ಜನವಾಡ: ರೈತರ ಆದಾಯ ದ್ವಿಗುಣಗೊಳಿಸುವಲ್ಲಿ ಅಣಬೆ ಪಾತ್ರ ಮಹತ್ವದ್ದಾಗಿದೆ ಎಂದು ರಾಯಚೂರಿನ ಕೃಷಿ ಕಾಲೇಜಿನ ಗೃಹ ವಿಜ್ಞಾನ ಸಹಾಯಕ ಪ್ರಾಧ್ಯಾಪಕಿ ಡಾ.ಅನುಪಮಾ ನುಡಿದರು.
ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರವು ಕೆವಿಕೆ ಕೃಷಿ ಪಾಠಶಾಲೆ ಸರಣಿಯಲ್ಲಿ ರೈತರಿಗೆ ಆನ್ಲೈನ್ನಲ್ಲಿ ಶನಿವಾರ ಅಣಬೆ ಉತ್ಪಾದನೆ ತಾಂತ್ರಿಕತೆಗಳು ಕುರಿತು ನಡೆಸಿದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಣಬೆ ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ. ಕೃಷಿ ಭೂಮಿ ಇಲ್ಲದಿದ್ದರೂ ಅಣಬೆ ಬೇಸಾಯ ಮಾಡಿ ಸಂಪಾದನೆ ಮಾಡಬಹುದು ಎಂದು ತಿಳಿಸಿದರು.
ಅಣಬೆ ಕೃಷಿ ಮಹತ್ವ, ಅಣಬೆ ಉತ್ಪಾದನೆಗೆ ಇರುವ ಅವಕಾಶಗಳು, ಕೃಷಿ ವ್ಯವಹಾರ ಚಟುವಟಿಕೆ, ಪ್ರಾಯೋಗಿಕ ಆಯಸ್ಟರ್, ಹಾಲು ಅಣಬೆ ಬೇಸಾಯ ವಿಧಾನ ಹಾಗೂ ಮೌಲವರ್ಧನೆ ಕುರಿತು ಅವರು ವಿವರವಾದ ಮಾಹಿತಿ ನೀಡಿದರು.
ಯುವಕರು ಅಣಬೆ ಬೇಸಾಯಕ್ಕೆ ಒಲವು ತೋರಬೇಕು. ಕೃಷಿ ವಿಜ್ಞಾನ ಕೇಂದ್ರವು ಗುಣಮಟ್ಟದ ಕೃಷಿ ಉತ್ಪನ್ನಗಳ ಉತ್ಪಾದನೆಗೆ ಪೂರಕವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ. ಹೇಳಿದರು.
ಬೀದರ್, ಕಲಬುರ್ಗಿ, ಬೆಳಗಾವಿ, ಕೋಲಾರ, ಮೈಸೂರು, ಹಾಸನ, ಬಳ್ಳಾರಿ, ರಾಯಚೂರು ಮೊದಲಾದ ಜಿಲ್ಲೆಗಳ 78 ರೈತರು ತರಬೇತಿಯಲ್ಲಿ ಭಾಗವಹಿಸಿದ್ದರು.