ದಾವಣಗೆರೆ: ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಾಲತೇಶ್ ಜಾಧವ್ ಅವರ ಕಟ್ಟಡದಲ್ಲಿ ದಾಸ್ತಾನು ಮಾಡಿದ್ದ ತಲಾ ₹ 2,790 ಮುಖಬೆಲೆಯ, ಅಡುಗೆ ತಯಾರಿಸುವ ಪಾತ್ರೆಗಳನ್ನು ಒಳಗೊಂಡ ಒಟ್ಟು 597 ಪೆಟ್ಟಿಗೆಗಳನ್ನು ಸಹಾಯಕ ಚುನಾವಣಾಧಿಕಾರಿ ಬಿ.ಎಂ. ಮಾನೆ ನೇತೃತ್ವದ ತಂಡ ವಶಪಡಿಸಿಕೊಂಡಿದೆ.
ಮತದಾರರಿಗೆ ಹಂಚಲೆಂದೇ ಈ ವಸ್ತುಗಳನ್ನು ಗೋದಾಮಿನಲ್ಲಿ ದಾಸ್ತಾನು ಮಾಡಲಾಗಿತ್ತು ಎಂದು ಆರೋಪಿಸಿ ದೂರು ನೀಡಿರುವ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.
‘ಎಸ್.ಎಸ್ ಮತ್ತು ಎಸ್.ಎಸ್.ಎಂ ಅಭಿಮಾನಿ ಬಳಗ’ ಎಂಬ ಒಕ್ಕಣೆ ಇರುವ ಸ್ಟಿಕ್ಕರ್ಗಳನ್ನು ಬಾಕ್ಸ್ ಮೇಲೆ ಅಂಟಿಸಲಾಗಿದೆ. ರಟ್ಟಿನ ಪೆಟ್ಟಿಗೆಗಳಲ್ಲಿ ಕಡಾಯಿ, ಬಾಣಲೆ, ಊಟದ ಡಬ್ಬಿ ಮತ್ತಿತರ ವಸ್ತುಗಳಿವೆ. ಈ ಕುರಿತು ಮಾಲತೇಶ್ ಜಾಧವ್ ವಿರುದ್ಧ ಗಾಂಧಿನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
‘ನಮ್ಮ ಬಡಾವಣೆಯಲ್ಲಿ ಅಡುಗೆ ತಯಾರಿಸುವ ಪಾತ್ರೆ– ಪಗಡಗಳಿರುವ ರಟ್ಟಿನ ಡಬ್ಬಿಗಳನ್ನು ಮನೆಮನೆಗೆ ತೆರಳಿ ಹಂಚುತ್ತಿರುವ ಪಾಲಿಕೆ ಸದಸ್ಯ ಅಬ್ದುಲ್ ಲತೀಫ್ ಹಾಗೂ ಜಬೀವುಲ್ಲಾ ಎಂಬುವವರು ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ’ ಎಂದು ಇಲ್ಲಿನ ಕೆಟಿಜೆ ನಗರದ ನಿವಾಸಿಯಾದ ವಾಜಿದ್ ಸೈಯ್ಯದ್ ಮಕಬೂಲ್ ಎಂಬುವವರು ಸ್ಥಳೀಯ ಕೆ.ಟಿ.ಜೆ. ಪೊಲೀಸ್ ಠಾಣೆಯಲ್ಲಿ ಶನಿವಾರ ರಾತ್ರಿ ದೂರು ನೀಡಿದ್ದಾರೆ.