ಹುಬ್ಬಳ್ಳಿ: ಎಐಎಂಐಎಂ ಪಕ್ಷದ ನಾಯಕ ಅಸಾದುದ್ದೀನ್ ಒವೈಸಿ ನಗರದಲ್ಲಿ ಭಾನುವಾರ ಪಾದಯಾತ್ರೆ ನಡೆಸಿ, ಪಕ್ಷದ ಹುಬ್ಬಳ್ಳಿ– ಧಾರವಾಡ ಪೂರ್ವ ಕ್ಷೇತ್ರದ ಅಭ್ಯರ್ಥಿ ದುರ್ಗಪ್ಪ ಬಿಜವಾಡ ಪರವಾಗಿ ಮತಯಾಚನೆ ಮಾಡಿದರು.
ಬೆಳಿಗ್ಗೆ 11.15ರ ಸುಮಾರಿಗೆ ಇಂಡಿ ಪಂಪ್ ವೃತ್ತದಲ್ಲಿರುವ ಹಜರತ್ ಸಯ್ಯದ್ ಫತೇಶಾವಲಿ ದರ್ಗಾಕ್ಕೆ ಚಾದರ್ ಸಮರ್ಪಿಸಿ ಪ್ರಾರ್ಥನೆ ಮಾಡಿದ ಒವೈಸಿ, ಅಲ್ಲಿಂದ ಪಾದಯಾತ್ರೆ ಆರಂಭಿಸಿದರು.
ಕೃಷ್ಣಾಪುರ ಓಣಿ, ಸದರ ಸೋಫಾ, ಪಠಾಣ ಗಲ್ಲಿ, ಯಲ್ಲಾಪುರ ಓಣಿ ಸೇರಿದಂತೆ ಮುಸ್ಲಿಂ ಸಮುದಾಯದವರು ಹೆಚ್ಚಾಗಿರುವ ಹಳೇ ಹುಬ್ಬಳ್ಳಿಯ ವಿವಿಧೆಡೆ ಪಾದಯಾತ್ರೆ ಮಾಡಿದರು. ಅಲ್ಲಲ್ಲಿ ಮತದಾರರನ್ನು ಭೇಟಿ ಮಾಡಿ, ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದರು.
ಮಾರ್ಗದುದ್ದಕ್ಕೂ ಪಕ್ಷದ ಕಾರ್ಯಕರ್ತರು ಹಾಗೂ ಯುವ ಅಭಿಮಾನಿಗಳು ಒವೈಸಿ ಅವರೊಂದಿಗೆ ಹೆಜ್ಜೆ ಹಾಕಿದರು. ಪಕ್ಷದ ಚಿಹ್ನೆ ‘ಗಾಳಿಪಟ’ವನ್ನು ಪ್ರದರ್ಶಿಸಿದರು. ‘ಕೌನ್ ಆಯಾ, ಕೌನ್ ಆಯಾ... ಶೇರ್ ಆಯಾ, ಶೇರ್ ಆಯಾ’ ಎಂದು ಒವೈಸಿ ಮತ್ತು ಪಕ್ಷದ ಪರ ಘೋಷಣೆಗಳನ್ನು ಕೂಗಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಇಂಡಿ ಪಂಪ್ ವೃತ್ತದಿಂದ ಪಾದಯಾತ್ರೆ ನಡೆದ ಮಾರ್ಗದಾದ್ಯಂತ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು.