ಸಿರಿಗೆರೆ: ‘ತಾತ್ವಿಕ ಮೌಲ್ಯಗಳನ್ನು ಬಿಂಬಿಸುವ ಹಬ್ಬದ ಆಚರಣೆ ಅದರದೇ ಆದ ವೈಶಿಷ್ಟಗಳನ್ನು ಹೊಂದಿದ್ದು, ದೀಪಾವಳಿ ಹಬ್ಬದಲ್ಲಿ ಬೆಳಕು ಜ್ಞಾನದ ಸಂಕೇತ, ಕತ್ತಲು ಅಜ್ಞಾನದ ಸಂಕೇತವಾಗಿದೆ. ಅಜ್ಞಾನ ನಿವಾರಣೆಯಾಗಿ ಜ್ಞಾನ ಮೂಡಬೇಕಿದೆ’ ಎಂದು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕೊಂಬು, ಕಹಳೆ ಮೊಳಗಿಸಿ, ನಗಾರಿ ಬಾರಿಸಿ ದೀಪ ಬೆಳಗಿಸುವ ದೀಪಾವಳಿಯು ಇಂದು ಪಟಾಕಿ ಹಾವಳಿಯ ಹಬ್ಬವಾಗಿದೆ. ಪರಿಸರವನ್ನು, ಆರೋಗ್ಯವನ್ನು ಮಲೀನ ಮಾಡುವ ಪಟಾಕಿ ಈ ಹಬ್ಬದಲ್ಲಿ ನುಸುಳಿಕೊಂಡಿರುವುದು ವಿಷಾದನೀಯ ಎಂದು ಹೇಳಿದರು.
ದೀಪ ಹಚ್ಚುವವರಿಗಿಂತ ಬೆಂಕಿ ಹಚ್ಚುವವರ ಸಂಖ್ಯೆಯೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಾವೇ ರಚಿಸಿದ ‘ಮತ್ಸರದ ಬತ್ತಿ’ ಎಂಬ ಕವಿತೆಯನ್ನು ಈ ಸಂದರ್ಭದಲ್ಲಿ ವಾಚಿಸಿದ್ದು ಮಾರ್ಮಿಕವಾಗಿತ್ತು.
ದಾವಣಗೆರೆಯ ಯು.ಜಿ.ಶಿವಕುಮಾರ್ ಕುರುಡಿ ಅವರು ‘ವಿಶ್ವಬಂಧು ಮರುಳಸಿದ್ಧನ’ ಪ್ರತಿಮೆಯನ್ನು ಶ್ರೀಮಠಕ್ಕೆ ನೀಡಿದ್ದನ್ನು ಸ್ವಾಮೀಜಿ ಶ್ಲಾಘಿಸಿದರು. ಮಠದ ಮುಂಭಾಗದಲ್ಲಿ ವಿದ್ಯಾರ್ಥಿಗಳು ರಂಗೋಲಿ ಹಾಕಿ, ದೀಪ ಹಚ್ಚಿ ಸಿಂಗರಿಸಿದ್ದರು. ಐಕ್ಯಮಂಟಪದಲ್ಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಸೇರಿ ಹಣತೆ ಹಚ್ಚಿ ಸಂಭ್ರಮಿಸಿದರು.
ಲತಾ ಮಂಪಟದಲ್ಲಿ ‘ವಿಶ್ವಬಂಧು ಮರುಳಸಿದ್ಧನ’ ಪ್ರತಿಮೆಗೆ ಸ್ವಾಮೀಜಿ ಪುಷ್ಪ ಸಲ್ಲಿಸಿದರು. ಐಕ್ಯಮಂಟಪ, ಶ್ರೀಮಠದ ಆವರಣದಲ್ಲಿ ವಿದ್ಯುತ್ ದೀಪ ಕಂಗೊಳಿಸುತ್ತಿತ್ತು.
ಮಹಿಳೆಯರು, ಮಕ್ಕಳಾದಿಯಾಗಿ ಹಣತೆಯನ್ನು ತೆಗೆದುಕೊಂಡು ಮನೆಗಳಿಗೆ ತೆರಳಿ ಹಬ್ಬವನ್ನು ಸಂಭ್ರಮಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ, ಮಾಜಿ ಅಧ್ಯಕ್ಷರು, ಸದಸ್ಯರು, ಸಹಕಾರ ಸೇವಾ ಸಂಘದ ಅಧ್ಯಕ್ಷರು, ಸದಸ್ಯರು, ಗ್ರಾಮದ ಹಿರಿಯರು, ಯುವಕರು ಹಾಗೂ ಮಹಿಳೆಯರು ಭಾಗವಹಿಸಿದ್ದರು.