ಮಂಗಳೂರು: ಬೆಳ್ತಂಗಡಿ ತಾಲ್ಲೂಕಿನ ಕಲ್ಮಂಜ ಗ್ರಾಮದ ನಿಡ್ಗಲ್ ಬಳಿ ಮಜಲು ಎಂಬಲ್ಲಿ ಶುಕ್ರವಾರ ಸತ್ತು ಬಿದ್ದ ಎರಡು ಹದ್ದುಗಳು ಪತ್ತೆಯಾಗಿದ್ದು, ಹಕ್ಕಿಜ್ವರದ ಆತಂಕ ಎದುರಾಗಿದೆ.
ಗೋಪಾಲ ಮಡಿವಾಳ ಮತ್ತು ಶೇಖರ ಮಡವಾಳ ಅವರ ಗದ್ದೆಯಲ್ಲಿ ಹದ್ದುಗಳು ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿವೆ. 3 ದಿನಗಳ ಹಿಂದೆ ಎರಡು ಹದ್ದುಗಳು ಸತ್ತಿರಬಹುದು. ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು, ಪರೀಕ್ಷೆಗೆ ಮಾದರಿ ಸಂಗ್ರಹಿಸಲು ಅಸಾಧ್ಯವಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕಲಾಮಧು ತಿಳಿಸಿದ್ದಾರೆ.
‘ತೆಂಗಿನ ಮರಗಳಲ್ಲಿ ಹದ್ದುಗಳು ಗೂಡು ಕಟ್ಟಿರುವುದರಿಂದ ಈ ಪ್ರದೇಶದಲ್ಲಿ ಹೆಚ್ಚಾಗಿ ವಾಸಿಸುತ್ತಿವೆ. ಹಕ್ಕಿಜ್ವರದಿಂದ ಸತ್ತಿವೆಯೋ ಅಥವಾ ಘರ್ಷಣೆಯಿಂದ ಮೃತಪಟ್ಟಿವೆಯೋ ಎಂಬುದನ್ನು ಪತ್ತೆ ಮಾಡಬೇಕಾಗಿದೆ. ಸಮೀಪದ 25 ಮನೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಮನೆ ಮಂದಿಯಲ್ಲಿ ಜ್ವರದ ಲಕ್ಷಣ ಇದೆಯೇ ಎಂಬುದನ್ನು ಪರೀಕ್ಷಿಸಲಾಗುವುದು’ ಎಂದು ಹೇಳಿದ್ದಾರೆ.
ಕೇರಳ ಕುಕ್ಕುಟ ನಿರ್ಬಂಧ: ಪಕ್ಕದ ಕೇರಳದಲ್ಲಿ ಹಕ್ಕಿಜ್ವರ ಖಚಿತವಾಗಿದ್ದು, ಅಲ್ಲಿಂದ ಜಿಲ್ಲೆಗೆ ಬರುವ ಕುಕ್ಕುಟ ಮತ್ತು ಕುಕ್ಕುಟ ಉತ್ಪನ್ನಗಳಿಗೆ ನಿರ್ಬಂಧ ವಿಧಿಸುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲೆಯಿಂದ ಸಾಗಿರುವ ಕುಕ್ಕಟ ಮತ್ತು ಕುಕ್ಕುಟ ಉತ್ಪನ್ನಗಳ ವಾಹನಗಳನ್ನು ಗಡಿಭಾಗದಲ್ಲಿ ರಾಸಾಯನಿಕಗಳಿಂದ ಸ್ವಚ್ಛಗೊಳಿಸಬೇಕು ಎಂದು ಸೂಚಿಸಿದ್ದಾರೆ.