ ಆರಂಭವಾಗುವ ಹಿನ್ನೆಲೆಯಲ್ಲಿ ನಗರದಲ್ಲಿ ಬಿದ್ದು ಹೋಗಬಹುದಾದ ಮರಗಳು ಮತ್ತು ರೆಂಬೆಗಳನ್ನು ತೆರವುಗೊಳಿಸಲು ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಎಸ್.ಸುರೇಶ್ಕುಮಾರ್ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ.
ಭಾನುವಾರ ಬಿದ್ದ ಧಾರಾಕಾರ ಮಳೆ ಮತ್ತು ಗಾಳಿಯಿಂದಾಗಿ ಅನೇಕ ಮರಗಳು ಮತ್ತು ರೆಂಬೆಗಳು ಬಿದ್ದು ವ್ಯಕ್ತಿಗಳು ಹಾಗೂ ವಾಹನಗಳಿಗೆ ಹಾನಿಯಾಗಿದೆ. ಇದರಿಂದಾಗಿ ಮರಗಳು ಇರುವ ರಸ್ತೆಗಳಲ್ಲಿ ಓಡಾಡಲು ಆತಂಕವುಂಟಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿದ್ದು ಹೋಗಬಹುದಾದ ಮರಗಳು ಮತ್ತು ರೆಂಬೆಗಳ ಪರಿಶೀಲನೆ ಮಾಡಿ, ಪಟ್ಟಿ ಮಾಡಿ ಅವುಗಳನ್ನು ಕೂಡಲೇ ತೆರವುಗೊಳಿಸಲು ಬಿಬಿಎಂಪಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.