ಚಿತ್ರದುರ್ಗ: ಇಲ್ಲಿನ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಕಾರ್ಮಿಕ ಇಲಾಖೆ ಮಂಗಳವಾರ ಹಮ್ಮಿಕೊಂಡಿದ್ದ ಆಹಾರ ಕಿಟ್ ವಿತರಣೆ ವೇಳೆ ನೂಕು ನುಗ್ಗಲು ಉಂಟಾಯಿತು. ಇದರಿಂದ ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿ, ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಕೈತಪ್ಪಿತು.
ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಾಯಿಸಿಕೊಂಡ ಅರ್ಹರ ಪೈಕಿ 2,500 ಕಟ್ಟಡ ಕಾರ್ಮಿಕರು, 250 ಆಶಾ ಕಾರ್ಯಕರ್ತೆಯರು ಹಾಗೂ 250 ಪೌರಕಾರ್ಮಿಕರು ಸೇರಿ ಮೂರು ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ಆಹಾರದ ಕಿಟ್ಗಳನ್ನು ವಿತರಿಸಲು ವ್ಯವಸ್ಥೆ ಮಾಡಲಾಗಿತ್ತು. ನಿರೀಕ್ಷೆ ಮೀರಿ ಜನರು ಬಂದಿದ್ದರಿಂದ ಈ ಸಮಸ್ಯೆ ಸೃಷ್ಟಿಯಾಗಿತ್ತು.
‘ಚಿತ್ರದುರ್ಗಕ್ಕೆ 10 ಸಾವಿರ ಆಹಾರದ ಕಿಟ್ ಕಳುಹಿಸುವಂತೆ ಸರ್ಕಾರಕ್ಕೆ ಕೋರಿಕೆ ಸಲ್ಲಿಸಲಾಗಿತ್ತು. ಕಾರ್ಮಿಕ ಸಚಿವರು ಕಾಳಜಿ ತೋರಿದ್ದರು. ಲಭ್ಯವಾದ ಏಳು ಸಾವಿರ ಆಹಾರ ಕಿಟ್ಗಳಲ್ಲಿ ನಾಲ್ಕು ಸಾವಿರ ಚಿತ್ರದುರ್ಗಕ್ಕೆ ಹಾಗೂ ಮೂರು ಸಾವಿರ ಹಿರಿಯೂರಿಗೆ ಹಂಚಿಕೆಯಾಗಿವೆ. ಇನ್ನೂ ಹೆಚ್ಚುವರಿ ಕಿಟ್ ನೀಡುವಂತೆ ಸರ್ಕಾರಕ್ಕೆ ಕೋರಿಕೆ ಸಲ್ಲಿಸಲಾಗುವುದು’ ಎಂದು ಕಿಟ್ ವಿತರಣೆಗೆ ಚಾಲನೆ ನೀಡಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.
ಸಾವಿರಾರು ಜನರು ಮೈದಾನದಲ್ಲಿ ಸೇರಿದ್ದಂತೆ ಬಿ.ಡಿ.ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಕಾರ್ಮಿಕರು ಪರಸ್ಪರ ಅಂತರ ಕಾಯ್ದುಕೊಂಡು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಆಹಾರ ಕಿಟ್ ವಿತರಣೆಗೆ ಶಾಸಕರು ಚಾಲನೆ ನೀಡಿ ತೆರಳುತ್ತಿದ್ದಂತೆ ಫಲಾನುಭವಿಗಳು ಮುಗಿಬಿದ್ದರು. ಆಹಾರದ ಕಿಟ್ಗಳನ್ನು ತಂದಿದ್ದ ಲಾರಿಗೆ ಮುಗಿಬಿದ್ದರು. ಕಾರ್ಮಿಕರನ್ನು ನಿಯಂತ್ರಿಸಲು ಅಧಿಕಾರಿಗಳು ಹರಸಾಹಸಪಟ್ಟರು.
ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ವಿನುತಾ, ಪೌರಾಯುಕ್ತ ಹನುಮಂತರಾಜು, ನಗರಸಭೆ ಸದಸ್ಯರಾದ ವೆಂಕಟೇಶ್, ಹರೀಶ್ ಇದ್ದರು.