ಮಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ನಗರದ ಹೊರವಲಯದ ಅಡ್ಯಾರ್ನ ವೃದ್ಧರೊಬ್ಬರನ್ನು ಜನವರಿ 30ರಂದು 108 ಆಂಬುಲೆನ್ಸ್ ಸಿಬ್ಬಂದಿ 1.5 ಕಿ.ಮೀ. ದೂರ ಸ್ಟ್ರೆಚರ್ ಮೇಲೆ ಹೊತ್ತು ತಂದು ಆಸ್ಪತ್ರೆಗೆ ಸಾಗಿಸಿದ್ದಾರೆ.
ಪಂಪ್ವೆಲ್ ವೃತ್ತದಲ್ಲಿ ಕರ್ತವ್ಯಕ್ಕೆ ನಿಯೋಜನೆಯಾಗಿರುವ ಆಂಬುಲೆನ್ಸ್ನ ಚಾಲಕ ರಮೇಶ್ ಮತ್ತು ಶುಶ್ರೂಷಕ ರಾಜು ರೋಗಿಯನ್ನು ಹೊತ್ತು ಸಾಗಿಸಿದ ಸಿಬ್ಬಂದಿ. ಅವರ ಕೆಲಸಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
ಜ.30ರಂದು ಇಬ್ಬರೂ ಆಂಬುಲೆನ್ಸ್ನೊಂದಿಗೆ ಪಂಪ್ವೆಲ್ ವೃತ್ತದಲ್ಲಿದ್ದರು. ಅಡ್ಯಾರ್ ಗ್ರಾಮದ ವೃದ್ಧರೊಬ್ಬರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆತರಬೇಕೆಂಬ ಸೂಚನೆ ಅವರಿದ್ದ ಆಂಬುಲೆನ್ಸ್ಗೆ ಬಂತು. ಸ್ಥಳಕ್ಕೆ ತೆರಳಿದಾಗ ಆಂಬುಲೆನ್ಸ್ ರೋಗಿಯ ಮನೆಗೆ ತಲುಪಲು ದಾರಿ ಇರಲಿಲ್ಲ.
ರಸ್ತೆಯಲ್ಲಿ ಆಂಬುಲೆನ್ಸ್ ನಿಲ್ಲಿಸಿದ ಸಿಬ್ಬಂದಿ ರೋಗಿಯನ್ನು ಸ್ಟ್ರೆಚರ್ ಮೇಲೆ ಮಲಗಿಸಿ 1.5 ಕಿ.ಮೀ. ಹೊತ್ತು ತಂದಿದ್ದಾರೆ. ಬಳಿಕ ಆಂಬುಲೆನ್ಸ್ ನೆರವಿನಲ್ಲಿ ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ.