ಬೀದರ್: ಕೊರೊನಾದಿಂದ ಬೀದರ್ ದಕ್ಷಿಣ ಶಾಸಕ ಬಂಡೆಪ್ಪ ಕಾಶೆಂಪೂರ್ ಗುಣಮುಖರಾಗಿದ್ದು, ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕೊರೊನಾ ಸೋಂಕು ತಗುಲಿದ ಕಾರಣ ಕಾಶೆಂಪೂರ್ ನವೆಂಬರ್ 5 ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು.
ಕೆಲ ದಿನ ಹೋಂ ಕ್ವಾರಂಟೈನ್ನಲ್ಲಿ ಇರಲು ವೈದ್ಯರು ಸಲಹೆ ನೀಡಿರುವ ಕಾರಣ ಬೆಂಗಳೂರಿನ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯಲಿದ್ದು, ಬಳಿಕ ಕ್ಷೇತ್ರದ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಎಲ್ಲರಿಗೂ ನಮಸ್ಕಾರ. ತಾಯಿ ಭವಾನಿ ಕೃಪೆ, ಹಿರಿಯ ಆಶೀರ್ವಾದ, ತಮ್ಮೆಲ್ಲರ ಪ್ರೀತಿ ವಿಶ್ವಾಸ, ಮಂದಿರ, ಮಸೀದಿ, ಚರ್ಚಗಳಲ್ಲಿ ಸಲ್ಲಿಸಿದ ಪೂಜೆ, ಪ್ರಾರ್ಥನೆ ಫಲವಾಗಿ ಕೊರೊನಾದಿಂದ ಸಂಪೂರ್ಣ ಗುಣಮುಖನಾಗಿದ್ದೇನೆ. ತಮ್ಮೆಲ್ಲರಿಗೂ ಕೋಟಿ ಕೋಟಿ ನಮನಗಳು ಎಂದು ಕಾಶೆಂಪೂರ್ ವಿಡಿಯೊವೊಂದರಲ್ಲಿ ಹೇಳಿದ್ದಾರೆ.
ಹೋಂ ಕ್ವಾರಂಟೈನ್ ನಂತರ ಮತ್ತೆ ಬಡವರು, ಶ್ರಮಿಕರು, ಕ್ಷೇತ್ರದ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳುವೆ ಎಂದು ತಿಳಿಸಿದ್ದಾರೆ.