ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಗುರುವಾರ ಧಾರಾಕಾರವಾಗಿ ಮಳೆ ಸುರಿದಿದೆ. ವಿವಿಧೆಡೆ ವಿದ್ಯುತ್ ಕಂಬಗಳು, ಮರಗಳು ನೆಲಕ್ಕುರುಳಿವೆ.
ಮೂಡಿಗೆರೆ ತಾಲ್ಲೂಕಿನ ದರ್ಶನ ಗ್ರಾಮದಲ್ಲಿ ಮನೆಯೊಂದರ ಮೇಲೆ ಮರ ಉರುಳಿ ಹಾನಿಯಾಗಿದೆ. ಜಯಪುರ– ಬಸರೀಕಟ್ಟೆ ಮಾರ್ಗದಲ್ಲಿ ಅಬ್ಬಿಕಲ್ಲು ಬಳಿ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿ ಸಂಚಾರಕ್ಕೆ ಅಡಚಣೆಯಾಗಿತ್ತು. ಬಸರೀಕಟ್ಟೆಯ ಪ್ರೌಢಶಾಲೆಯ ಮುಂಭಾಗದ ರಸ್ತೆ ಬದಿಯ ಮಣ್ಣು ಕುಸಿದಿದೆ.
‘ಮಳೆಗಾಳಿಗೆ ಗಡೀಕಲ್ಲು, ಹರಿಹರಪುರ, ಬಸರೀಕಟ್ಟೆ, ಕಿಗ್ಗಾ, ಬೇಗಾರು, ಕೊಗ್ರೆ ಭಾಗದಲ್ಲಿ 50ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, ನಾಲ್ಕು ಟ್ರಾನ್ಸಫಾರ್ಮರ್ಗಳು ನೆಲಕ್ಕುರುಳಿವೆ’ ಎಂದು ಮೆಸ್ಕಾಂ ಕೊಪ್ಪ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಸಿದ್ದೇಶ್ ತಿಳಿಸಿದರು.
ಕಿಗ್ಗಾ– 18.4, ಶೃಂಗೇರಿ– 13.3, ಬಸರೀಕಟ್ಟೆ– 13.3, ಜಯಪುರ–12.3, ಕಮ್ಮರಡಿ– 11.4 , ಕೊಟ್ಟಿಗೆಹಾರ– 9.7 ಸೆಂ.ಮೀ ಮಳೆಯಾಗಿದೆ.