ಮಂಗಳೂರು: ಉಡುಪಿ ಜಿಲ್ಲೆಯ ಕಾಪು ಲೈಟ್ ಹೌಸ್ ಬಳಿ ಸಮದ್ರದ ಮಧ್ಯೆ ಬಂಡೆಯಲ್ಲಿ ಸಿಲುಕಿರುವ ಟಗ್ನಲ್ಲಿರುವ ಸಿಬ್ಬಂದಿಗಳ ರಕ್ಷಣೆಗೆ ಮಹತ್ವದ ಕಾರ್ಯಾಚರಣೆ ನಡೆಸಲು ನೌಕಾಪಡೆ ಸಜ್ಜಾಗಿದೆ.
ಕೊಚ್ಚಿನ್ನಿಂದ ನೌಕಾಪಡೆಯ ಹೆಲಿಕಾಪ್ಟರ್ ಸೋಮವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಕರಾವಳಿ ಕಾವಲು ಪಡೆ ಮತ್ತು ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ನೌಕಾಪಡೆಯ ಅಧಿಕಾರಿಗಳು ಮಾಹಿತಿ ಪಡೆಯುತ್ತಿದ್ದಾರೆ.
ಎನ್ಎಂಪಿಟಿ ಬಂದರಿನ ಹೊರವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಟಗ್ ಚಂಡಮಾರುತದ ಪರಿಣಾಮ ಆ್ಯಂಕರ್ ತುಂಡಾಗಿ ಕಾಪು ಬಳಿಯಲ್ಲಿ ಅಪಘಾತಕ್ಕೀಡಾಗಿದೆ.
ಕೋರಮಂಡಲ ಎಕ್ಸ್ಪ್ರೆಸ್ ಟಗ್ನ 9 ಮಂದಿ ಸಿಬ್ಬಂದಿ ರಕ್ಷಣೆಯ ನಿರೀಕ್ಷೆಯಲ್ಲಿದ್ದಾರೆ.
ಶುಕ್ರವಾರ ಬೆಳಗ್ಗೆ 11.30 ರಿಂದ ಕಡಲಲ್ಲಿ ತೇಲುತ್ತಿರುವ ಕೋರಮಂಡಲ ಎಕ್ಸ್ಪ್ರೆಸ್ ಟಗ್ ಶನಿವಾರ ಬೆಳಗ್ಗೆ 8.30 ಕ್ಕೆ ಕಾಪು ಲೈಟ್ ಬಳಿಯಿಂದ ಸುಮಾರು ಹದಿನೈದು ಕಿಲೋ ಮೀಟರ್ ದೂರದ ಕಾಪು ಪಾರ್ ಬಳಿ ಬಂಡೆಗೆ ಡಿಕ್ಕಿ ಹೊಡೆದು ನಿಂತಿರುವುದು ಪತ್ತೆಯಾಗಿತ್ತು.