ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಭಾನುವಾರದ ಲಾಕ್ಡೌನ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಔಷಧಿ, ಹಾಲು ಸೇರಿದಂತೆ ಅಗತ್ಯ ವಸ್ತುಗಳ ಮಾರಾಟ ಮಳಿಗೆಗಳನ್ನು ಹೊರತುಪಡಿಸಿದಂತೆ ಉಳಿದೆಲ್ಲ ವಾಣಿಜ್ಯ ಚಟುವಟಿಕೆಗಳು ಸ್ತಬ್ಧಗೊಂಡಿದ್ದವು.
ಲಾಕ್ಡೌನ್ ಕಾರಣಕ್ಕೆ ನಗರ, ಪಟ್ಟಣ ಹಾಗೂ ಹೋಬಳಿ ಕೇಂದ್ರಗಳು ದಿನವಿಡೀ ಬಹುತೇಕ ಸ್ತಬ್ಧವಾಗಿದ್ದವು. ವರ್ತಕರು ಎರಡನೇ ಭಾನುವಾರವೂ ತಮ್ಮ ಅಂಗಡಿಗಳನ್ನು ಬಾಗಿಲು ತೆರೆಯದೆ ಲಾಕ್ಡೌನ್ಗೆ ಸ್ಪಂದಿಸಿದರು.
ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಮನೆ ಸೇರಿಕೊಂಡಿದ್ದರು. ಪರಿಣಾಮ, ನಗರದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಆಟೊ, ಟ್ಯಾಕ್ಸಿಗಳು ಕೂಡ ರಸ್ತೆಗಿಳಿಯಲಿಲ್ಲ. ಬಿ.ಬಿ.ರಸ್ತೆ, ಎಂ.ಜಿ.ರಸ್ತೆ, ಬಜಾರ್ ರಸ್ತೆ, ಗಂಗಮ್ಮಗುಡಿ ರಸ್ತೆ ಹೀಗೆ ನಗರದ ಪ್ರಮುಖ ರಸ್ತೆಗಳು ಸಂಪೂರ್ಣ ಸ್ತಬ್ಧವಾಗಿದ್ದವು.
ಬೆಳಿಗ್ಗೆ 9 ಗಂಟೆಯ ವರೆಗೆ ತರಕಾರಿ, ಹಾಲು-ಹಣ್ಣು ಮಾರಾಟ ನಡೆಯಿತು. ಆಸ್ಪತ್ರೆ ಹಾಗೂ ಔಷಧ ಅಂಗಡಿಗಳಷ್ಟೇ ತೆರೆದಿದ್ದವು. ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಬಂದ್ ಆಗಿತ್ತು. ಅಲ್ಲಲ್ಲಿ ಪೊಲೀಸರು ಕಾವಲು ಕಾಯುತ್ತಿರುವುದು ಕಂಡುಬಂತು. ಪ್ರಮುಖ ರಸ್ತೆಗಳಲ್ಲಿ ಜನ ಸಂಚಾರ ವಿರಳವಾಗಿತ್ತು.