ಮಂಗಳೂರು: ‘ದಕ್ಷಿಣ ಕನ್ನಡ ಹಾಳು ಮಾಡಿದ್ದು ಸಾಕು, ಕನಕಪುರ, ಬೆಂಗಳೂರಿನ ನೆಮ್ಮದಿಯನ್ನೂ ಕೆಡಿಸಬೇಡಿ’ ಎಂದು ಶಾಸಕ ಯು.ಟಿ.ಖಾದರ್ ಆರ್ಎಸ್ಎಸ್ ಪ್ರಮುಖ ಡಾ.ಪ್ರಭಾಕರ ಭಟ್ಟ ಕಲ್ಲಡ್ಕ ಅವರಿಗೆ ಟಾಂಗ್ ನೀಡಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕನಕಪುರ ಚಲೋ ಜಾಥಾ’ ಕುರಿತು ಪ್ರತಿಕ್ರಿಯೆ ನೀಡಿದರು.
‘ಕ್ರೈಸ್ತ ಸಂಸ್ಥೆಗಳು ದೇಶದಲ್ಲೇ ಆರೋಗ್ಯ ಮತ್ತು ಶಿಕ್ಷಣದ ಸೇವೆ ನೀಡಿವೆ. ಯಾರೂ ಸ್ಪರ್ಶಿಸದ ಕುಷ್ಠರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಯೇಸು ಕ್ರಿಸ್ತರ ಶಾಂತಿ ಸಂದೇಶದ ಪ್ರಕಾರ ಸೇವೆ ನೀಡಿದ್ದಾರೆ. ಅಂತಹ ಯೇಸು ಅವರ ಪ್ರತಿಮೆ ಕಾನೂನು ಬದ್ಧವಾಗಿ ಪ್ರತಿಷ್ಠಾಪಿಸುವುದರಲ್ಲಿ ತಪ್ಪೇನಿದೆ?’ ಎಂದು ಪ್ರಶ್ನಿಸಿದರು.
‘ಆದರೆ, ಜನರು ಶಾಂತಿ ನೆಮ್ಮದಿಯಿಂದ ಇರುವುದನ್ನು ಸಹಿಸಲಾಗದ ಪ್ರಭಾಕರ ಭಟ್ಟರು, ಅಲ್ಲಿಯೂ ಕೆಡಿಸಲು ಹೋಗಿದ್ದಾರೆ’ ಎಂದು ಟೀಕಿಸಿದರು.
‘ವಸತಿ, ಅಭಿವೃದ್ಧಿ, ನೆರೆ ಪರಿಹಾರ ಸೇರಿದಂತೆ ಹಲವಾರು ಕಾರ್ಯಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ. ಇವುಗಳನ್ನು ವಿಪಕ್ಷಗಳು ಪ್ರಶ್ನಿಸುತ್ತಾರೆ ಎಂದು ಸರ್ಕಾರ ಅಧಿವೇಶನವೇ ಕರೆಯುತ್ತಿಲ್ಲ. ಕೂಡಲೇ ಅಧಿವೇಶನ ನಡೆಸಬೇಕು. ನಿಮ್ಮ ಗೊಂದಲಗಳಿಗೆ ಜನರನ್ನು ಬಲಿ ಹಾಕಬೇಡಿ’ ಎಂದು ಮನವಿ ಮಾಡಿದರು.