ಮಂಗಳೂರು: ಫುಟ್ಪಾತ್ ಮೇಲಿನ ಅನಧಿಕೃತ ನಿರ್ಮಾಣಗಳನ್ನು ನಿರಂತರವಾಗಿ ತೆರವುಗೊಳಿಸುವ ಕಾರ್ಯಾಚರಣೆಗಾಗಿ (ಟೈಗರ್) ಮಂಗಳೂರು ಮಹಾನಗರ ಪಾಲಿಕೆ ಉಪ ಆಯುಕ್ತ (ಕಂದಾಯ)ರ ಅಧ್ಯಕ್ಷತೆಯಲ್ಲಿ ‘ವಿಶೇಷ ತೆರವು ಕಾರ್ಯಪಡೆ’ ರಚಿಸಿ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್ ಆದೇಶಿಸಿದ್ದಾರೆ.
ಪಾಲಿಕೆಯ ನಗರ ಯೋಜನೆ, ಕಂದಾಯ ಹಾಗೂ ಆರೋಗ್ಯ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಕಾರ್ಯಪಡೆಯಲ್ಲಿ ಇರಲಿದ್ದಾರೆ. ಮಂಗಳೂರು ಮತ್ತು ಸುರತ್ಕಲ್ ವಲಯಕ್ಕೆ ಪ್ರತ್ಯೇಕ ಎರಡು ತಂಡ ರಚಿಸಿ, ಕಾರ್ಯಾಚರಣೆ ನಡೆಸಲು ಸೂಚಿಸಲಾಗಿದೆ.
ಕಾರ್ಯಾಚರಣೆಯ ಫೋಟೊ ಹಾಗೂ ವಿಡಿಯೊ ಚಿತ್ರೀಕರಣ ನಡೆಸಬೇಕು. ಅಡ್ಡಿ ಪಡಿಸಿದವರ ವಿರುದ್ಧ ಮೊಕದ್ದಮೆ ಹೂಡಲು ಕ್ರಮಕೈಗೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ನಗರದ ಸಂಚಾರ ಸಮಸ್ಯೆಗಳ ಕುರಿತು ಸೋಮವಾರ (ಫೆ.16ರಂದು) ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮೇಯರ್ ದಿವಾಕರ ಪಾಂಡೇಶ್ವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿತ್ತು.
‘ಮಂಗಳೂರು ಹಾಗೂ ಸುರತ್ಕಲ್ ವಲಯಕ್ಕೆ ಪ್ರತ್ಯೇಕವಾಗಿ ತಂಡಗಳನ್ನು ರಚಿಸಿ, ಜನಸಂಚಾರಕ್ಕೆ ಸಮಸ್ಯೆ ಉಂಟಾಗುವ ಸ್ಥಳಗಳಲ್ಲಿ ನಿರಂತರ ಕಾರ್ಯಾಚರಣೆ ನಡೆಸಲಾಗುವುದು. ಪಾರ್ಕಿಂಗ್ ನಿಷೇಧಿತ ಪ್ರದೇಶಗಳನ್ನು ಗುರುತಿಸಲು ಜಂಟಿ ಸಮೀಕ್ಷೆ ನಡೆಸಲಾಗುವುದು. ಈಗಿರುವ ವ್ಯವಸ್ಥೆಯನ್ನು ಮರು ಪರಿಶೀಲಿಸಲಾಗುವುದು’ ಎಂದು ಆಯುಕ್ತರು ತಿಳಿಸಿದ್ದಾರೆ.