ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ಯಶೋವರ್ಮರಿಗೆ ಭಾವಾಭಿವ್ಯಕ್ತಿಯ ನಮನ

ಕಲೆ, ಸಾಹಿತ್ಯ, ಸಂಗೀತದಲ್ಲಿ ಅನುರಣನ, ಚಿತ್ರಕಲಾ ಪ್ರದರ್ಶನ
Published 6 ಡಿಸೆಂಬರ್ 2023, 4:26 IST
Last Updated 6 ಡಿಸೆಂಬರ್ 2023, 4:26 IST
ಅಕ್ಷರ ಗಾತ್ರ

ಮಂಗಳೂರು: ಆಪ್ತರು, ಒಡನಾಡಿಗಳು ಶಿಕ್ಷಣ ತಜ್ಞ ಬಿ. ಯಶೋವರ್ಮ ಅವರ ಗುಣಗಾನ ಮಾಡುತ್ತಿದ್ದರೆ, ‍ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ಅವರ ಒಡನಾಡಿಗಳು, ಸ್ನೇಹಿತರು, ಶಿಷ್ಯರ ಕಂಠ ಉಬ್ಬಿತ್ತು, ಕಣ್ಣು ತೇವಗೊಂಡಿತ್ತು. ಇವಕ್ಕೆಲ್ಲ ಸಾಕ್ಷಿಯಾಗಿದ್ದ ಸೋನಿಯಾ ವರ್ಮ ಅವರು ಉಮ್ಮಳಿಸಿ ಬರುತ್ತಿದ್ದ ಅಳುವನ್ನು ಅದುಮಿಟ್ಟು, ಪತಿಯ ಬಗೆಗಿನ ಹೆಮ್ಮೆಯ ಮಾತುಗಳನ್ನು ಕೇಳಿ ಧನ್ಯತಾಭಾವ ಅನುಭವಿಸುತ್ತಿದ್ದರು.

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿದ್ಯಾಸಂಸ್ಥೆಗಳ ಕಾರ್ಯದರ್ಶಿಯಾಗಿದ್ದ ದಿವಂಗತ ಯಶೋವರ್ಮ ಅವರ ಸ್ಮರಣಾರ್ಥ ಇಲ್ಲಿನ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಂಗಳವಾರ ‘ಯಶೋಭಿವ್ಯಕ್ತಿ’ ಇಡೀ ದಿನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ, ‘ಸಮಚಿತ್ತದ ಸಮದರ್ಶಿಯಾಗಿದ್ದ ಯಶೋವರ್ಮರು ಮೌಲ್ಯಾಧಾರಿತ ಬದುಕು ನಡೆಸಿದವರು. ಯೋಚನೆ ಮತ್ತು ಯೋಜನೆಗಳನ್ನು ಶಿಸ್ತುಬದ್ಧವಾಗಿ ಅನುಷ್ಠಾನಗೊಳಿಸುವ ಬದ್ಧತೆ ಅವರಲ್ಲಿತ್ತು. ಸ್ವಚ್ಛತೆಯೇ ದೇವರು ಎಂದು ನಂಬಿದ್ದ ಅವರು, ಎಸ್‌ಡಿಎಂ ವಿದ್ಯಾಸಂಸ್ಥೆಗಳ ಆವರಣದಲ್ಲಿ ಸ್ವಚ್ಛತೆಗೆ ಪ್ರಾಧಾನ್ಯತೆ ನೀಡಿದ್ದರು. ಸಾಹಿತ್ಯದ ಓದು ಅವರ ಬದುಕಿನ ಭಾಗವಾಗಿತ್ತು’ ಎಂದರು.

ಸಂಸ್ಮರಣ ನುಡಿಗಳನ್ನಾಡಿದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ನಿರಂಜನ ವಾನಳ್ಳಿ ಅವರು, ‘ಚುಂಬಕ ವ್ಯಕ್ತಿತ್ವದ ಯಶೋವರ್ಮರು ಪ್ರತಿಹಂತದಲ್ಲೂ ಹೊಸ ಸೃಷ್ಟಿಯನ್ನು ಕಟ್ಟುತ್ತ ಸಾಗಿದವರು. ಸೂಕ್ಷ್ಮಮತಿಯಾಗಿದ್ದ ಅವರಲ್ಲಿ ಒಳ್ಳೆಯತನ, ಹಾಸ್ಯಪ್ರಜ್ಞೆ, ಕಣ್ತುಂಬ ಕನಸು ಇತ್ತು. ಶೈಕ್ಷಣಿಕ, ಸಾಂಸ್ಕೃತಿಕವಾಗಿ ಬಹುದೊಡ್ಡ ಸಾಧನೆ ಮಾಡಿದವರು’ ಎಂದು ಅಭಿಮಾನದಿಂದ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು. ವಿವಿ ಕಾಲೇಜಿನ ಪ್ರಾಚಾರ್ಯೆ ಅನಸೂಯಾ ರೈ, ಯಶೋವರ್ಮರ ಪತ್ನಿ ಸೋನಿಯಾ ವರ್ಮ ಇದ್ದರು. ಕನ್ನಡ ಉಪನ್ಯಾಸಕ ಮಾಧವ ಎಂ.ಕೆ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ನಿರೂಪಿಸಿದರು. ವಿಕಾಸದಾಸ್ ವಂದಿಸಿದರು. ‌

ಕನ್ನಡ ಸಾಹಿತ್ಯ ಪರಿಷತ್ತು, ವಿವಿ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಲಾಸ್ ನಾಯಕ್ ಅವರ ಚಿತ್ರಕಲೆ ಪ್ರದರ್ಶನಗೊಂಡಿತು.

ಮಂಗಳೂರಿನ ರವೀಂದ್ರ ಕಲಾ ಭವನದಲ್ಲಿ ನಡೆದ ಬಿ. ಯಶೋವರ್ಮ ಸಂಸ್ಮರಣೆ ‘ಯಶೋಭಿವ್ಯಕ್ತಿ’ ಕಾರ್ಯಕ್ರಮದಲ್ಲಿ ಡಾ. ಮೋಹನ ಆಳ್ವ ಮಾತನಾಡಿದರು – ಪ್ರಜಾವಾಣಿ ಚಿತ್ರ
ಮಂಗಳೂರಿನ ರವೀಂದ್ರ ಕಲಾ ಭವನದಲ್ಲಿ ನಡೆದ ಬಿ. ಯಶೋವರ್ಮ ಸಂಸ್ಮರಣೆ ‘ಯಶೋಭಿವ್ಯಕ್ತಿ’ ಕಾರ್ಯಕ್ರಮದಲ್ಲಿ ಡಾ. ಮೋಹನ ಆಳ್ವ ಮಾತನಾಡಿದರು – ಪ್ರಜಾವಾಣಿ ಚಿತ್ರ

ಚಿತ್ರದಲ್ಲಿ ಮೂಡಿದ ಯಶೋವರ್ಮರು

ಕವಿಗೋಷ್ಠಿ ಚಿತ್ರಕಲೆಯಲ್ಲೂ ಯಶೋವರ್ಮರು ಮೂಡಿಬಂದರು. ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿಗಳಿಂದ ಅವರ ಸಾಧನೆ ಸಾಹಿತ್ಯಾಭಿರುಚಿ ಕುರಿತ ರಂಗ ಪ್ರಸ್ತುತಿ ಪ್ರದರ್ಶನಗೊಂಡಿತು. ಎಲ್ಲೆಲ್ಲೂ ಯಶೋವರ್ಮರ ನೆನಪಿನ ಕಂಪು ಹರಡಿತು.

ಜೀವನದ ಚಿಕ್ಕ ಸಂಗತಿಗಳಲ್ಲೂ ದೊಡ್ಡ ಖುಷಿಯನ್ನು ಕಾಣುತ್ತಿದ್ದ ಯಶೋಮಾಮ ನಮಗೆಲ್ಲ ಆಕಾಶದಂತೆ ನೆರಳಾಗಿದ್ದರು.
-ಶ್ರದ್ಧಾ ಅಮಿತ್, ಬೆಂಗಳೂರು ಕ್ಷೇಮವನದ ನಿರ್ದೇಶಕಿ
ವಿಜ್ಞಾನದ ಪ್ರಾಧ್ಯಾಪಕರಾಗಿದ್ದ ಯಶೋವರ್ಮರ ಅದ್ಭುತವಾದ ಕನ್ನಡ ಶೈಲಿಯ ಮಾತು ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತಿತ್ತು.
-ಸತೀಶ್ಚಂದ್ರ ಎಸ್, ಎಸ್‌ಡಿಎಂ ಎಜುಕೇಷನಲ್ ಸೊಸೈಟಿ ಕಾರ್ಯದರ್ಶಿ
ನಮ್ಮ ಮನೆಗೆ ಬರುವ ಅಪ್ಪನ ಶಿಷ್ಯರು ಈಗಲೂ ಅವರನ್ನು ನೆನಪಿಸಿಕೊಂಡು ಭಾವುಕರಾಗುತ್ತಾರೆ. ವಿದ್ಯಾರ್ಥಿಗಳನ್ನು ಅವರು ಅಷ್ಟು ಪ್ರೀತಿಸುತ್ತಿದ್ದರು.
-ಪೂರನ್ ವರ್ಮ, ಎಸ್‌ಡಿಎಂ ಐಟಿ ವಸತಿ ನಿಲಯಗಳ ಆಡಳಿತ ವಿಭಾಗದ ಸಿಇಒ
ಆಡಳಿತ ನಿಪುಣರಾಗಿದ್ದ ಯಶೋವರ್ಮರು ಯಾವ ಸಾಹಿತಿಗೂ ಕಡಿಮೆಯಿಲ್ಲದಷ್ಟು ಸಾಹಿತ್ಯಿಕ ಜ್ಞಾನ ಹೊಂದಿದ್ದರು. ಅವರ ಪದಕೋಶ ಬೆರಗುಗೊಳಿಸುತ್ತಿತ್ತು.
-ಪ್ರೊ. ಪಿ.ಎಲ್. ಧರ್ಮ ವಿವಿ ಪ್ರಾಧ್ಯಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT