ಅವರ ಮಾತಿಗೆ ಅನ್ವರ್ಥಕವಾಗಿ ಅವರ ಕೃಷಿ ಚಟುವಟಿಕೆಗಳಿವೆ. ನಿಡಘಟ್ಟದಲ್ಲಿನ 12 ಎಕರೆ ಜಮೀನಿನಲ್ಲಿ ನಾಲ್ಕು ಕೊಳವೆಬಾವಿ ಬಳಸಿಕೊಂಡು ಕೃಷಿ ಸಾಧನೆ ಮಾಡಿದ್ದಾರೆ.
5 ಎಕರೆಯಲ್ಲಿ ದಾಳಿಂಬೆ ಬೆಳೆದಿದ್ದಾರೆ. ಎರಡು ಎಕರೆ ಅಡಿಕೆ, ಮೂರು ಎಕರೆ ತೆಂಗು, ಎರಡು ಎಕರೆಯಲ್ಲಿ ಟೊಮೆಟೊ ಬೆಳೆದಿದ್ದಾರೆ. ನಡುನಡುವೆಯೇ ಕಾಲಮಾನಕ್ಕನುಗುಣವಾಗಿ ವಿವಿಧ ತರಕಾರಿಗಳನ್ನು ಬೆಳೆಯುತ್ತಾರೆ.
ಹತ್ತು ಗುಂಟೆ ವಿಸ್ತೀರ್ಣದಲ್ಲಿ ಪಾಲಿಹೌಸ್ ಮಾಡಿ ಅದರಲ್ಲಿ ಗಿಡಗಳ ನರ್ಸರಿ ಮಾಡಿದ್ದು, ಹಾಸನ, ಹೊಸದುರ್ಗ ಮುಂತಾದ ಕಡೆಗಳ ರೈತರಿಗೆ ಟೊಮೆಟೊ ಸಸಿಗಳನ್ನು ನೀಡುತ್ತಾರೆ.
ಅಡಿಕೆಯಲ್ಲಿ ಎಕರೆಗೆ 75 ಕ್ವಿಂಟಲ್ ಹಸಿ ಅಡಿಕೆ ಇಳುವರಿ ಪಡೆದಿದ್ದಾರೆ. ಕಳೆದ ವರ್ಷ 20 ಟನ್ ದಾಳಿಂಬೆ ಇಳುವರಿ ಬಂದಿದೆ.ಪ್ರತಿಯೊಂದು ಬೆಳೆಗೂ ಹನಿನೀರಾವರಿ ಕಲ್ಪಿಸಿರುವುದು ಕಿರಣ್ ವಿಶೇಷ.
‘ದಾಳಿಂಬೆ ಹಣ್ಣಿಗೆ ಮಾರುಕಟ್ಟೆಯ ತೊಂದರೆಯಿಲ್ಲ. ಸ್ಥಳಕ್ಕೇ ಬಂದು ಖರೀದಿಸುವವರಿದ್ದಾರೆ. ಟೊಮೆಟೊ ಬೆಳೆ ಉತ್ಕೃಷ್ಟವಾಗಿ ಬಂದಿದ್ದರೂ , ಅಕಾಲಿಕವಾಗಿ ಬಿದ್ದ ಆಲಿಕಲ್ಲು ಮಳೆಯಿಂದ ಇಳುವರಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿತಾದರೂ ದೊಡ್ಡ ನಷ್ಟವಾಗಲಿಲ್ಲ’ ಎನ್ನುತ್ತಾರೆ ಕಿರಣ್.
‘ಕೃಷಿ ಸುಲಭ ಕಾಯಕವಲ್ಲ. ಆದರೆ ಬಹುಕಷ್ಟದ ಬದುಕೂ ಅಲ್ಲ. ಅತೀವ ಶ್ರದ್ಧೆ ಮತ್ತು ಮನಃಪೂರ್ವಕವಾಗಿ ಕಾಯಕ ಮಾಡಿದರೆ ಅದಕ್ಕೆ ಫಲ ಸಿಗುತ್ತದೆ. ನೆಮ್ಮದಿಯ, ಸ್ವಾವಲಂಬನೆಯ ಬದುಕು ನಮ್ಮದಾಗುತ್ತದೆ. ಉಡಾಫೆ ಮಾಡಿ ಕೃಷಿಗೆ ಕೈ ಹಾಕದಿರುವುದೇ ಲೇಸು’ ಎನ್ನುತ್ತಾರೆ ಎನ್ನುವ ಕಿರಣ್.
ಅವರಿಗೆ ತಂದೆ ಭೈರಶೆಟ್ಟಿ ತಾಯಿ ಸಾವಿತ್ರಮ್ಮ ಮತ್ತು ಸಹೋದರ ಸುರೇಶ್ ಅವರ ನಿರಂತರ ಸಹಕಾರವಿದೆ. ಹೆಚ್ಚಿನ ಮಾಹಿತಿಗೆ (ಮೊ. 9880442288) ಕಿರಣ್ ಅವರನ್ನು ಸಂಪರ್ಕಿಸಬಹುದು.